ಬಂಗೂಯಿ: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ನಲ್ಲಿ ಸಂಭವಿಸಿದ ಚಿನ್ನದ ಗಣಿ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ದುರಂತ ಸಂಭವಿಸಿ ಎರಡು ದಿನಗಳ ಬಳಿಕವೂ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಬದುಕುಳಿದವರನ್ನು ಪತ್ತೆಹಚ್ಚುವ ಸಾಧ್ಯತೆ ಕ್ಷೀಣಿಸಿದೆ.
ಕ್ಯಾಮೆರೂನ್ ಗಡಿ ಸಮೀಪದ ಝಾಂಬೊಯೆ ಚಿನ್ನದ ಗಣಿ ಪ್ರದೇಶದಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದು, ಮತ್ತಷ್ಟು ಮೃತದೇಹಗಳನ್ನು ಹೊರತೆಗೆದಿವೆ. ಆದರೆ, ಭಾರಿ ಪ್ರಮಾಣದ ದುರಂತಕ್ಕೆ ಅಗತ್ಯವಿರುವ ರಕ್ಷಣಾ ಉಪಕರಣಗಳು ಹಾಗೂ ತಜ್ಞರ ಕೊರತೆ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
'ಸಂಘಟಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಅದು ನಿರೀಕ್ಷೆಗೆ ತಕ್ಕ ಮಟ್ಟದಲ್ಲಿಲ್ಲ' ಎಂದು ದುರಂತದಲ್ಲಿ ಸಹೋದರ ಹಾಗೂ ಸ್ನೇಹಿತನನ್ನು ಕಳೆದುಕೊಂಡಿರುವ ಗಣಿ ಕಾರ್ಮಿಕ ಜೆರೆಮಿ ನಬಿರಿ ಹೇಳಿದ್ದಾರೆ.
'ಜನರು ಸಂತ್ರಸ್ತರನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ಕೆಲವರಿಗೆ ಉಸಿರುಗಟ್ಟಿದ ಅನುಭವವಾಗಿರುವುದನ್ನು ನಾನು ಕಂಡೆ' ಎಂದೂ ಅವರು ತಿಳಿಸಿದ್ದಾರೆ.
ಸ್ಥಳೀಯ ರೆಡ್ಕ್ರಾಸ್ ಸಂಸ್ಥೆ ಶೋಧ ಕಾರ್ಯಾಚರಣೆಗೆ ನೆರವು ನೀಡುತ್ತಿದೆ. ಆದರೆ, ಎಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಗೆರ್ವಾಯಿಸ್ ಗನಗೋರಾ ಹೇಳಿದ್ದಾರೆ.
ಸುರಂಗ ಕುಸಿತಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ. ಸಂತ್ರಸ್ತರ ಗುರುತು ಪತ್ತೆಹಚ್ಚುವುದು, ಗಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರ ಜವಾಬ್ದಾರಿ ನಿರ್ಧರಿಸುವುದು ಹಾಗೂ ಘಟನೆಯಲ್ಲಿ ಕ್ರಿಮಿನಲ್ ಹೊಣೆಗಾರಿಕೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ತನಿಖೆಯ ಉದ್ದೇಶವಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

