ಮುಂಬೈ,: ಸಾಲಗಾರರಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡುವ ಹೊಸ ನಿಯಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗುರುವಾರ ಜಾರಿಗೆ ತಂದಿದೆ.
ಸಾಲದಾತರು ಮತ್ತು ಸಾಲ ವಸೂಲು ಏಜಂಟರಿಗಾಗಿ ಹೊರಡಿಸಲಾಗಿರುವ ಹೊಸ ನಿಯಮಗಳ ಪ್ರಕಾರ, ಸಾಲ ವಸೂಲಾತಿ ಏಜೆಂಟರು ಸಾಲಗಾರರ ವಿರುದ್ಧ ಬೈಗುಳದ ಭಾಷೆ ಬಳಸುವಂತಿಲ್ಲ, ಅತಿಯಾಗಿ ಫೋನ್ ಕರೆಗಳನ್ನು ಮಾಡುವಂತಿಲ್ಲ ಅಥವಾ ಹಿಂಸೆಗೆ ಇಳಿಯುವಂತಿಲ್ಲ.
ಫೋನ್ ಕರೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಾಲಗಾರರು ಎದುರಿಸುತ್ತಿರುವ ಕಿರುಕುಳಗಳ ಕುರಿತ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮಗಳು ಜಾರಿಗೆ ಬಂದಿವೆ.
ಸೂಕ್ತವಲ್ಲದ ಸಮಯದಲ್ಲಿ ಫೋನ್ ಕರೆ ಮಾಡುವುದು ಅಥವಾ ದೈಹಿಕ ಬಲವನ್ನು ಬಳಸುವುದನ್ನು ಆರ್ಬಿಐ ಈಗಾಗಲೇ ನಿಷೇಧಿಸಿದೆ. ಹೊಸ ನಿಯಮಾವಳಿಗಳು, ಯಾವ ಕೃತ್ಯಗಳು 'ಕಠಿಣ' ಎನಿಸಿಕೊಳ್ಳುತ್ತವೆ ಹಾಗೂ ಅವುಗಳನ್ನು ಮಾಡಬಾರದು ಎಂಬ ವ್ಯಾಪ್ತಿಯನ್ನು ವಿಸ್ತರಿಸಿವೆ.
ಬ್ಯಾಂಕ್ ಉದ್ಯೋಗಿಗಳು ಮತ್ತು ವಸೂಲಾತಿ ಏಜಂಟರು ಬೆದರಿಕೆ ಅಥವಾ ನಿಂದನೀಯ ಭಾಷೆ ಬಳಸುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಸಾಲಗಾರರ ವೈಯಕ್ತಿಕ ವಿವರಗಳನ್ನು ಹರಡುವುದು, ಅನುಚಿತ ಸಂದೇಶಗಳನ್ನು ಕಳುಹಿಸುವುದು ಅಥವಾ ಅತಿಯಾಗಿ ಕರೆ ಮಾಡುವುದನ್ನು ಕೇಂದ್ರೀಯ ಬ್ಯಾಂಕ್ ಈಗ ನಿಬರ್ಂಧಿಸಿದೆ.
ಏಜಂಟರು ಸಾಲಗಾರರನ್ನು ಅಥವಾ ಅವರನ್ನು ಪರಿಚಯಿಸಿದವರನ್ನು, ಅವರ ಸಂಬಂಧಿಕರು, ಸ್ನೇಹಿತರು ಅಥವಾ ಸಹೋದ್ಯೋಗಿಗಳನ್ನು ಬೆದರಿಸುವಂತಿಲ್ಲ ಅಥವಾ ಸಾರ್ವಜನಿಕವಾಗಿ ಅವಮಾನಿಸುವಂತಿಲ್ಲ ಎಂದು ನೂತನ ನಿಯಮಗಳು ಹೇಳುತ್ತವೆ.
ಹೊಸ ನಿಯಮಗಳು 2027 ಜನವರಿ 1ರಿಂದ ಜಾರಿಗೆ ಬರಲಿವೆ.

