ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿದ್ದ ಪ್ರತಿಭಟನೆಗೆ ದೆಹಲಿ ಪೊಲೀಸರು ಮಣಿದಿದ್ದಾರೆ. ಜುಲೈ 20ರಂದು ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಸಂಬಂಧ ಎಫ್ಐಆರ್ ದಾಖಲಿಸಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡಿದ್ದಾರೆ ಎನ್ನಲಾದ 19 ವರ್ಷದ ವಿದ್ಯಾರ್ಥಿ ಸಾಹಿಲ್ ಲೋಚಾಬ್ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜುಲೈ 20ರಂದು ನಡೆದ 'ಸಂಸತ್ ಚಲೊ' ವೇಳೆ ಸಾಹಿಲ್ ಲೋಚಾಬ್ ಪೆಲೆಟ್ ಗನ್ ದಾಳಿಯಿಂದಾಗಿ ಗಾಯಗೊಂಡಿದ್ದ. ಈ ಕುರಿತು ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಎದುರು ಧರಣಿ ಕುಳಿತಿದ್ದರು.
ಸಂತ್ರಸ್ತ ಯುವಕ, ಕುಟುಂಬಸ್ಥರೊಂದಿಗೆ ಧರಣಿ ಕುಳಿತಿದ್ದ ರಾಹುಲ್ ಅವರಿಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಇತರ ನಾಯಕರು ಸಾಥ್ ನೀಡಿದ್ದರು.
ನ್ಯಾಯಕ್ಕಾಗಿ ರಾಹುಲ್ ಆಗ್ರಹ
ಸಾಹಿಲ್ ನ್ಯಾಯಕ್ಕಾಗಿ ಎಫ್ಐಆರ್ ದಾಖಲಿಸಲು ಬಂದರೆ, ಪೊಲೀಸರು ಅವಕಾಶ ನೀಡುತ್ತಿಲ್ಲ ರಾಹುಲ್ ಗಾಂಧಿ ಆರೋಪಿಸಿದ್ದರು. ಬಳಿಕ ಪೊಲೀಸ್ ಠಾಣೆ ಎದುರು ಲೋಚಾಬ್ ಅವರೊಂದಿಗೆ ರಾಹುಲ್ ಧರಣಿ ಕುಳಿತಿದ್ದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳದಲ್ಲಿ ಕ್ಷಿಪ್ರ ಕಾರ್ಯ ಪಡೆಯನ್ನು (ಆರ್ಎಎಫ್) ನಿಯೋಜಿಸಲಾಯಿತು. ಎಫ್ಐಆರ್ ಪ್ರತಿ ಸಿಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರಾಹುಲ್ ಪಟ್ಟು ಹಿಡಿದಿದ್ದರು. ಆರೂವರೆ ಗಂಟೆಗಳ ನಿರಂತರ ಪ್ರತಿಭಟನೆ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದೇಹದಲ್ಲಿ 200ಕ್ಕೂ ಹೆಚ್ಚು ಪೆಲೆಟ್ಗಳು...
ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪೆಲೆಟ್ಗಳನ್ನು ಪ್ರದರ್ಶಿಸಿ, ಸಾಹಿಲ್ ಅವರ ದೇಹದಲ್ಲಿ 200ಕ್ಕೂ ಹೆಚ್ಚು ಪೆಲೆಟ್ಗಳು ಸಿಲುಕಿಕೊಂಡಿವೆ ಎಂದು ಹೇಳಿದ್ದಾರೆ.
ಸಾಹಿಲ್ ಅವರ ಕಣ್ಣಿನಲ್ಲಿ ಮೂರು ಪೆಲೆಟ್ಗಳು ಸಿಲುಕಿಕೊಂಡಿದ್ದು, ಅವರು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಅಲ್ಲದೆ, ಕೆಲವು ಪೆಲೆಟ್ಗಳು ಹೃದಯದ ಹತ್ತಿರ ಸಿಲುಕಿದ್ದು, ಅವುಗಳನ್ನು ತೆಗೆಯಲು ಸಾಧ್ಯವಾಗಿಲ್ಲ ಎಂದು ರಾಹುಲ್ ತಿಳಿಸಿದ್ದಾರೆ.
'ನಾವು ಪೆಲೆಟ್ಗಳನ್ನು ಹಾರಿಸಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಹಾಗಾದರೆ ನೀವು (ಪೊಲೀಸರು) ಹಾರಿಸದಿದ್ದರೆ, ಯಾರೋ ಒಬ್ಬರು ಈ ಪೆಲೆಟ್ಗಳನ್ನು ಹಾರಿಸಿರಲೇಬೇಕು' ಎಂದು ರಾಹುಲ್ ಗುಡುಗಿದ್ದರು.

