ರಾಂಚಿ: ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ತಿರಂಗಾ ಯಾತ್ರೆಯಲ್ಲಿ (ತ್ರಿವರ್ಣ ಧ್ವಜ ರ್ಯಾಲಿ) ಪಾಲ್ಗೊಳ್ಳಲು ಸದರ್ ಆಸ್ಪತ್ರೆಯಿಂದ ಹೊರಹೋಗಲು ಯತ್ನಿಸಿದ ಉಪವಾಸ ನಿರತ ಕಾರ್ಯಕರ್ತ ದೇವೇಂದ್ರ ನಾಥ್ ಮಹ್ತೊ ಅವರನ್ನು ಪೊಲೀಸರು ತಡೆದರು.
ಈ ವೇಳೆ ನಡೆದ ತಳ್ಳಾಟ, ನೂಕಾಟದಲ್ಲಿ ತಮ್ಮ ಎದೆಗೆ ಗಾಯವಾಗಿದೆ ಎಂದು ಮಹ್ತೊ ಆರೋಪಿಸಿದ್ದಾರೆ.
ಜಾರ್ಖಂಡ್ನ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮಹ್ತೊ ಅವರು ಆಗಸ್ಟ್ 2ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಶನಿವಾರಕ್ಕೆ ಉಪವಾಸ 14ನೇ ದಿನಕ್ಕೆ ತಲುಪಿದೆ. ಈ ಆಂದೋಲನ 23ನೇ ದಿನಕ್ಕೆ ಕಾಲಿಟ್ಟಿದೆ. ಆಗಸ್ಟ್ 10ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯ ವೀಡಿಯೊದಲ್ಲಿ ಮಹ್ತೊ ಅವರು ಸದರ್ ಆಸ್ಪತ್ರೆಯಿಂದ ಹೊರಹೋಗಲು ಪ್ರಯತ್ನಿಸುತ್ತಿರುವಾಗ ಭದ್ರತಾ ಅಧಿಕಾರಿಯೊಬ್ಬರು ಅವರನ್ನು ತಡೆದಿರುವುದು ಕಂಡುಬಂದಿದೆ. ಮಹ್ತೊ ಸೇರಿರುವ ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾ (JKLM)ನ ಹಲವು ಕಾರ್ಯಕರ್ತರು ಅವರನ್ನು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಿಡುವಂತೆ ಅಧಿಕಾರಿಯನ್ನು ಒತ್ತಾಯಿಸುತ್ತಿರುವುದು ಕಂಡುಬಂದಿದೆ. ಆದರೆ, ಅಧಿಕಾರಿ ಮಹ್ತೊ ಅವರಿಗೆ ವಿಶ್ರಾಂತಿ ಪಡೆಯುವಂತೆ ಕೇಳಿಕೊಳ್ಳುತ್ತಾರೆ.
ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ನಡೆಯಲಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳದಂತೆ ತಮ್ಮನ್ನು ಏಕೆ ತಡೆಯಲಾಗುತ್ತಿದೆ ಎಂದು ಮಹ್ತೊ ಪ್ರಶ್ನಿಸಿದ್ದಾರೆ.
'80 ವರ್ಷಗಳ ನಂತರ ನಮಗೆ ಸಿಕ್ಕಿರುವುದು ನಾಮಮಾತ್ರದ ಸ್ವಾತಂತ್ರ್ಯ ಎಂಬುದು ನಮಗೆ ಅರ್ಥವಾಗಿದೆ. ಸಂವಿಧಾನದ ಯಾವ ನಿಬಂಧನೆಯ ಅಡಿಯಲ್ಲಿ ನನ್ನನ್ನು ತಡೆಯಲಾಗುತ್ತಿದೆ?' ಎಂದು ಅವರು ಪ್ರಶ್ನಿಸಿದ್ದಾರೆ.
ನಂತರ Xನಲ್ಲಿ ಪೋಸ್ಟ್ ಮಾಡಿದ ಮಹ್ತೊ, ಪೊಲೀಸರು ತಮ್ಮನ್ನು ತಡೆದ ಸಂದರ್ಭದಲ್ಲಿ ತಳ್ಳಾಟ, ನೂಕಾಟ ನಡೆದಿದ್ದು, ಈ ವೇಳೆ ಎದೆಗೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.
'ಜೈಪಾಲ್ ಸಿಂಗ್ ಕ್ರೀಡಾಂಗಣಕ್ಕೆ ಧ್ವಜಾರೋಹಣ ಮಾಡಲು ಹೋಗುತ್ತಿದ್ದಾಗ ಪೊಲೀಸರು ನನ್ನನ್ನು ತಡೆದರು. ತಳ್ಳಾಟ, ನೂಕಾಟದ ವೇಳೆ ನನ್ನ ಎದೆಗೆ ಗಾಯವಾಯಿತು. ನನ್ನ ಚಿಕಿತ್ಸೆ ಮತ್ತು ವೈದ್ಯಕೀಯ ಪರೀಕ್ಷೆ ಸದ್ಯ ನಡೆಯುತ್ತಿದೆ' ಎಂದು ಅವರು ಹೇಳಿದ್ದಾರೆ.
