ಕಾಸರಗೋಡು: ಬಿರುಸಿನ ಮಳೆ ಹಿನ್ನೆಲೆಯಲ್ಲಿ ನೆರೆ ಹಾಗೂ ಭೂಕುಸಿತದಿಂದ ಸಂತ್ರಸ್ತರಾಗಿರುವವರಿಗೆ ವಾಸ್ತವ್ಯಕಲ್ಪಿಸಲು ಜಿಲ್ಲೆಯಲ್ಲಿ ಒಟ್ಟು ಆರು ಶಿಬಿರಗಳನ್ನು ಆರಂಭಿಸಲಾಗಿದ್ದು, 88 ಕುಟುಂಬಗಳ 325ಮಂದಿ ವಾಸ್ತವ್ಯ ಹೂಡಿದ್ದಾರೆ. ವೆಳ್ಳರಿಕುಂಡು ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ತಲಾ ಮೂರರಂತೆ ಕೇಂದ್ರಗಳನ್ನು ಆರಂಭಿಸಲಾಗಿದೆ.
ಸಂತ್ರಸ್ತರಿಗೆ ವಾಸ್ತವ್ಯ ಕಲ್ಪಿಸಿರುವ ಶಿಬಿರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹೆಚ್ಚಿನ ಗಮನಹರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಶಿಬಿರಗಳಲ್ಲಿ ಕುಡಿಯುವ ನೀರು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು, ಶಿಬಿರಗಳಿಗೆ ಕ್ಲೋರಿನ್ಯುಕ್ತ ನಿರು ಪೂರೈಸಬೇಕು, ಭೇದಿ, ಕಾಮಾಲೆ ಅಥವಾ ಟೈಫಾಯಿಡ್ನಂತಹ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳನ್ನು ವಿಶೇಷ ಆರೈಕೆಗಾಗಿ ಶಿಬಿರಗಳಿಂದ ಬೇರೆಡೆಗೆ ಸ್ಥಳಾಂತರಿಸಿ ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಿಕೊಳ್ಳಬೇಕು, ಶಿಬಿರಗಳಲ್ಲಿ ಆಹಾರ ಪದಾರ್ಥ ತಯಾರಕರಿಗೆ ಯಾವುದೇ ಕಾಯಿಲೆಯಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು, ಸ್ವಚ್ಛತೆ ಕಾಪಾಡಿಕೊಳ್ಳುವುದರೊಂದಿಗೆ ಶೂದ್ಧ ನೀರು ಪುರೈಸುವಂತೆಯೂ ಸೂಚಿಸಲಾಘಿದೆ.
ಶಿಬಿರಗಳಲ್ಲಿರುವ ವೃದ್ಧರು, ಗರ್ಭಿಣಿಯರು ಮತ್ತು ಮಕ್ಕಳ ಬಗ್ಗೆ ವಿಶೇಷ ಗಮನಹರಿಸಬೇಕು. ಯಾರಿಗಾದರೂ ಅನಾರೋಗ್ಯ ಕಂಡುಬಂದಲ್ಲಿ ತಕ್ಷಣ ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಇನ್ನು ಸಂತ್ರಸ್ತರ ಶಿಬಿರಗಳಲ್ಲಿ ಉಳಿದುಕೊಂಡಿರುವವರಿಗಾಗಿ ಕೆಲವೊಂದು ಮಾರ್ಗಸೂಚಿಗಳನ್ನೂ ನೀಡಲಾಗಿದೆ. ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಬೇಕು, ವೈಯಕ್ತಿಕ ಹಾಗೂ ಆಹಾರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ಆಹಾರ ಸೇವಿಸುವ ಮೊದಲು ಮತ್ತು ಶೌಚಗೃಹ ಬಳಸಿದ ನಂತರ ಸಾಬೂನುಬಳಸಿ ಶುಚಿಗೊಳಿಸಬೇಕು, ಶಿಬಿರದ ಸಂಯೋಜಕರು ಆಹಾರವನ್ನು ನೈರ್ಮಲ್ಯಯುತ ಪರಿಸರದಲ್ಲಿ ತಯಾರಿಸಬೇಕು, ಶಿಬಿರಗಳಲ್ಲಿ ಹಳಸಿದ ಆಹಾರ ವಿತರಿಸಬಾರದು, ಆಹಾರದ ತ್ಯಾಜ್ಯವನ್ನು ನಿರ್ಲಕ್ಷ್ಯವಹಿಸದೆ ಎಲ್ಲೆಂದರಲ್ಲಿ ಎಸೆಯದಿರುವಂತೆಯೂ ಸೂಚಿಸಲಾಗಿದೆ.



