ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಶುಕ್ರವಾರ (ಆ.14) ಸುರಿದ ಭಾರಿ ಮಳೆಗೆ ಹಲವಡೆ ಭೂ ಕುಸಿತ, ಪ್ರವಾಹ ಉಂಟಾಗಿದೆ. ಈ ಘಟನೆಯಲ್ಲಿ 4ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದಾರೆ. 5ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆಗೆ ಅಪ್ಪರ್ ಸುಬನ್ ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಗುಡ್ಡ ಕುಸಿತ ಸಂಭವಿಸಿದ ಪರಿಣಾಮ ಅನೇಕರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಿಬಾಂಗ್ ಸುತ್ತಮುತ್ತ ಉಂಟಾದ ಪ್ರವಾಹದಲ್ಲಿ ಎರಡು ಕಾಳಜಿ ಕೇಂದ್ರಗಳು ಕೊಚ್ಚಿ ಹೋಗಿವೆ. ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ 7 ಸೇನಾ ಸಿಬ್ಬಂದಿಯಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ಇನ್ನುಳಿದ ಐದು ಜನರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಈವರೆಗೂ ಸಂಭವಿಸಿದ ಭೂಕುಸಿತ, ಪ್ರವಾಹದಲ್ಲಿ ಸುಮಾರು 235ಕ್ಕೂ ರಸ್ತೆಗಳು, 40ಕ್ಕೂ ಹೆಚ್ಚು ಸೇತುವೆ, 373 ನೀರು ಸರಬರಾಜು ಮಂಡಳಿ, 823 ವಿದ್ಯುತ್ ಕಂಬಗಳು, 122 ಸರ್ಕಾರಿ ಕಟ್ಟಡಗಳು, 41 ಶಾಲೆಗಳು, 12 ಜಲವಿದ್ಯುತ್ ಯೋಜನೆಗಳು, 26 ತಡೆಗೋಡೆಗಳಿಗೆ ಹಾನಿಯಾಗಿವೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.

