ತ್ರಿಶೂರ್: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗೈರು ಹಾಜಾರಾದ ವಿದ್ಯಾರ್ಥಿಗಳನ್ನು ''ನೀವು ಪಾಕಿಸ್ತಾನಕ್ಕೆ ಹೋಗಿ, ನೀವು ಭಾರತದಲ್ಲಿ ಇರಲು ಅರ್ಹರಲ್ಲ'' ಎಂದು ಹೇಳುವ ಮೂಲಕ ಕೇರಳಂನ ತ್ರಿಶೂರ್ನಲ್ಲಿರುವ ಶಾಲೆಯೊಂದರ ಮಾಲಕರು ವಿವಾದ ಸೃಷ್ಟಿಸಿದ್ದಾರೆ.
ತ್ರಿಶೂರ್ನ ಮಲಾದಲ್ಲಿರುವ ಡಾ. ರಾಜು ಡೇವಿಸ್ ಇಂಟರ್ ನ್ಯಾಷನಲ್ ಶಾಲೆಯ ಮಾಲಕರಾದ ಡಾ. ರಾಜು ಡೇವಿಸ್ ಈ ಹೇಳಿಕೆ ನೀಡಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಅರ್ಧಕ್ಕಿಂತ ಹೆಚ್ಚು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ ಎಂದು ತಿಳಿದ ಬಳಿಕ ವ್ಯಾಟ್ಸ್ ಆಯಪ್ ಗುಂಪುಗಳಲ್ಲಿ ಅವರು ಈ ಹೇಳಿಕೆ ಹಂಚಿಕೊಂಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳನ್ನು ಕರೆತರಲು ಎಲ್ಲಾ ಮಾರ್ಗಗಳಲ್ಲಿ ಬಸ್ಗಳನ್ನು ವ್ಯವಸ್ಥೆ ಮಾಡಲು ತಾನು ಹೆಚ್ಚುವರಿಯಾಗಿ 1 ಲಕ್ಷ ರೂ. ಖರ್ಚು ಮಾಡಿದ್ದೆ. ಆದರೆ, ಅನೇಕ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಿಲ್ಲ ಎಂದು ಡೇವಿಸ್ ಹೇಳಿದ್ದಾರೆ.
''ನಾನು ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮವನ್ನು ಆಯೋಜಿಸಿದೆ ಹಣವನ್ನು ಕಿಸೆಯಲ್ಲಿ ಇರಿಸಬಹುದಿತ್ತು. ಆದರೆ, ಸ್ವಾತಂತ್ರೋತ್ಸವದ ಮಹತ್ವವನ್ನು ನಮ್ಮ ಮಕ್ಕಳು ತಿಳಿದುಕೊಳ್ಳಬೇಕೆಂದು ಬಯಸಿದ್ದರಿಂದ ಹಾಗೆ ಮಾಡಲಿಲ್ಲ'' ಎಂದು ಅವರು ವ್ಯಾಟ್ಸ್ ಆಯಪ್ ಸಂದೇಶದಲ್ಲಿ ತಿಳಿಸಿದ್ದಾರೆ.
ಅನಂತರ ''ನನ್ನ ಸಂದೇಶವನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ನಾನು ಹೇಳಿದೆ. ಮಕ್ಕಳನ್ನು ಇಂತಹ ಕಾರ್ಯಕ್ರಮಕ್ಕೆ ಕಳುಹಿಸುವುದು ಪೋಷಕರ ಜವಾಬ್ದಾರಿ. ಹಾಜರಾಗದವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ನಾನು ಹೇಳಿದೆ'' ಎಂದು ಡೇವಿಸ್ ಅಡಿಯೊ ಒಂದರಲ್ಲಿ ತಿಳಿಸಿದ್ದಾರೆ.
ಡೇವಿಸ್ ಅವರು ಈ ಹೇಳಿಕೆಯ ಹಿನ್ನೆಲೆಯಲ್ಲಿ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ) ಮತ್ತು ಕಾಂಗ್ರೆಸ್ ವಿದ್ಯಾರ್ಥಿ ವಿಭಾಗವಾದ ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್ಯು) ಪ್ರತಿಭಟನೆ ನಡೆಸಿದವು. ಕೆಎಸ್ಯು ಕಾರ್ಯಕರ್ತರು ಡಾ.ರಾಜು ಡೇವಿಸ್ ಅವರ ನಿವಾಸದ ಮುಂದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ರಸ್ತೆ ತಡೆ ನಡೆಸಿದ ಕೆಎಸ್ಯು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.
ಡೇವಿಸ್ ಅವರು ಅನಂತರ ಹೇಳಿಕೆಗಳಿಗೆ ಕ್ಷಮೆಯಾಚಿಸಿ ಮತ್ತೊಂದು ಆಡಿಯೋ ಸಂದೇಶ ಕಳುಹಿಸಿದರು.

