ಮುಂಬೈ: 'ನಾನು ಅಮೆರಿಕದಲ್ಲಿ ವ್ಯಾಸಂಗ ಮಾಡುವುದಕ್ಕಾಗಿ ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ಸಾಲವನ್ನು ಪಡೆದಿದ್ದೇನೆ' ಎಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿಕೊಂಡಿದ್ದಾರೆ.
ದೀಪ್ಕೆ ಅವರು ಈಚೆಗೆ 'ನೀಟ್' ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ದೀಪ್ಕೆ ಅವರ ವಿದೇಶಿ ವ್ಯಾಸಂಗ ಕುರಿತು ಹಣಕಾಸು ಮೂಲದ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.
ಪರೀಕ್ಷಾ ಅಕ್ರಮಗಳ ವಿರುದ್ಧ ಸಿಜೆಪಿ ನಡೆಸಿದ ಪ್ರತಿಭಟನೆಯನ್ನು ಶೇಖ್ ಹಸೀನಾ ಅವರ ಅವಾಮಿ ಲೀಗ್ ಆಡಳಿತವನ್ನು ಉರುಳಿಸಿದ 2024ರ ಬಾಂಗ್ಲಾದೇಶದ ದಂಗೆಗೆ ಹೋಲಿಸಿದ್ದ ಬಾಂಗ್ಲಾದ ಲೇಖಕಿ ತಸ್ಲೀಮಾ ನಸ್ರೀನ್ ಅವರ ಹೇಳಿಕೆಯನ್ನು ದೀಪ್ಕೆ ತಳ್ಳಿಹಾಕಿದ್ದಾರೆ.
ನಮ್ಮನ್ನು ದೂಷಿಸಲು ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಪ್ರತಿಭಟನೆಗಳನ್ನು ಉಲ್ಲೇಖಿಸಲಾಗುತ್ತಿದೆ. ಆದರೆ, ನಾವು ಅವರಿಗಿಂತ ಭಿನ್ನವಾಗಿದ್ದೇವೆ ಎಂದು ದೀಪ್ಕೆ ಪ್ರತಿಪಾದಿಸಿದ್ದಾರೆ.
ವಿದೇಶದಲ್ಲಿ ವ್ಯಾಸಂಗ ಹಾಗೂ ಸರ್ಕಾರಿ ನಿವೃತ್ತ ಉದ್ಯೋಗಿಯಾಗಿರುವ ದೀಪ್ಕೆ ಅವರ ತಂದೆಯ ಹಣಕಾಸಿನ ಮೂಲದ ಕುರಿತು ತನಿಖೆ ನಡೆಸುವಂತೆ ಕೋರಿ ಸೂರತ್ ಮೂಲದ ಆರ್ಟಿಐ ಕಾರ್ಯಕರ್ತರೊಬ್ಬರು ಶನಿವಾರ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಅವರು, 'ನನ್ನ ವ್ಯಾಸಂಗದ ಹಣಕಾಸಿನ ಮೂಲವನ್ನು ಮುಕ್ತವಾಗಿ ತನಿಖೆ ಮಾಡಬಹುದು' ಎಂದು ಹೇಳಿದ್ದಾರೆ.
'ನಾನು ಬೋಸ್ಟನ್ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನ ಪಡೆದುಕೊಂಡಿದ್ದೇನೆ. ಉಳಿದ ಮೊತ್ತಕ್ಕೆ ಶೈಕ್ಷಣಿಕ ಸಾಲ ಮಾಡಿದ್ದೇನೆ. ಅದು ಇನ್ನೂ ಬಾಕಿಯಿದೆ ಮತ್ತು ಮರುಪಾವತಿಸಬೇಕಿದೆ. ವೈಯಕ್ತಿಕ ಲಾಭಕ್ಕಾಗಿ ಪ್ರತಿಭಟನೆ ನಡೆಸಿಲ್ಲ' ಎಂದು ಅವರು ವಿವರಿಸಿದ್ದಾರೆ.
ಬೋಸ್ಟನ್ ವಿಶ್ವವಿದ್ಯಾಲಯದ 'ಕಾಲೇಜ್ ಆಫ್ ಕಮ್ಯುನಿಕೇಶನ್'ನಿಂದ ಪಬ್ಲಿಕ್ ರಿಲೇಶನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದೀಪ್ಕೆ, ಜೂನ್ನಲ್ಲಿ ಭಾರತಕ್ಕೆ ಮರಳಿ 'ನೀಟ್-ಯುಜಿ' ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯ ನೇತೃತ್ವವಹಿಸಿದ್ದರು. ದೇಶದ ವಿವಿಧ ಭಾಗಗಳ ಯುವಕರು ದೆಹಲಿಯಲ್ಲಿ ಜಮಾಯಿಸಿ ಪರೀಕ್ಷಾ ಸುಧಾರಣೆ ಆಗ್ರಹಿಸಿದ್ದರು. ಜತೆಗೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದರು.
ದೇಶದಾದ್ಯಂತ 'ಜೆನ್-ಝೀ'ಗಳಿಂದ ಅಭೂತಪೂರ್ವ ಬೆಂಬಲ ಪಡೆದ ಈ ಪ್ರತಿಭಟನೆಯು, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕಾರಣವಾಯಿತು.
ಸಿಜೆಪಿ ಪ್ರತಿಭಟನೆ ದೇಶದ ವಿವಿಧ ನಗರಗಳಿಗೆ ವ್ಯಾಪಿಸಿತು. ಆದರೆ, ದೆಹಲಿ, ಮುಂಬೈ, ಕೋಲ್ಕತ್ತ ಮತ್ತು ಬಿಹಾರದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದವು. ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ರುಚಿಕಾ ಸಿಂಗ್ ಬಗ್ಗೆ ದೀಪ್ಕೆ ಹೇಳಿದ್ದೇನು?
ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ 15 ವರ್ಷದ ರುಚಿಕಾ ಸಿಂಗ್ಗೆ ಸಂಬಂಧಿಸಿದ ವಿವಾದದ ಕುರಿತು ಪ್ರತಿಕ್ರಿಯಿಸಿದ ದೀಪ್ಕೆ, ಮಕ್ಕಳು ನೀಡುವ ಹೇಳಿಕೆಗಳನ್ನು ಅಪರಾಧೀಕರಿಸುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ.
'15 ವರ್ಷದ ಬಾಲಕಿಯ ವಿರುದ್ಧ ಎಫ್ಐಆರ್ ದಾಖಲಿಸುವುದು ಮತ್ತು ಇಡೀ ರಾಜ್ಯದ ಆಡಳಿತ ಯಂತ್ರವನ್ನೇ ಅವಳ ವಿರುದ್ಧ ಬಳಸುವುದು ಒಂದು ಮಾನದಂಡವಾಗುವುದಾದರೆ, ರಾಜಕೀಯ ನಾಯಕರು ಮತ್ತು ಐಟಿ ಸೆಲ್ ಸದಸ್ಯರ ವಿರುದ್ಧವೂ ಎಫ್ಐಆರ್ ದಾಖಲಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
ಸಂಸತ್ನಲ್ಲಿ ಸಂಸದರೊಬ್ಬರನ್ನು ನಿಂದಿಸಿದ್ದ ಹಿರಿಯ ಬಿಜೆಪಿ ನಾಯಕ ರಮೇಶ್ ಬಿಧುರಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆಗಳನ್ನು ದೀಪ್ಕೆ ಉಲ್ಲೇಖಿಸಿದ್ದಾರೆ.

