ಮಂಜೇಶ್ವರ: ಕೇರಳದ ಅತ್ಯಂತ ನೀರಿನ ಕೊರತೆ ಅನುಭವಿಸುವ ಪ್ರದೇಶಗಳಲ್ಲಿ ಒಂದಾದ ಮಂಜೇಶ್ವರದ ಜಲ ದೌರ್ಬಲ್ಯಕ್ಕೆ ಪರಿಹಾರವಾಗಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಯೋಜನೆಯ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿದೆ. ಬ್ಲಾಕ್ ಪಂಚಾಯತಿ ವಾರ್ಷಿಕ ಯೋಜನೆ ರೂಪಿಕರಣದ ಅಂಗವಾಗಿ ನಡೆದ ಅಭಿವೃದ್ಧಿ ವಿಚಾರಗೋಷ್ಠಿಯಲ್ಲಿ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಮುಹಮ್ಮದ್ ಹನೀಫ್ ಅವರು ಮಂಜೇಶ್ವರ ಜನರ ದೀರ್ಘಕಾಲದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು 'ಜೀವಜಲ' ಎಂಬ ಯೋಜನೆಯನ್ನು ಪರಿಚಯಿಸಿದರು.
ಕೇಂದ್ರ ಹಣಕಾಸು ಆಯೋಗದ ನಿಧಿಯನ್ನು ಬಳಸಿ ಯೋಜನೆಯ ಮೊದಲ ಹಂತವಾಗಿ ಈ ವರ್ಷ ಸಾರ್ವಜನಿಕ ಬಾವಿಗಳು, ಕೆರೆಗಳು ಮತ್ತು ಇತರ ಜಲಾಶಯಗಳನ್ನು ಪುನರುಜ್ಜೀವನಗೊಳಿಸಲು 27 ಲಕ್ಷ ರೂ.ಗಳ ಯೋಜನೆ ರೂಪಿಸಲಾಗಿದೆ. ಭೂಗರ್ಭ ಜಲಮಟ್ಟವನ್ನು ಹೆಚ್ಚಿಸುವುದನ್ನು ಒಳಗೊಂಡಂತೆ ಈ ಯೋಜನೆಯನ್ನು ಜನ ಪಾಲ್ಗೊಳ್ಳುವಿಕೆಯಿಂದ ಜಾರಿಗೊಳಿಸುವುದು ಉದ್ದೇಶವಾಗಿದೆ ಎಂದು ಬ್ಲಾಕ್ ಪಂಚಾಯತಿ ಅಧ್ಯಕ್ಷ ಯು. ಕೆ. ಸೈಪುಲ್ಲ ತಂಙಳ್ ಅವರು ವಿಚಾರಗೋಷ್ಠಿ ಉದ್ಘಾಟಿಸಿ ತಿಳಿಸಿದರು.
ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಕಮಲಾಕ್ಷಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬ್ಲಾಕ್ ಪಂಚಾಯತಿ ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಬ್ಲಾಕ್ ಪಂಚಾಯತಿ ಸ್ಥಾಯೀ ಸಮಿತಿ ಸದಸ್ಯರು, ಬ್ಲಾಕ್ ಪಂಚಾಯತಿ ಸದಸ್ಯರು, ಯೋಜನಾ ಸಮಿತಿ ಸದಸ್ಯರು ಮತ್ತು ವಿವಿಧ ಕಾರ್ಯನಿರ್ವಹಣಾ ಅಧಿಕಾರಿಗಳು ಭಾಗವಹಿಸಿದ್ದರು.

.jpg)
.jpg)
