ಉಪ್ಪಳ: ಉಪ್ಪಳದ ವಿವಿಧೆಡೆ ಕಡಲ್ಕೊರೆತ ವ್ಯಾಪಕಗೊಂಡಿದ್ದು, ಮಂಗಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಶಾರದಾ ನಗರದಲ್ಲಿ ಮೀನು ಕಾರ್ಮಿಕೆ ಶಶಿಕಲಾ ಎಂಬವರ ಮನೆ ಸಮುದ್ರ ಪಾಲಾಗಿದ್ದು, ಇನ್ನೂ ಹಲವು ಮನೆಗಳು ಸಮುದ್ರಪಾಲಾಗುವ ಭೀತಿ ಎದುರಿಸುತ್ತಿದೆ.
ಇಲ್ಲಿನ ನಿವಾಸಿಗಳಾದ ಲಲಿತ, ನಿವೇದಿತ, ಗಿರಿಜ, ಸತೀಶ, ಸುನಂದ ಮೊದಲಾದವರ ಮನೆಗಳು ಹಾಗೂ ಪರಿಸರದ ಶ್ರೀ ಶಾರದಾ ಭಜನಾ ಮಂದಿರವೂ ಅಪಾಯದಂಚಿನಲ್ಲಿದೆ. ಇಲ್ಲಿಂದ ಹಲವು ಕುಟುಂಬಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಈ ಪ್ರದೇಶದಲ್ಲಿ ಬೃಹತ್ ತೆಂಗಿನ ಮರಗಳು ಧರಾಶಾಯಿಯಾಗಿದೆ. ಮೋಸೋಡಿ, ಮಣಿಮುಂಡ, ಹನುಮಾನ್ನಗರ, ಶಿವಾಜಿ ನಗರ, ಕುದುಪುಳ, ಪೆರಿಂಗಡಿ ಸಹಿತ ಹಲವು ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಪ್ರತಿ ವರ್ಷ ಕಡಲ್ಕೊರೆತ ಭೀತಿಯಿಂದಲೇ ಸ್ಥಳೀಯರು ದಿನ ಕಳೆಯುತ್ತಿದ್ದು, ಶಾಶ್ವತ ತಡೆಗೋಡೆ ನಿರ್ಮಾಣಕ್ಕಾಗಿ ಮಾಡಿಕೊಂಡ ಮನವಿ ನಿಷ್ಪ್ರಯೋಜಕವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಎರಡು ದಶಕದ ಹಿಂದೆ ಇಲ್ಲಿನ ನಿವಾಸಿ ದಿ.ಐತ್ತಪ್ಪ, ಮೋಹನ ಎಂಬವರ ಮನೆ ಸಮುದ್ರ ಪಾಲಾಗಿದ್ದರೂ, ಇವರಿಗೆ ಉಚಿತ ಪಡಿತರ ಬಿಟ್ಟರೆ ಮನೆ ಅಥವಾ ನಷ್ಟ ಪರಿಹಾರ ಲಭ್ಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಮನೆ ಸಮುದ್ರ ಪಾಲಾದ ಬಗ್ಗೆ ಮಾಹಿತಿ ಲಭಿಸಿ ನಿನ್ನೆ ಬೆಳಿಗ್ಗೆ ಸ್ಥಳಕ್ಕೆ ಬಿಜೆಪಿ ಮುಖಂಡರು, ವಿಲೇಜ್ ಅಧಿಕಾರಿಗಳು, ಶಾಸಕ ತಲುಪಿ ಊರವರಿಂದ ಮಾಹಿತಿ ಸಂಗ್ರಹಿಸಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.