ಕಳೆದ 14 ದಿನಗಳಿಂದ ಆರೋಗ್ಯ ಹದಗೆಟ್ಟಿದ್ದು, ಮಾತನಾಡುವಾಗಲೂ ಎದೆ ನೋವು ಅನುಭವಿಸುತ್ತಿದ್ದೇನೆ ಎಂದು ಮಹ್ತೊ ಹೇಳಿದ್ದಾರೆ. ಇದರ ಹೊರತಾಗಿಯೂ ರಾಷ್ಟ್ರಧ್ವಜ ಹಾರಿಸಲು ಕ್ರೀಡಾಂಗಣಕ್ಕೆ ಹೋಗಲು ಬಯಸಿದ್ದೆ ಎಂದು ತಿಳಿಸಿದ್ದಾರೆ.
ವೈದ್ಯರು ಆಸ್ಪತ್ರೆಯಿಂದ ಹೊರಗೆ ಹೋಗದಂತೆ ಸಲಹೆ ನೀಡಿದ್ದರೆ, ಅದರ ಲಿಖಿತ ಆದೇಶವನ್ನು ತೋರಿಸಬೇಕು ಎಂದು ಮಹ್ತೊ ಒತ್ತಾಯಿಸಿದ್ದಾರೆ.
'ವೈದ್ಯರ ಆದೇಶವಿದ್ದರೆ, ಲಿಖಿತ ಆದೇಶವನ್ನು ನನಗೆ ತೋರಿಸಿ. ಲಿಖಿತ ಆದೇಶವಿಲ್ಲದೆ ನನ್ನನ್ನು ತಡೆದರೆ, ನನ್ನನ್ನು ತಡೆದ ಪ್ರತಿಯೊಬ್ಬರ ವಿರುದ್ಧವೂ ಎಫ್ಐಆರ್ ದಾಖಲಿಸುತ್ತೇನೆ' ಎಂದು ಅವರು ಎಚ್ಚರಿಸಿದ್ದಾರೆ.
ವಿದ್ಯಾರ್ಥಿಗಳ ಚಳವಳಿಯನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮಹ್ತೊ ಆರೋಪಿಸಿದ್ದಾರೆ. ಆಂದೋಲನ ಆರಂಭವಾಗಿ ಸುಮಾರು ಒಂದು ತಿಂಗಳಾಗಿರುವ ಸಂದರ್ಭದಲ್ಲಿ ಕೆಲವರು ಅದನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
'ಈ ಆಂದೋಲನದಿಂದಾಗಿ ಇಂದು ತನಿಖಾ ಸಮಿತಿಯನ್ನು ರಚಿಸಲಾಗಿದೆ. ಸರಕಾರ ನಮ್ಮ ಅಂಶಗಳನ್ನು ಸಕಾರಾತ್ಮಕವಾಗಿ ಆಲಿಸುತ್ತಿದೆ. ಆದರೆ, ಪೂರ್ಣ ನ್ಯಾಯ ಇನ್ನೂ ಬಾಕಿ ಇದೆ' ಎಂದು ಅವರು ಹೇಳಿದ್ದಾರೆ.
'ಸಮಯ ಬಂದಾಗ, ನಾನು ಎಲ್ಲವನ್ನು ಬಹಿರಂಗಪಡಿಸುತ್ತೇವೆ' ಎಂದು ಮಹ್ತೊ ಯಾವುದೇ ವಿವರ ನೀಡದೆ ಹೇಳಿದ್ದಾರೆ.
ಚಳವಳಿಯನ್ನು ಬೇರೆಡೆಗೆ ತಿರುಗಿಸಲು ಬಿಡಬಾರದು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮನವಿ ಮಾಡಿದ ಅವರು, ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಜಾರ್ಖಂಡ್ ವಿಧಾನಸಭೆಗೆ ನಡೆಸಿದ ಮೆರವಣಿಗೆಯಲ್ಲಿ ಭಾಗವಹಿಸಿದ ಬಳಿಕ ಮಹ್ತೊ ಅವರ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರು ಸೋಮವಾರದಿಂದ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
JPSC, JSSC ಪರೀಕ್ಷೆಗಳ ವಿರುದ್ಧ ಹೋರಾಟ
ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (JSSC) ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಮಹ್ತೊ ಅವರು ಆಗಸ್ಟ್ 2ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

