ಮಪುಸಾ: ಅತ್ಯಾಚಾರ ಪ್ರಕರಣದಲ್ಲಿ 10 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿರುವ ತೆಹಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ ಕೊನೆಗೂ ಕೋರ್ಟ್ಗೆ ಶರಣಾಗಿದ್ದಾರೆ. ಆಗಸ್ಟ್ 25ರಂದು ಸುಪ್ರೀಂ ಕೋರ್ಟ್ ನೀಡಿದ್ದ ಮೂರು ವಾರಗಳ ಗಡುವು ಮುಗಿಯುತ್ತಿದ್ದಂತೆ ಸೋಮವಾರ ಗೋವಾದ ಮಪುಸಾದ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮುಂದೆ ಶರಣಾಗಿದ್ದು, ನಂತರ ಅವರನ್ನು ಉತ್ತರ ಗೋವಾದ ಕೊಲ್ವೇಲ್ ನಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
2013 ರ ನವೆಂಬರ್ ನಲ್ಲಿ ಗೋವಾದಲ್ಲಿ ನಡೆದ ತೆಹಲ್ಕಾ ಪತ್ರಿಕೆಯ ಥಿಂಕ್ಫೆಸ್ಟ್ ಕಾರ್ಯಕ್ರಮದ ವೇಳೆ ಹೋಟೆಲ್ ಲಿಫ್ಟ್ ನಲ್ಲಿ ತಮ್ಮ ಕಿರಿಯ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. 2013 ನವೆಂಬರ್ 30 ರಂದು ಬಂಧಿತರಾಗಿ ಹಲವು ವಾರ ಜೈಲಿನಲ್ಲಿದ್ದ ತೇಜ್ ಪಾಲ್ ನಂತರ ಜಾಮೀನಿನ ಮೇಲೆ ಹೊರಗಿದ್ದರು. ಆದರೆ, 2021ರ ಮೇ ನಲ್ಲಿ ಗೋವಾದ ವಿಚಾರಣಾ ನ್ಯಾಯಾಲಯವು ತೇಜ್ಪಾಲ್ ಅವರಿಗೆ ಸಂದೇಹದ ಲಾಭ ನೀಡಿ, ಆರೋಪಗಳಿಂದ ಖುಲಾಸೆಗೊಳಿಸಿತ್ತು. ಪ್ರಾಸಿಕ್ಯೂಷನ್ ಸರಿಯಾದ ಸಾಕ್ಷ್ಯ ಒದಗಿಸಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಆದರೆ ಗೋವಾ ಸರ್ಕಾರ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆ ವೇಳೆ, ಕೆಳ ನ್ಯಾಯಾಲಯ ನೀಡಿದ್ದ ಖುಲಾಸೆ ಆದೇಶವನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್, ಸಂತ್ರಸ್ತೆಯ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ ಹಾಗೂ ಇಮೇಲ್ ಸಂಭಾಷಣೆಗಳನ್ನು ಆಧರಿಸಿ ತೇಜ್ಪಾಲ್ ದೋಷಿ ಎಂದು ತೀರ್ಪು ಘೋಷಿಸಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹10 ಲಕ್ಷಕ್ಕೂ ಅಧಿಕ ದಂಡ ವಿಧಿಸಿ, ದಂಡದ ಹಣವನ್ನು ಸಂತ್ರಸ್ತೆಗೆ ನೀಡುವಂತೆ ಆದೇಶಿಸಿತ್ತು.
ಆದರೆ, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ತೇಜ್ಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು ಮತ್ತು ತಮಗೆ ಜೈಲಿಗೆ ಶರಣಾಗುವುದರಿಂದ ವಿನಾಯಿತಿ ನೀಡಬೇಕು ಎಂದು ಕೋರಿದ್ದರು. ಆದರೆ ಸುಪ್ರೀಂ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿ, ಮೊದಲು ನ್ಯಾಯಾಲಯಕ್ಕೆ ಶರಣಾಗುವಂತೆ ಕಡಾಖಂಡಿತವಾಗಿ ಆದೇಶಿಸಿತು. ಅದರಂತೆ, ಸುಪ್ರೀಂ ಕೋರ್ಟ್ ನೀಡಿದ ಗಡುವಿನ ಹಿನ್ನೆಲೆಯಲ್ಲಿ, ತರುಣ್ ತೇಜ್ಪಾಲ್ ಅವರು ಗೋವಾದ ಮಪುಸಾ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಿ ಶರಣಾಗಿದ್ದಾರೆ. ಸದ್ಯ ಅವರನ್ನು ಶಿಕ್ಷೆ ಅನುಭವಿಸಲು ಉತ್ತರ ಗೋವಾದ ಕೊಲ್ವಾಲೆಯಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಮತ್ತೊಂದೆಡೆ, ಗೋವಾ ಸರ್ಕಾರವೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ತೇಜ್ಪಾಲ್ ಅವರು ಅಧಿಕಾರದಲ್ಲಿದ್ದ ಹುದ್ದೆ ಮತ್ತು ಅಪರಾಧದ ಗಂಭೀರತೆಯನ್ನು ಪರಿಗಣಿಸಿ ಅವರಿಗೆ ವಿಧಿಸಲಾಗಿರುವ 10 ವರ್ಷಗಳ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದೆ. ಜೊತೆಗೆ, ಸುಪ್ರೀಂ ಕೋರ್ಟ್ ತೇಜ್ಪಾಲ್ ಅವರ ಮೇಲ್ಮನವಿಯ ವಿಚಾರಣೆಯನ್ನು ಸೆಪ್ಟೆಂಬರ್ 22, 2026 ರಂದು ನಡೆಸಲು ದಿನಾಂಕ ನಿಗದಿಪಡಿಸಿದೆ. ಅಲ್ಲಿಯವರೆಗೆ ಅವರು ಜೈಲಿನಲ್ಲೇ ಇರಬೇಕಾಗುತ್ತದೆ.

