ಪುದುಚೇರಿ: ಕಾಕ್ರೋಚ್ ಜನತಾ ಪಾರ್ಟಿ (CJP) ವಕ್ತಾರ ಸೌರವ್ ದಾಸ್ ಅವರ ಕುಟುಂಬದ ವೈಟ್ ಟೌನ್ನಲ್ಲಿರುವ ಮನೆಗೆ ಪುದುಚೇರಿ ಪೊಲೀಸರು ಭೇಟಿ ನೀಡಿದ ಘಟನೆ ವಿವಾದಕ್ಕೆ ಕಾರಣವಾಗಿದೆ.
ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಮತ್ತು ರಾಜಕೀಯವಾಗಿ ಬೆದರಿಕೆ ಹಾಕಿದ್ದಾರೆ ಎಂದು ಸೌರವ್ ದಾಸ್ ಆರೋಪಿಸಿದ್ದಾರೆ.
ಆದರೆ, ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಮುನ್ನ ನಡೆಸುವ ಸಾಮಾನ್ಯ ಭದ್ರತಾ ತಪಾಸಣೆಯ ಭಾಗವಾಗಿ ಮನೆಗೆ ಭೇಟಿ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ವಿರುದ್ಧ ಸೌರವ್ ದಾಸ್ ಆರೋಪ
ಆಗಸ್ಟ್ 12ರಂದು ಪೊಲೀಸರು ತಮ್ಮ ಕುಟುಂಬದ ಮನೆಗೆ ಬಂದಿದ್ದರು. ಸುಮಾರು ಎರಡು ಗಂಟೆಗಳ ಕಾಲ ವಿವಿಧ ಪ್ರಶ್ನೆಗಳನ್ನು ಕೇಳಿ ವಿಚಾರಣೆ ನಡೆಸಿದರು ಎಂದು ಸೌರವ್ ಆರೋಪಿಸಿದ್ದಾರೆ.
'ಈ ಕಿರುಕುಳ ಏಕೆ ಪುದುಚೇರಿ ಪೊಲೀಸರೇ? ಯಾರು ಇದಕ್ಕೆ ಆದೇಶ ನೀಡಿದರು? ಯಾವ ಉದ್ದೇಶಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ? ಇದು ಕಾನೂನುಬದ್ಧ ಕ್ರಮವೇ? ಪುದುಚೇರಿಯ BJP ಸರಕಾರ ನನ್ನ ಕುಟುಂಬವನ್ನು ಏಕೆ ಬೆದರಿಸುತ್ತಿದೆ? ಇದು ಪುದುಚೇರಿ ಸರಕಾರದ ಕ್ರಮದಂತೆ ಕಾಣುತ್ತಿಲ್ಲ. ಕೇಂದ್ರ ಸರಕಾರದ ಆದೇಶದ ಮೇರೆಗೆ ಇದನ್ನು ಮಾಡಲಾಗುತ್ತಿದೆ' ಎಂದು ದಾಸ್ Xನಲ್ಲಿ ತಿಳಿಸಿದ್ದಾರೆ ಎಂದು PTI ವರದಿ ಮಾಡಿದೆ.
ಪೊಲೀಸರ ಕ್ರಮದ ಉದ್ದೇಶ ತಮ್ಮನ್ನು ಮೌನವಾಗಿಸುವುದಾಗಿದ್ದರೆ ಅದು ಯಶಸ್ವಿಯಾಗುವುದಿಲ್ಲ ಎಂದೂ ದಾಸ್ ಪ್ರತಿಕ್ರಿಯಿಸಿದ್ದಾರೆ.
'ಇದು ನನ್ನನ್ನು ನಿಗ್ರಹಿಸುವುದಿಲ್ಲ. ಪೊಲೀಸರು ಗೂಂಡಾಗಳಂತೆ ವರ್ತಿಸುವ ಬದಲು ಕಾನೂನನ್ನು ಎತ್ತಿಹಿಡಿಯುವಂತಹ ಉತ್ತಮ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಸಂಕಲ್ಪವನ್ನು ಈ ಘಟನೆ ಮತ್ತಷ್ಟು ಬಲಪಡಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಅಮಿತ್ ಶಾ ಭೇಟಿ ಬಗ್ಗೆ ಪ್ರಶ್ನೆ
ಕೇಂದ್ರ ಸಚಿವ ಅಮಿತ್ ಶಾ ಅವರು ಎರಡು ದಿನಗಳ ಹಿಂದಷ್ಟೇ ಪುದುಚೇರಿಗೆ ಭೇಟಿ ನೀಡಿದ್ದರು ಎಂದು ದಾಸ್ ಹೇಳಿದ್ದಾರೆ. ಈ ವೇಳೆ ಅವರು ಕೇಂದ್ರಾಡಳಿತ ಪ್ರದೇಶದ ಗೃಹ ಸಚಿವರು ಮತ್ತು ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿಯಾಗಿದ್ದರು.
