ಕಾಸರಗೋಡು: ಓಣಂ ಹಬ್ಬವನ್ನು ಪ್ಲಾಸ್ಟಿಕ್ ಹಾಗೂ ಮಾಲಿನ್ಯ ಮುಕ್ತವಾಗಿ ಆಚರಿಸುವ ಬಗ್ಗೆ 'ಹಸಿರು ಓಣಂ' ಸಂದೇಶ ಸಾರುವ ಉದ್ದೇಶದಿಂದ 'ಶುಚಿತ್ವ ಮಿಷನ್' ಆಯೋಜಿಸಿದ್ದ 'ಮಾವೇಲಿ ಯಾತ್ರೆ'ಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ವಠಾರದಲ್ಲಿ ಚಾಲನೆ ನೀಡಿದರು.
ಹಸಿರು ಸಂದೇಶವನ್ನು ಜನರ ಬಳಿ ತಲುಪಿಸುವ ನಿಟ್ಟಿನಲ್ಲಿ ಮಾವೇಲಿ, ಜಿಲ್ಲಾಧಿಕಾರಿಗಳ ಚೇಂಬರ್, ಸಿವಿಲ್ ಸ್ಟೇಷನ್ ಸಂಕೀರ್ಣದಲ್ಲಿರುವ ವಿವಿಧ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸಂಸ್ಥೆಗಳಿಗೆ ಮತ್ತು ಹಲವು ನಗರ ಪ್ರದೇಶಗಳಿಗೆ ಭೇಟಿ ನೀಡಲಾಯಿತು. ಪರಿಸರ ಸ್ನೇಹಿ ನಿಯಮಾವಳಿ ಪಾಲಿಸುವುದರೊಂದಿಗೆ ಸಮೃದ್ಧಿ ಮತ್ತು ಸ್ವಚ್ಛತೆಯಿಂದ ಕೂಡಿದ ಓಣಂ ಹಬ್ಬವನ್ನು ಆಚರಿಸುವಂತೆ ಎಲ್ಲರಿಗೂ ಕರೆ ನೀಡಲು ಮಾವೇಲಿ ವೇಷಧಾರಿಯನ್ನೊಳಗೊಂಡ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಸ್ಥಳೀಯಾಡಳಿತ ವಿಭಾಗ ಜಂಟಿ ನಿರ್ದೇಶಕ ಕೆ.ವಿ. ಹರಿದಾಸ್, ಜಿಲ್ಲಾ ಸುಚಿತ್ವ ಮಿಷನ್ ಸಂಯೋಜಕ ಪಿ. ಜಯನ್, ಎಲ್ಎಸ್ಜಿಡಿ ಸಹಾಯಕ ನಿರ್ದೇಶಕ ಜೋಸೆಫ್ ಚಾಕೋ , ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿಎಸ್. ಬಿಜು, ಜಾರಿ ತಂಡದ ಮುಖ್ಯಸ್ಥ ಮುಹಮ್ಮದ್ ಮದನಿ, ಲೈಫ್ ಮಿಷನ್ ಜಿಲ್ಲಾ ಸಂಯೋಜಕ ವಲ್ಸನ್, ಬಿ.ಆರ್ಡಿ.ಸಿ. ವ್ಯವಸ್ಥಾಪಕ ಪ್ರಸಾದ್ ಮತ್ತು ಕಿರಿಯ ಅಧೀಕ್ಷಕ ಲೋಕೇಶ್ ಎಂ.ಬಿ. ಆಚಾರ್ಯ ಉಪಸ್ಥಿತರಿದ್ದರು.
ಮಾವೇಲಿ ವೇಷಧಾರಿಯನ್ನೊಳಗೊಂಡ ಯಾತ್ರೆ ಸಂಜೆ ಚೆರುವತ್ತೂರಿನಲ್ಲಿ ಸಮಾರೋಪಗೊಂಡಿತು.



