ಛತ್ರಪತಿ ಸಂಭಾಜಿ ನಗರ: 'ದೇಶದಾದ್ಯಂತ ಜನರ ಜೊತೆ ಸಂವಾದ ನಡೆಸಿ, ಅವರ ಸಮಸ್ಯೆ ತಿಳಿದುಕೊಳ್ಳಲು ಮುಂದಿನ ತಿಂಗಳಿನಿಂದ 'ಕಾಕ್ರೋಚ್ ಜನತಾ ಪಕ್ಷ'ವು 'ಕ್ಯಾ ಬೋಲ್ತಿ ಪಬ್ಲಿಕ್' (ಸಾರ್ವಜನಿಕರೇ, ಏನಂತೀರಿ?) ಅಭಿಯಾನ ನಡೆಸಲಿದೆ' ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ತಿಳಿಸಿದ್ದಾರೆ.
ದೀಪ್ಕೆ ತಮ್ಮ ನಿವಾಸದಲ್ಲಿ ಗುರುವಾರ ಸಿಜೆಪಿ ಪ್ರಮುಖರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
'ಅಭಿಯಾನದ ವೇಳೆ ದೇಶದ ಈಗಿನ ಸ್ಥಿತಿಗತಿ ಕುರಿತಂತೆ ಜನರು ಏನು ಯೋಚಿಸುತ್ತಾರೆ, ಅವರು ಯಾವ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
'ವಿದ್ಯಾರ್ಥಿಗಳ ಹೋರಾಟದ ವೇಳೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆದಿರುವುದು ಅತ್ಯಂತ ದೊಡ್ಡ ಯಶಸ್ಸು' ಎಂದು ಬಣ್ಣಿಸಿದ ಅವರು, '12 ವರ್ಷಗಳಿಂದ ಈ ಸರ್ಕಾರವು ಜನರ ಮನಸ್ಸಿನಲ್ಲಿ ಬಿತ್ತಿರುವ ಭಯವೂ ಈಗ ಕೊನೆಯಾಗಿದೆ' ಎಂದು ಹೇಳಿದ್ದಾರೆ.
'ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ ಹಾಗೂ ಪಂಡಿತ್ ನೆಹರೂ ಅವರ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಿಜೆಪಿ ಹೊಂದಿರಲಿದೆ. ನಮ್ಮ ಸಿದ್ಧಾಂತವು ಭಾರತದ ಸಂವಿಧಾನದಂತೆಯೇ ಇರಲಿದೆ' ಎಂದು ಹೇಳಿದ್ದಾರೆ.
ಸಿಜೆಪಿಯ ಮುಖ್ಯ ವಕ್ತಾರ ಸೌರವ್ ದಾಸ್, ವಕ್ತಾರ ಆಶುತೋಷ್ ರಾಂಕಾ ಹಾಗೂ ಇತರೆ ಪ್ರತಿನಿಧಿಗಳು ಕೂಡ ಈ ವೇಳೆ ಹಾಜರಿದ್ದರು.
'ಕಳೆದ ತಿಂಗಳು ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಷ್ಟೆ ಭಾಗಿಯಾಗಿರಲಿಲ್ಲ; ನಿರುದ್ಯೋಗಿಗಳೂ ಪಾಲ್ಗೊಂಡಿದ್ದರು. ನಿರುದ್ಯೋಗವು ದೇಶದ ಅತಿ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯ ಆಳ-ಅಗಲವನ್ನು ಬಿಂಬಿಸಲಿದ್ದೇವೆ. ಶಿಕ್ಷಣದಲ್ಲಿ ಸುಧಾರಣೆ ತರುವಂತೆ ಮಾಡಲು ಶ್ರಮಿಸಲಿದ್ದೇವೆ. ಶಾಲಾ ಹಂತದಿಂದಲೇ ಶಿಕ್ಷಣವು ದುಬಾರಿಯಾಗಿದೆ. ಅದನ್ನು ಬದಲಾಯಿಸಲು ಒತ್ತರ ತರುವುದು ನಮ್ಮ ಉದ್ದೇಶ' ಎಂದು ದೀಪ್ಕೆ ವಿವರಿಸಿದ್ದಾರೆ.
'ದೇಶದಲ್ಲಿ ಶೇಕಡ 60ರಷ್ಟು ಮಂದಿ 35 ವರ್ಷದ ಒಳಗಿನವರಾಗಿದ್ದು, ಜಂತರ್ ಮಂತರ್ನಲ್ಲಿನ ಪ್ರತಿಭಟನಕಾರರಲ್ಲಿ ಆ ವಯೋಮಾನದವರೇ ಹೆಚ್ಚಾಗಿದ್ದರು. ಮಾಧ್ಯಮದ ವಿಶ್ವಾಸರ್ಹತೆಯನ್ನು ಮರಳಿ ತರುವ ಅಗತ್ಯವಿತ್ತು' ಎಂದು ಈ ವೇಳೆ ಪ್ರತಿಪಾದಿಸಿದ್ದಾರೆ.
ಅಭಿಜಿತ್ ದೀಪ್ಕೆ ಸಿಜೆಪಿ ಸಂಸ್ಥಾಪಕಜನರು ಈಗ ಬೀದಿಗಿಳಿದಿದ್ದಾರೆ. ಈಗ ಅವರು ಒಬ್ಬರ ರಾಜೀನಾಮೆ ಪಡೆದಿದ್ದಾರೆ. ನಾಳೆ ಇನ್ನಷ್ಟು ಮಂದಿಯ ರಾಜೀನಾಮೆ ಪಡೆದುಕೊಳ್ಳಲಿದ್ದಾರೆ.