'ಈ ಬೆದರಿಕೆ ತಂತ್ರವನ್ನು ಅವರ ಸಭೆಯಲ್ಲಿ ಯೋಜಿಸಲಾಗಿತ್ತೇ?' ಎಂದು ದಾಸ್ ಮತ್ತೊಂದು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಪೊಲೀಸರ ಸ್ಪಷ್ಟನೆ
ದಾಸ್ ಅವರ ಆರೋಪವನ್ನು ಪುದುಚೇರಿ ಪೊಲೀಸರು ತಳ್ಳಿಹಾಕಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು, ದಾಸ್ ಅವರ ಮನೆಗೆ ಭೇಟಿ ನೀಡಿರುವುದು 'ವಾಡಿಕೆಯ ಭದ್ರತಾ ಕ್ರಮ' ಎಂದು ಹೇಳಿದ್ದಾರೆ ಎಂದು PTI ವರದಿ ಮಾಡಿದೆ.
ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಪ್ರಮುಖ ಮಾರ್ಗಗಳ ಬಳಿ ವಾಸಿಸುವ ಜನರನ್ನು ಪೊಲೀಸರು ಭೇಟಿ ಮಾಡುತ್ತಾರೆ. ಈ ವೇಳೆ ಕೆಲವು ಭದ್ರತಾ ಪ್ರಶ್ನೆಗಳನ್ನು ಕೇಳುತ್ತಾರೆ. ಇದು ಸಾಮಾನ್ಯ ಭದ್ರತಾ ಕ್ರಮವಾಗಿದ್ದು, ಯಾರಿಗೂ ಕಿರುಕುಳ ನೀಡುವ ಉದ್ದೇಶ ಹೊಂದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
VIP ಮಾರ್ಗಗಳಲ್ಲೂ ತಪಾಸಣೆ
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಕಾನೂನು ಮತ್ತು ಸುವ್ಯವಸ್ಥೆ) ಆರ್. ಕಲೈವಾಣನ್ ಮತ್ತು ಅಪರಾಧ ಹಾಗೂ ಗುಪ್ತಚರ ವಿಭಾಗದ ಅಧಿಕಾರಿ ನಿತ್ಯಾ ರಾಧಾಕೃಷ್ಣನ್, ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ವಿಧ್ಯುಕ್ತ ಕಾರ್ಯಕ್ರಮಗಳು ನಡೆಯುವ ಸ್ಥಳಗಳು ಮತ್ತು VIP ಮಾರ್ಗಗಳ ಬಳಿ ತಪಾಸಣೆ ನಡೆಸುವುದು ಸಾಮಾನ್ಯ ಭದ್ರತಾ ಕ್ರಮದ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
ಲಿಖಿತ ಸೂಚನೆ ಇಲ್ಲ
ಆದರೆ, ಇಂತಹ ಮನೆ ಭೇಟಿ ಮತ್ತು ಭದ್ರತಾ ತಪಾಸಣೆಗಳಿಗೆ ಸಂಬಂಧಿಸಿದಂತೆ ಪುದುಚೇರಿ ಪೊಲೀಸರು ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತ ಯಾವುದೇ ಔಪಚಾರಿಕ ಲಿಖಿತ ಮಾರ್ಗಸೂಚಿ ಅಥವಾ ಸೂಚನೆ ನೀಡಿಲ್ಲ ಎಂದು ವರದಿಯಾಗಿದೆ.
ಇದನ್ನೇ ಸ್ಥಳೀಯ ರಾಜಕೀಯ ಮುಖಂಡರು ಪ್ರಶ್ನಿಸಿದ್ದಾರೆ. ಭದ್ರತಾ ತಪಾಸಣೆ ನಡೆಸುವುದು ವಾಡಿಕೆಯ ಕ್ರಮವಾಗಿದ್ದರೆ, ಅದರ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಇರಬೇಕು. ಇಂತಹ ಕ್ರಮಗಳಲ್ಲಿ ಪಾರದರ್ಶಕತೆ ಅಗತ್ಯ ಎಂದು ಅವರು ಹೇಳಿದ್ದಾರೆ.
ಕೃಪೆ: outlookindia.com

