ಸೂರತ್: ಮುಂಬೈನ ಬಾಂದ್ರಾ ಟರ್ಮಿನಸ್ನಿಂದ ದಿಲ್ಲಿಗೆ ತೆರಳುತ್ತಿದ್ದ ಗೋಲ್ಡನ್ ಟೆಂಪಲ್ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಕರೊಂದಿಗೆ ಜಗಳವಾಡಿದ ವಿದೇಶಿ ಪ್ರಜೆಯೊಬ್ಬರು, ಬಳಿಕ ಪ್ರಯಾಣಿಕರ ಮೇಲೆ ಬೆಂಕಿ ನಂದಿಸಲು ಬಳಸುವ ಸಾಧನವನ್ನು ಸಿಂಪಡಿಸಿದ ಘಟನೆ ನಡೆದಿದೆ. ಅವರನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದ ಬಳಿಕ ವಿಚಾರಣೆ ನಡೆಸುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ.
ಸುಮಾರು 45 ವರ್ಷ ವಯಸ್ಸಿನ ವಿದೇಶಿ ಪ್ರಜೆ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಅವರು ಸಹಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿ ಗದ್ದಲ ಮಾಡುತ್ತಿದ್ದಾರೆ ಎಂಬ ಮಾಹಿತಿ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿಗೆ ಲಭಿಸಿತು.
ಮಾಹಿತಿ ತಿಳಿದು ಬೋಗಿಗೆ ಬಂದ RPF ಸಿಬ್ಬಂದಿ, ಆ ವ್ಯಕ್ತಿಯನ್ನು ಇಂಗ್ಲಿಷ್ ನಲ್ಲಿ ಮಾತನಾಡಿಸಿ ಶಾಂತಗೊಳಿಸಲು ಪ್ರಯತ್ನಿಸಿದರು. ಆದರೆ, ಅವರು ಮತ್ತಷ್ಟು ಆಕ್ರಮಣಕಾರಿಯಾಗಿ ವರ್ತಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಆ ವ್ಯಕ್ತಿ ಬೆಂಕಿ ನಂದಿಸಲು ಬಳಸುವ ಸಾಧನವನ್ನು ತೆಗೆದುಕೊಂಡು ಪ್ರಯಾಣಿಕರ ಮೇಲೆ ಸಿಂಪಡಿಸಿದರು. ಇದರಿಂದ ಕೋಪಗೊಂಡ ಕೆಲವು ಪ್ರಯಾಣಿಕರು ವಿದೇಶಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.
ರೈಲು ಸೂರತ್ ತಲುಪಿದ ಬಳಿಕ ರೈಲ್ವೆ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದು RPF ಪೋಸ್ಟ್ಗೆ ಕರೆದೊಯ್ದರು. ಅಲ್ಲಿ ಅವರನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ಅವರು ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಮೃತ ವ್ಯಕ್ತಿಯ ಬಳಿ ಪಾಸ್ಪೋರ್ಟ್, ವೀಸಾ ಅಥವಾ ಇತರ ಯಾವುದೇ ಗುರುತಿನ ದಾಖಲೆಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

