ಕೋಲ್ಕತಾ: 2024ರಲ್ಲಿ ಕೋಲ್ಕತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕಿರಿಯ ವೈದ್ಯೆಯ ಮೃತದೇಹವನ್ನು ಆತುರದಲ್ಲಿ ದಹನ ಮಾಡಿದ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ (ಖಿಒಅ) ಮಾಜಿ ಶಾಸಕ ನಿರ್ಮಲ್ ಘೋಷ್ ರನ್ನು ಗುರುವಾರ ಬಂಧಿಸಲಾಗಿದೆ.
ಸಾಕ್ಷ್ಯ ನಾಶ, ಕ್ರಿಮಿನಲ್ ಸಂಚು ಮತ್ತು ವ್ಯಕ್ತಿಯೊಬ್ಬರನ್ನು ಅವರ ಇಷ್ಟಕ್ಕೆ ವಿರುದ್ಧವಾಗಿ ಕೆಲಸ ಮಾಡುವಂತೆ ಒತ್ತಾಯಿಸಿದ ಆರೋಪದ ಮೇಲೆ ಈ ಬಂಧನ ನಡೆದಿದೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ತನಿಖೆಗೆ ಆದೇಶಿಸಿದ ನಾಲ್ಕು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದ್ದು, ಈ ಪ್ರಕರಣದಲ್ಲಿ ಘೋಷ್ ಸೇರಿದಂತೆ ಮೂವರು TMC ನಾಯಕರ ಹೆಸರುಗಳನ್ನು ಸೇರಿಸಲಾಗಿದೆ.
ಘೋಷ್ ಜುಲೈ 11ರಿಂದ ತಲೆಮರೆಸಿಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ತಿಂಗಳು ಅವರ ಮಗ ತೀರ್ಥಂಕರ್ರನ್ನು ಮತ್ತೊಂದು ಕ್ರಿಮಿನಲ್ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಘೋಷ್ ರನ್ನು ಒಡಿಶಾದಲ್ಲಿ ಬಂಧಿಸಲಾಗಿದ್ದು, ರಸ್ತೆ ಮಾರ್ಗವಾಗಿ ಕೋಲ್ಕತಾಗೆ ಕರೆತರಲಾಗುತ್ತಿದೆ. ಶುಕ್ರವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯೆಯ ಮೃತದೇಹ 2024ರ ಆಗಸ್ಟ್ 9ರಂದು ಪತ್ತೆಯಾಗಿತ್ತು. ಕೆಲವೇ ಗಂಟೆಗಳಲ್ಲಿ ಅವರ ಮರಣೋತ್ತರ ಪರೀಕ್ಷೆ ಪೂರ್ಣಗೊಂಡು, ಸಂಜೆಯ ವೇಳೆಗೆ ಶವಸಂಸ್ಕಾರ ಮಾಡಲಾಗಿತ್ತು. ಶವಸಂಸ್ಕಾರದ ವೇಳಾಪಟ್ಟಿಯಲ್ಲಿ ಅಂದು ಪಟ್ಟಿಯಲ್ಲಿ ಅದು ಮೂರನೇ ಮೃತದೇಹವಾಗಿತ್ತು. ಆದರೆ ಆ ಸಂಖ್ಯೆಯನ್ನು ಮೂರರಿಂದ ಒಂದಕ್ಕೆ ಬದಲಾಯಿಸಲಾಯಿತು ಎನ್ನಲಾಗಿದೆ.
ನಿಯಮಗಳ ಪ್ರಕಾರ, ಮೃತರ ಸಂಬಂಧಿಕರು ಶವಸಂಸ್ಕಾರದ ಶುಲ್ಕವನ್ನು ಪಾವತಿಸಬೇಕು ಮತ್ತು ದಾಖಲೆಗಳಿಗೆ ಸಹಿ ಮಾಡಬೇಕು. ಆದರೆ ಸಂತ್ರಸ್ತೆಯ ಕುಟುಂಬವು ಎರಡನ್ನೂ ಮಾಡಲಿಲ್ಲ ಎಂದು ಸುವೇಂದು ಅಧಿಕಾರಿ ಆಗಸ್ಟ್ 10ರಂದು ಹೇಳಿದ್ದರು ಹಾಗೂ ಹೊಸ ತನಿಖೆಗೆ ಆದೇಶ ನೀಡಿದ್ದರು.

