ಕೋಲ್ಕತ್ತ: ರಾಜ್ಯದಾದ್ಯಂತ 252 ಮದರಸಾಗಳನ್ನು ಮುಚ್ಚುವಂತೆ ಪಶ್ಚಿಮ ಬಂಗಾಳ ಸರ್ಕಾರ ಆದೇಶಿಸಿದೆ. ಅದರ ಭಾಗವಾಗಿ ಸುಮಾರು 100 ಮದರಸಾಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ʼಹಲವು ಮದರಸಾಗಳು ಅಗತ್ಯ ಅನುಮತಿ ಪಡೆಯದಿರುವುದು ಹಾಗೂ ಸೂಕ್ತ ಮೂಲಸೌಕರ್ಯ ವ್ಯವಸ್ಥೆ ಹೊಂದಿರಲ್ಲದಿರುವುದು ಕಂಡು ಬಂದಿದೆ.
ಸರ್ಕಾರದಿಂದ ಅನುಮತಿ ಪಡೆದಿರುವ ಮದರಸಾಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆʼ ಎಂದು ಅಲ್ಪಸಂಖ್ಯಾತ ವ್ಯವಹಾರ ಮತ್ತು ಮದರಸಾ ಶಿಕ್ಷಣ ಇಲಾಖೆ ಸಚಿವ ಕ್ಷುದಿರಾಮ್ ತುಡು ತಿಳಿಸಿದ್ದಾರೆ.
ʼಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸೂಚನೆಯ ಮೇರೆಗೆ ಜೂನ್ ಆರಂಭದಿಂದ ಸಮೀಕ್ಷೆ ಕೈಗೊಳ್ಳಲಾಗಿತ್ತು. ರಾಜ್ಯದಲ್ಲಿ ಎಷ್ಟು ಅಧಿಕೃತ ಹಾಗೂ ಅನಧಿಕೃತ ಮದರಸಾಗಳಿವೆ ಎಂಬುದನ್ನು ಪಟ್ಟಿಮಾಡುವುದು ಇದರ ಉದ್ದೇಶವಾಗಿತ್ತು. ಸದ್ಯ ನೋಟಿಸ್ ನೀಡಲಾಗಿರುವ ಮದರಸಾಗಳಿಂದ ಪ್ರತಿಕ್ರಿಯೆ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದುʼ ಎಂದು ಹೇಳಿದ್ದಾರೆ.
ʼಅಗತ್ಯ ಅನುಮತಿ, ಸೂಕ್ತ ಸೌಕರ್ಯಗಳನ್ನು ಹೊಂದಿಲ್ಲದ 252 ಮದರಸಾಗಳನ್ನು ಮುಚ್ಚಲು ಆದೇಶಿಸಲಾಗಿದೆ. 100 ಮದರಸಾಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆʼ ಎಂದು ಮಾಹಿತಿ ನೀಡಿದ್ದಾರೆ.
ʼಹಲವು ಮದರಸಾಗಳ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಜೈಲು ಸೇರಿದ್ದವರು ಕೆಲವು ಮದರಸಾಗಳಲ್ಲಿ ಬೋಧಕರಾಗಿರುವುದು ಕಂಡುಬಂದಿದೆʼ ಎಂದು ಪಂಚಾಯತ್ ರಾಜ್ ಸಚಿವ ದಿಲೀಪ್ ಘೋಷ್ ಹೇಳಿಕೆ ನೀಡಿದ್ದಾರೆ.
ʼಒಂದಿಷ್ಟು ಮದರಸಾಗಳ ವಿರುದ್ಧ ಪದೇ ಪದೇ ದೂರುಗಳು ಬಂದಿದ್ದವು. ಕೆಲವೆಡೆ ದೇಶ ವಿರೋಧಿ ಚಟುವಟಿಕೆ ನಡೆದಿರುವ ಉದಾಹರಣೆಗಳಿವೆ. ಕಾನೂನಿನ ಪ್ರಕಾರವಾಗಿ ಸರ್ಕಾರದ ಅನುಮತಿಯುಳ್ಳ ಮದರಸಾಗಳು ಎಂದಿನಂತೆ ಕಾರ್ಯಾಚರಿಸಲಿವೆ. ಎಲ್ಲೆಂದರಲ್ಲಿ ಮದರಸಾ ತೆರೆದು, ತೊಂದರೆ ನೀಡಲು ಯಾರಿಗೂ ಬಿಡುವುದಿಲ್ಲʼ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಕುನಾಲ್ ಘೋಷ್, ʼಎಲ್ಲಾ ಮದರಸಾಗಳನ್ನೂ ಒಂದೇ ರೀತಿ ನೋಡಬಾರದುʼ ಎಂದಿದ್ದಾರೆ.

