ಮಂಜೇಶ್ವರ: ಪುತ್ತಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಬು ಬಂಗೇರ ವೇದಿಕೆಯಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸಂಘ, ಪುತ್ತಿಗೆ ಶಾಖೆಯ ವತಿಯಿಂದ ಕುಲಾಲ ಸಂಗಮ-2026 ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಯಿತು. ಪುತ್ತಿಗೆ ಶಾಖೆಯ ಅಧ್ಯಕ್ಷ ಕೃಷ್ಣಪ್ರಸಾದ್ ಅಧ್ಯಕ್ಷತೆವಹಿಸಿದ್ದು, ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಕೋಶಾಧಿಕಾರಿ ಈಶ್ವರ್ ಕುಲಾಲ್ ಕಣ್ವತೀರ್ಥ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮೀಯಪದವು ಶಾಲಾ ಶಿಕ್ಷಕಿ ಸಾವಿತ್ರಿ ಟೀಚರ್, ಜಿಲ್ಲಾ ಕುಲಾಲ ಸಂಘದ ಸಂಘಟನಾ ಸಂಚಾಲಕ ಸುಧೀರ್ ರಂಜನ್ ದೈಗೋಳಿ, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಆನಂದ ಸಾಲಿಯಾನ್ ಕಣ್ವತೀರ್ಥ, ಶಾಖೆಯ ಹಿರಿಯ ಸದಸ್ಯ ಕೃಷ್ಣ ಮಾಸ್ತರ್ ಜಾಲು, ಬಾಬು ಕುಲಾಲ್ ಹೇರೂರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಾಜದ ಬಂಧುಗಳ ಸಮ್ಮಿಲನ, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಹಾಗೂ ಸಮಾಜದ ಗಣ್ಯರ ಗೌರವದೊಂದಿಗೆ ಅರ್ಥಪೂರ್ಣವಾಗಿ ನಡೆಯಿತು. ಮಕ್ಕಳಿಗಾಗಿ ವಿವಿಧ ಮನರಂಜನಾ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳ ಉತ್ಸಾಹಭರಿತ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ವಿವಿಧ ಕ್ಷೇತ್ರಗಳ ಪ್ರತಿಭಾನ್ವಿತರಾದ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪುತ್ತಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಮಾಜಕ್ಕಾಗಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಾದ ಹಿರಿಯ ಸದಸ್ಯ ಅಮ್ಮು ಮಾಸ್ತರ್, ದೈವ ಕರ್ಮಿ ನವೀನ್ ಕಾಶಿ, ಪುತ್ತಿಗೆ ಗ್ರಾಮ ಪಂಚಾಯತಿ ಸದಸ್ಯೆ ಪುಷ್ಪಲತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಸದಸ್ಯರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದು, ಸಮಾಜದ ಪ್ರಗತಿ, ಸಂಘಟನೆಯ ಬಲವರ್ಧನೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ವಿವಿಧ ಕಾರ್ಯಗಳ ಕುರಿತು ಸಲಹೆ ನೀಡಿದರು.
ಮುಂದಿನ ಅವಧಿಗಾಗಿ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿಯು ಸಮಾಜದ ಅಭಿವೃದ್ಧಿ, ಸಂಘಟನೆ ಮತ್ತು ಸದಸ್ಯರ ಹಿತಕ್ಕಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಕೈಗೊಂಡಿತು.
ಕಾರ್ಯದರ್ಶಿ ಸತೀಶ್ ಮಾಸ್ತರ್ ಸ್ವಾಗತಿಸಿ, ಪುರುಷೋತ್ತಮ ಮಾಸ್ತರ್ ನಿರೂಪಿಸಿದರು. ನೂತನ ಸಮಿತಿಯ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಅಮ್ಮು ಮಾಸ್ತರ್, ಗೌರವ ಸಲಹೆಗಾರರಾಗಿ ಕೃಷ್ಣ ಮಾಸ್ತರ್, ಅಧ್ಯಕ್ಷರಾಗಿ ರಾಮಚಂದ್ರ ಕುಲಾಲ್, ಕುಲಾಲ್ನಗರ, ಉಪಾಧ್ಯಕ್ಷರಾಗಿ ನಾರಾಯಣ ಎಸ್. ಜಾಲುಮೂಲೆ, ಚಂದ್ರಾವತಿ ವಿಕಾಸ ನಗರ, ಕಾರ್ಯದರ್ಶಿಯಾಗಿ ವಿಜಯ ನೂತಗುಳಿ, ಜೊತೆ ಕಾರ್ಯದರ್ಶಿಗಳಾಗಿ ಗೋಪಾಲಕೃಷ್ಣ ಮುಖಾರಿಕಂಡ, ಜಲಜಾಕ್ಷಿ ಸಜಂಕಿಲ, ಕೋಶಾಧಿಕಾರಿಯಾಗಿ ಸುಜಿತ್ ಜಾಲು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.

.jpg)
.jpg)
