ಪುಣೆ: ಸ್ವಾತಂತ್ರ್ಯ ಎಂದರೆ ಕೇವಲ ಯಾರೂ ತಡೆಯದಂತೆ ಇರುವ ಅಧಿಕಾರವಲ್ಲ, ಬದಲಾಗಿ ದೇಶದ ಬಗ್ಗೆ ಇರುವ ಜವಾಬ್ದಾರಿಯನ್ನು ಅರಿತುಕೊಳ್ಳುವುದು ನಿಜವಾದ ಸ್ವಾತಂತ್ರ್ಯ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ದೇಶದ ಯುವಜನತೆಗೆ ಸಂದೇಶ ರವಾನಿಸಿದ್ದಾರೆ.
ಪುಣೆಯಲ್ಲಿ ಪ್ರತಿಷ್ಠಿತ 'ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ 2026' ಸ್ವೀಕರಿಸಿ ಮಾತನಾಡಿದ ಅವರು, ಯುವಕರು ಸ್ವಾತಂತ್ರ್ಯವನ್ನು ಹರುವಾಗಿ ಪರಿಗಣಿಸಬಾರದು ಎಂದು ಕಿವಿಮಾತು ಹೇಳಿದರು.
ಪುಣೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಜಿತ್ ದೋವಲ್ ಅವರಿಗೆ 2026 ರ ಸಾಲಿನ 'ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ'ಯನ್ನು ಪ್ರದಾನ ಮಾಡಿದರು. ಭಾರತದ ಭದ್ರತೆಗೆ ದೋವಲ್ ನೀಡಿರುವ ಅಸಾಧಾರಣ ಕೊಡುಗೆಯನ್ನು ಕೊಂಡಾಡಿದ ಅಮಿತ್ ಶಾ, ಅವರ ನಿರ್ಭೀತ ಮತ್ತು ದೃಢ ಮನೋಭಾವವು ಲೋಕಮಾನ್ಯ ತಿಲಕರ ಆದರ್ಶಗಳನ್ನು ಹೋಲುತ್ತದೆ ಎಂದು ಪ್ರಶಂಸಿಸಿದರು.
ಸ್ವಾತಂತ್ರ್ಯದ ನಿಜವಾದ ಅರ್ಥ ತಿಳಿಸಿದ ದೋವಲ್!
ಸಮಾರಂಭದಲ್ಲಿ ಮಾತನಾಡುತ್ತಾ ಅಜಿತ್ ದೋವಲ್, ಇಂದಿನ ಯುವ ಪೀಳಿಗೆಯು ಸಂಪೂರ್ಣ ಸ್ವತಂತ್ರ ಭಾರತದಲ್ಲಿ ಹುಟ್ಟಿ ಬೆಳೆದಿದೆ. ಹೀಗಾಗಿ, ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಹಿರಿಯರು ಅನುಭವಿಸಿದ ಕಷ್ಟಗಳು, ಬ್ರಿಟಿಷರ ದಬ್ಬಾಳಿಕೆ ಹಾಗೂ ಮಿತಿಗಳನ್ನು ಇಂದಿನ ಯುವಕರಿಗೆ ಕಲ್ಪಿಸಿಕೊಳ್ಳಲು ಕೂಡ ಕಷ್ಟವಾಗಬಹುದು ಎಂದರು.
ಇಂದಿನ ಅನೇಕ ಯುವಕರು ಭಾರತ ಯಾವಾಗಲೂ ಹೀಗೆಯೇ ಇತ್ತು ಎಂದು ಭಾವಿಸಬಹುದು. ಸ್ವಾತಂತ್ರ್ಯವನ್ನು ಕೇವಲ ತಮ್ಮಿಷ್ಟದಂತೆ ಬದುಕು ನಡೆಸುವ ಸ್ವಾತಂತ್ರ್ಯ ಎಂದು ತಪ್ಪಾಗಿ ತಿಳಿದುಕೊಳ್ಳಬಹುದು. ಆದರೆ, ಸ್ವಾತಂತ್ರ್ಯದ ನಿಜವಾದ ಅರ್ಥ ಕೇವಲ ವೈಯಕ್ತಿಕ ಹಕ್ಕುಗಳಲ್ಲ, ಅದರ ಜತೆಗೆ ದೇಶದ ಕಡೆಗೆ ನಮಗಿರುವ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಕೂಡ ಸೇರಿವೆ ಎಂದು ದೋವಲ್ ಎಚ್ಚರಿಸಿದರು.
ದೇಶವು ಇಂದು ತನ್ನ ಇತಿಹಾಸದ ಅತ್ಯಂತ ನಿರ್ಣಾಯಕ ಘಟ್ಟದಲ್ಲಿದೆ. ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಿಂತ ದೇಶದ ಹಿತಾಸಕ್ತಿಯೇ ನಮಗೆ ಮುಖ್ಯವಾಗಬೇಕು. ಸಿಕ್ಕಿರುವ ಈ ಅಮೂಲ್ಯ ಅವಕಾಶವನ್ನು ಯಾರೂ ವ್ಯರ್ಥ ಮಾಡಬಾರದು. ಬಲವಾದ ಮತ್ತು ಶಕ್ತಿಶಾಲಿ ಭಾರತವನ್ನು ಕಟ್ಟಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ದೋವಲ್ ಯುವ ಜನತೆಗೆ ಕರೆ ನೀಡಿದರು.

