ಕಾಸರಗೋಡು: ಹಲವು ಆಯುರ್ವೇದ ಔಷಧೀಯ ಗುಣ ಒಳಗೊಂಡಿರುವ ಕರ್ಕಟಕ ಮಾಸದ ಔಷಧ "ಅಮೃತಂ ಗಂಜಿ ಫೆಸ್ಟ್" ಕಾಸರಗೋಡು ಸಿವಿಲ್ ಸ್ಟೇಷನ್ ಕಾಂಪೌಂಡ್ನಲ್ಲಿ ಆಯೋಜಿಸಲಾಗಿತ್ತು. ಕುಟುಂಬ ಶ್ರೀ ಜಿಲ್ಲಾ ಮಿಷನ್ ಕರ್ಕಾಟಕ ಗಂಜಿ ಫೆಸ್ಟ್ ಆಯೋಜಿಸಿತ್ತು.
ಆಟಿ ತಿಂಗಳ ಔಷಧ ಭರಿತ ಗಂಜಿ ಉತ್ಸವವನ್ನು ಶಾಸಕ ಕಲ್ಲುಟ್ರ ಮಾಹಿನ್ ಉದ್ಘಾಟಿಸಿದರು. ಚೆಂಗಳ ಗ್ರಾ. ಪಂ. ಅಧ್ಯಕ್ಷ ವಸಂತ ಅಜಕೋಡು ಅಧ್ಯಕ್ಷತೆ ವಹಿಸಿದ್ದರು. ಹವಾಮಾನ ವೈಪರೀತ್ಯದಿಂದ ಕರ್ಕಾಟಕ ಮಾಸದಲ್ಲಿ ಉಂಟಾಗುವ ಶಾರೀರಿಕ ಪಲ್ಲಟಗಳಿಗೆ ಪರಿಹಾರವಾಗಿ ಪ್ರಕೃತಿ ದತ್ತ ಔಷಧೀಯ ವಸ್ತುಗಳನ್ನು ಸೇರಿಸಿ ಔಷಧಯುಕ್ತ ಗಂಜಿಯನ್ನು ಉಣ್ಣುವುದು ಕೇರಳದ ಪ್ರಾಚೀನ ಪದ್ಧತಿಯಾಗಿದೆ. ವರ್ಷಕ್ಕೊಮ್ಮೆ ಈ ಅವಧಿಯಲ್ಲಿ ಕರ್ಕಾಟಕ ಗಂಜಿ ಸೇವನೆಯಿಂದ ಶರೀರಕ್ಕೆ ಪೌಷ್ಟಿಕಾಹಾರ ಲಭಿಸುವುದರ ಜತೆಗೆ ರೋಗ ಪ್ರತಿರೋಧ ಶಕ್ತಿ ವರ್ಧಿಸಿಕೊಳ್ಳಲೂ ಸಾಧ್ಯವಾಗಲಿದೆ. ಇದೇ ಕಾರಣಕ್ಕಾಗಿ ಆಟಿ ಗಂಜಿ ಜನಪ್ರಿಯವಾಗಿದೆ. ಕೇರಳದ ವಿಶೇಷ ತಳಿಯ ಅಕ್ಕಿಯಿಂದ ಮಾಡಿದ ಗಂಜಿಗೆ ಸುಗಂಧ ವಸ್ತುಗಳು ಮತ್ತು ಔಷಧೀಯ ಗುಣವುಳ್ಳ ಸಸ್ಯಗಳು, ಬೇರುಗಳನ್ನು ಬಳಸಿ ಈ ಗಂಜಿ ತಯಾರಿಸಲಾಗುತ್ತದೆ. ಗಂಜಿ ಸೇವನೆ ಮತ್ತು ಇದರ ಪ್ರಯೋಜನ, ಪರಿಣಾಮಗಳ ಕುರಿತು ಕಾರ್ಯಕ್ರಮದಲ್ಲಿ ವಿವರಿಸಲಾಯಿತು.
ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಅಬ್ದುಲ್ಲಕುಞÂ ಚೆರ್ಕಳ, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್, ನಗರ ಸಭಾ ಅಧ್ಯಕ್ಷೆ ಸಾಹಿನ ಸಲೀಂ, ವಿವಿಧ ಗ್ರಾ. ಪಂ. ಅಧ್ಯಕ್ಷರು, ಕುಟುಂಬಶ್ರೀ ಜಿಲ್ಲಾ ಘಟಕದ ಪ್ರತಿನಿಧಿಗಳು ಉಪಸ್ಥಿತರಿದ್ದರು.



