ಕಾಸರಗೋಡು: ದೇಶದ ಸ್ವಾತಂತ್ರ್ಯ ಚಳವಳಿಗೆ ಮಹತ್ವದ ತಿರುವು ತಂದುಕೊಟ್ಟಿದ್ದ ವಂದೇ ಮಾತರಂ ಪೂರ್ಣರೂಪದ ಹಾಡಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕೇರಳ ಸರ್ಕಾರದ ಧೋರಣೆ, ಪ್ರತ್ಯೇಕತಾವಾದಿಗಳಿಗೆ ಹಾದಿಮಾಡಿಕೊಟ್ಟಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಹೇಳಿದ್ದಾರೆ.
ಅವರು ಕಾಸರಗೋಡಿನ ಹೊಸ ಬಸ್ ನಿಲ್ದಾಣದ ಬಳಿ ಭಾರತೀಯ ಜನತಾ ಪಕ್ಷದ ಕಾಸರಗೋಡು ಜಿಲ್ಲಾ ಸಮಿತಿ ಆಯೋಜಿಸಿದ್ದ 'ವಂದೇ ಮಾತರಂ ಸಭೆ'ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಸ್ಲಿಂ ಲೀಗ್ ಮತ್ತು ಜಮಾತ್-ಎ-ಇಸ್ಲಾಮಿಯ ರಾಷ್ಟ್ರವಿರೋಧಿ ಅಜೆಂಡಾಗಳಿಗೆ ಮಣಿದಿರುವ ವಿ.ಡಿ. ಸತೀಶನ್ ನೇತೃತ್ವದ ಸರ್ಕಾರದ ಕ್ರಮ ಕಳವಳಕಾರಿಯಾಗಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ವಂದೇಮಾತರಂ ಮೇಲಿಲ್ಲದ ನಿಷೇಧವನ್ನು ಇಲ್ಲಿ ಹೇರುವ ಮೂಲಕ, ಕೇರಳವನ್ನು ಭಾರತದ ಉಳಿದ ಭಾಗಗಳಿಂದ ಬೇರ್ಪಡಿಸುವ ಸಂಚು ನಡೆಯುತ್ತಿರುವ ಶಂಕೆಯನ್ನು ಹುಟ್ಟುಹಾಕುತ್ತದೆ. ರಾಜ್ಯದ ಸಚಿವ ಕೆ.ಎಂ. ಶಾಜಿ ಅವgರು 'ಪಿಎಂ-ಶ್ರೀ'ಯೋಜನೆಯನ್ನು ಅರಬೀ ಸಮುದ್ರದ ಆಚೆಗಿನ ಚರಂಡಿಗೆ ಎಸೆಯುವಂತೆ ಕರೆ ನೀಡಿರುವುದು ವಿಪರ್ಯಾಸ. ಪಿಎಂಶ್ರೀ ಯೋಜನೆ ಕೈತಪ್ಪುವುದರಿಂದ ಶಾಜಿ ಅವರಂತಹ ಶ್ರೀಮಂತರಿಗೆ ಸಮಸ್ಯೆಯಾಗದು. ಸಾವಿರಾರು ಮಂದಿ ಬಡ ಜನತೆ ಇದರಿಂದ ಕಂಗಾಲಾಗಲಿದ್ದಾರೆ. ಈ ವಿಷಯವನ್ನು ಗಮನಕ್ಕೆ ತಂದಿದ್ದರೂ, ಮುಖ್ಯಮಂತ್ರಿ ಅಥವಾ ಶಿಕ್ಷಣ ಸಚಿವರಾಗಲಿ, ಸಹೋದ್ಯೋಗಿಯೊಬ್ಬರ ಈ ಹೇಳಿಕೆಯನ್ನು ಅಲ್ಲಗಳೆಯಲು ತಯಾರಾಗಿಲ್ಲ. ಕೆ.ಎಂ. ಶಾಜಿ ಅವರು ವಿದೇಶಕ್ಕೆ ತೆರಳಿ, ಧರ್ಮವನ್ನೇ ಪ್ರಮುಖ ವಿಷಯವನ್ನಾಗಿಸಿ ಕೋಮು ಪ್ರಚೋದಕ ಭಾಷಣ ಮಾಡಿದ್ದನ್ನೂ ನಾವು ಕಂಡಿದ್ದೇವೆ. ಅಭಿವೃದ್ಧಿ ವಿರೋಧಿ ನಿಲುವು ಮತ್ತು ವಿಭಜನೆಯ ರಾಜಕಾರಣವು ಎರಡೂ ಮೈತ್ರಿಕೂಟಗಳ ಲಕ್ಷಣಗಳಾಗಿದೆ. ಭಾರತವನ್ನು ವಿಭಜಿಸಲು ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಮತ್ತೊಮ್ಮೆ ಒಂದಾಗುತ್ತಿದ್ದು, ದೇಶಭಕ್ತರು ಇದರ ವಿರುದ್ಧ ಪ್ರತಿಭಟನೆ ನಡೆಸಬೇಕಾಗಿದೆ ಎಂದು ತಿಳಿಸಿದರು.
ಬಿಜೆಪಿ ಕರ್ನಾಟಕ ಕಾನೂನು ಘಟಕದ ಸದಸ್ಯೆ, ವಕೀಲೆ ಸಹನಾ ಕುಂದರ್ ಮುಖ್ಯ ಭಾಷಣ ಮಾಡಿ, ವಂದೇ ಮಾತರಂ ಗೀತೆಯನ್ನು ಬದಿಗಿರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಬ್ರಿಟಿಷರ ಒಡೆದುಆಳುವ ನೀತಿಯನ್ನು ಮರುಕಳಿಸುವಂತೆ ಮಾಡುತ್ತಿದೆ. ಧಾರ್ಮಿಕ ಕಾರಣಗಳಿಂದಾಗಿ ವಂದೇ ಮಾತರಂ ಹಾಡಲು ಸಾಧ್ಯವಿಲ್ಲ ಎಂದು ಮುಸ್ಲಿಂ ಸಂಘಟನೆಗಳು ಹೇಳುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಕಾಂಗ್ರೆಸ್ ವಂದೇ ಮಾತರಂ ಮೇಲೆ ನಿಬರ್ಂಧ ಹೇರಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಂಗಾಳ ವಿಭಜನೆಯನ್ನು ವಿರೋಧಿಸಲು ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಹಾಡಿದ ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ಮತ್ತು ವಿ. ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿಷೇಧ ಹೇರಿರುವುದನ್ನು ಒಪ್ಪಲಾಗದು. ಕಾಂಗ್ರೆಸ್ ಭಾರತವನ್ನು ಅತ್ಯಂತ ಅಪಾಯಕಾರಿ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಎಂ.ಎಲ್. ಅಶ್ವಿನಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸವಿತಾ ಟೀಚರ್, ರಾಮಪ್ಪ ಮಂಜೇಶ್ವರ, ಎ. ವೇಲಾಯುಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಮನುಲಾಲ್ ಮೇಲತ್ ಉಪಸ್ಥಿತರಿದ್ದರು.

