ನವದೆಹಲಿ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಕೆನಡಾ ಪ್ರವೇಶ ನಿರಾಕರಿಸುವಂತೆ ಆಗ್ರಹಿಸಿ ಕೆನಡಾದ ನಾಗರಿಕ ಸಮಾಜ, ಮಾನವ ಹಕ್ಕು, ಕಾರ್ಮಿಕ ಮತ್ತು ಧಾರ್ಮಿಕ ಸಂಘಟನೆಗಳು ಸೇರಿದಂತೆ 40ಕ್ಕೂ ಅಧಿಕ ಸಂಘ ಸಂಸ್ಥೆಗಳು ಕೆನಡಾ ಸರಕಾರಕ್ಕೆ ಪತ್ರ ಬರೆದಿರುವ ಬಗ್ಗೆ ವರದಿಯಾಗಿದೆ.
ಮೋಹನ್ ಭಾಗವತ್ ಅವರು ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ಕೆನಡಾ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಭಾಗವತ್ ಕೆನಡಾಕ್ಕೆ ಮೊದಲ ಭೇಟಿಗೆ ಸಿದ್ಧರಾಗಿರುವ ಸಂದರ್ಭದಲ್ಲೇ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಜಾಗತಿಕ ಮಟ್ಟದಲ್ಲಿ ಸಂಘಟನೆಯ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನದ ಭಾಗವಾಗಿ ಆಗಸ್ಟ್ 31ರಂದು ಖSS ಮುಖ್ಯಸ್ಥ ಮೋಹನ್ ಭಾಗವತ್ ಕೆನಡಾಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿತ್ತು.
ಕೆನಡಾದ ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರಿ ಅವರಿಗೆ ಈ ಕುರಿತು ಪತ್ರವನ್ನು ಬರೆಯಲಾಗಿದೆ. ಪತ್ರದಲ್ಲಿ, ಮೋಹನ್ ಭಾಗವತ್ ಅವರ ಭೇಟಿಯಿಂದ ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆ ಬಗ್ಗೆ ಕಳವಳವನ್ನುಂಟು ಮಾಡುತ್ತದೆ ಎಂದು ಆರೋಪಿಸಲಾಗಿದೆ. ಧಾರ್ಮಿಕ ಬಹುಸಂಖ್ಯಾತವಾದ, ಬೆದರಿಕೆ ಹಾಗೂ ಗಡಿಯಾಚೆಗಿನ ದಮನದೊಂದಿಗೆ ಆರೆಸ್ಸೆಸ್ಗೆ ಸಂಬಂಧವಿದೆ ಎಂದು ಆರೋಪಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಗೆ ಆರೆಸ್ಸೆಸ್ ಸಂಬಂಧಿಸಿದ ಜಾಲಗಳು ಕಿರುಕುಳ ನೀಡಿರುವ ಆರೋಪದ ಬಗ್ಗೆ ಉಲ್ಲೇಖಿಸಿರುವ ಸಂಘಟನೆಗಳು ಭಾಗವತ್ ಅವರ ಪ್ರವೇಶವನ್ನು ಕೆನಡಾದ ಕಾನೂನುಗಳ ಅಡಿಯಲ್ಲಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದೆ.
ಪತ್ರ ಬರೆದ 40 ಸಂಘಟನೆಗಳಲ್ಲಿ ಕೆನಡಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ & ಡೆಮಾಕ್ರಸಿ ಇನ್ ಇಂಡಿಯಾ, ಕೆನಡಿಯನ್ ಕೌನ್ಸಿಲ್ ಆಫ್ ಇಂಡಿಯನ್ ಮುಸ್ಲಿಮ್ಸ್, ಕೆನಡಿಯನ್ಸ್ ಫಾರ್ ಇಂಡಿಯನ್ ಡೆಮಾಕ್ರಸಿ, ಸೌತ್ ಏಷ್ಯನ್ ದಲಿತ್ ಆದಿವಾಸಿ ನೆಟ್ವರ್ಕ್, ವರ್ಲ್ಡ್ ಸಿಖ್ ಆರ್ಗನೈಸೇಶನ್, ಕೆನಡಿಯನ್ ಕೌನ್ಸಿಲ್ ಆಫ್ ಮುಸ್ಲಿಂ ವಿಮೆನ್, ಇಂಡಿಪೆಂಡೆಂಟ್ ಜ್ಯೂಯಿಷ್ ವಾಯ್ಸಸ್ ಕೆನಡಾ, ಜಸ್ಟ್ ಪೀಸ್ ಅಡ್ವೊಕೇಟ್ಸ್, ಸೌತ್ ಏಷ್ಯನ್ ವಿಮೆನ್ಸ್ & ಇಮಿಗ್ರಂಟ್ಸ್ ಸರ್ವಿಸಸ್, ಫೆಡರೇಷನ್ ಡೆಸ್ ಫೆಮ್ಸ್ ಡು ಕ್ವಿಬೆಕ್, ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಮಿಷನ್, ಟೊರೊಂಟೊ ಈಸ್ಟ್ ಆಯಂಟಿ-ಹೇಟ್ ಮೊಬಿಲೈಸೇಶನ್ ಮತ್ತು ಏಷ್ಯನ್ ಕೆನಡಿಯನ್ ಲೇಬರ್ ಅಲಯನ್ಸ್ ಸಂಘಟನೆಗಳು ಸೇರಿವೆ.
ಬಲಪಂಥೀಯ ತೀವ್ರವಾದ, ದ್ವೇಷ ಭಾಷಣ ಮತ್ತು ವಿದೇಶಿ ಬೆದರಿಕೆಗಳಿಂದ ನಮ್ಮ ಸಮುದಾಯಗಳನ್ನು ರಕ್ಷಿಸಲು ಕೆನಡಾದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಚಿವ ಆನಂದಸಂಗರಿ ಅವರಿಗೆ ಪತ್ರದಲ್ಲಿ ಆಗ್ರಹಿಸಲಾಗಿದೆ. ಮೋಹನ್ ಭಾಗವತ್ ಅವರನ್ನು ಕೆನಡಾಕ್ಕೆ ಪ್ರವೇಶಿಸಲು ಅವಕಾಶ ನೀಡುವುದು ಮುಸ್ಲಿಮರು, ಸಿಖ್ಖರು, ಕ್ರೈಸ್ತರು, ಯಹೂದಿಗಳು ಮತ್ತು ದಲಿತರು ಸೇರಿದಂತೆ ದುರ್ಬಲ ಅಲ್ಪಸಂಖ್ಯಾತ ಸಮುದಾಯಗಳಿಗೆ ಬೆದರಿಕೆಯಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

