HEALTH TIPS

ನೇಪಾಳ ಪ್ರವಾಹ: 665 ಜನರನ್ನು ಪತ್ತೆಹಚ್ಚಲು ನೆರವಾದ ಹೈದರಾಬಾದ್ ಟೆಕ್ಕಿ ಹೆಲ್ಪ್‌ಲೈನ್ ವೆಬ್‌ಸೈಟ್..!

 ಹೈದರಾಬಾದ್: ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದಾಗಿ ನೂರಾರು ಜನ ನಾಪತ್ತೆಯಾಗಿದ್ದು, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚಲು ಮತ್ತು ಆತಂಕದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡಲು ಹೈದರಾಬಾದ್ ಮೂಲದ ತಂತ್ರಜ್ಞರೊಬ್ಬರು ಮಾನವೀಯತೆಯ ವಿಶಿಷ್ಟ ಹೆಜ್ಜೆ ಇಟ್ಟಿದ್ದಾರೆ.


ಸೀನಿಯರ್ ಸಾಫ್ಟ್‌ವೇರ್ ಆರ್ಕಿಟೆಕ್ಟ್ ಆಗಿರುವ ಅರ್ಫತ್ ಮೊಹಮ್ಮದ್ ಎಂಬುವವರು 'ReuniteIndia.com' ಹೆಸರಿನ ವಿಶೇಷ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದ್ದು, ಈ ವೆಬ್‌ಸೈಟ್ ಪ್ರಸ್ತುತ 665 ನಾಪತ್ತೆಯಾದ ಜನರ ಮಾಹಿತಿಯನ್ನು ಕ್ರೋಡೀಕರಿಸಿ, ಅವರನ್ನು ಪತ್ತೆಹಚ್ಚಲು ನೆರವಾಗುತ್ತಿದೆ.

ಹೈದರಾಬಾದ್ ಮೂಲದ ಅರ್ಫತ್ ಮೊಹಮ್ಮದ್ ಅವರ ಆಪ್ತ ಸ್ನೇಹಿತನ ತಂದೆ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಮನೆಯಿಂದ ನಾಪತ್ತೆಯಾಗಿದ್ದರು. ಈ ಘಟನೆಯೇ ನಾಪತ್ತೆಯಾದವರ ಪತ್ತೆಗೆ ನೆರವಾಗುವ ತಂತ್ರಾಂಶ ಆಧಾರಿತ ವೇದಿಕೆಯೊಂದನ್ನು ಅಭಿವೃದ್ಧಿಪಡಿಸುವಂತೆ ಅರ್ಫತ್ ಅವರಿಗೆ ಪ್ರೇರಣೆ ನೀಡಿತು.

ಇದೀಗ ಅವರು ಅಭಿವೃದ್ಧಿಪಡಿಸಿರುವ ‘ರಿಯುನೈಟ್ ಇಂಡಿಯಾ’ ತಂತ್ರಾಂಶ ವೇದಿಕೆ ನೇಪಾಳದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದ ವೇಳೆ ನಾಪತ್ತೆಯಾದ 665 ಮಂದಿಯ ಮಾಹಿತಿಯನ್ನು ಪಟ್ಟಿ ಮಾಡುವ ಮೂಲಕ ಗಮನ ಸೆಳೆಯುತ್ತಿದೆ.

ನೇಪಾಳ ಪೊಲೀಸ್ ಇಲಾಖೆ, ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಪರಿಶೀಲಿಸಲಾದ ಕುಟುಂಬದ ವರದಿಗಳಂತಹ ಅಧಿಕೃತ ಮೂಲಗಳಿಂದ ನಾಪತ್ತೆಯಾದವರು, ರಕ್ಷಿಸಲ್ಪಟ್ಟವರು ಮತ್ತು ಸುರಕ್ಷಿತವಾಗಿರುವವರ ಮಾಹಿತಿಯನ್ನು ಸಂಗ್ರಹಿಸಿ ವೇದಿಕೆಯಲ್ಲಿ ಪಟ್ಟಿ ಮಾಡಲಾಗಿದೆ.

ಪೊಲೀಸ್ ಇಲಾಖೆಯ ದಾಖಲೆಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ, ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿವಿಧ ಮಾಹಿತಿಗಳನ್ನು ಒಂದೇ ವೇದಿಕೆಯಲ್ಲಿ ಸಂಗ್ರಹಿಸಲಾಗುತ್ತದೆ.

ವಿವಿಧ ಮೂಲಗಳಲ್ಲಿ ಹೆಸರು, ದಿನಾಂಕ ಮತ್ತು ಮಾಹಿತಿಯ ಸ್ವರೂಪಗಳಲ್ಲಿ ವ್ಯತ್ಯಾಸಗಳಿದ್ದರೂ, ಪ್ರತಿಯೊಂದು ಪ್ರಕರಣವನ್ನೂ ಅದರ ಮೂಲ ದಾಖಲೆ ಅಥವಾ ಮಾಹಿತಿಯೊಂದಿಗೆ ಜೋಡಿಸುವ ಮೂಲಕ ಕುಟುಂಬದ ಸದಸ್ಯರು ತಮ್ಮ ಆಪ್ತರನ್ನು ಹುಡುಕಲು ನೆರವಾಗುವಂತೆ ವೇದಿಕೆಯನ್ನು ರೂಪಿಸಲಾಗಿದೆ.

ಅರ್ಫತ್ ಮೊಹಮ್ಮದ್ ಅವರು ಅಮೆರಿಕದ ವಿಚಿಟಾ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ತಂತ್ರಾಂಶ ಅಭಿವೃದ್ಧಿ ಮತ್ತು ನವೀನ ಪ್ರಯೋಗಗಳ ಕ್ಷೇತ್ರದಲ್ಲಿನ ಅವರ ಸಾಧನೆಗಾಗಿ ವಿಶ್ವವಿದ್ಯಾಲಯದ ರತಿಗನ್ ವಿದ್ಯಾರ್ಥಿ ಕೇಂದ್ರದಲ್ಲಿ ಅವರ ಹೆಸರಿನ ಗೋಡೆ ಸಮರ್ಪಣೆ ಮಾಡಲಾಗಿದೆ.

ನಾಪತ್ತೆಯಾದವರನ್ನು ಪತ್ತೆಹಚ್ಚುವುದಷ್ಟೇ ಅಲ್ಲದೆ, ಪ್ರತಿಯೊಂದು ಪ್ರಕರಣದ ಪುಟದಿಂದ ಹಂಚಿಕೊಳ್ಳಬಹುದಾದ ಪ್ರಕಟಣೆಯನ್ನೂ ಸಿದ್ಧಪಡಿಸಬಹುದು. ಅದರಲ್ಲಿ ನೈಜ ಕ್ಯೂಆರ್ ಸಂಕೇತವಿದ್ದು, ಅದನ್ನು ಸ್ಕ್ಯಾನ್ ಮಾಡಿದಾಗ ಸಂಬಂಧಪಟ್ಟ ವ್ಯಕ್ತಿಯ ನೇರ ಸ್ಥಿತಿಗತಿಗೆ ಕರೆದೊಯ್ಯುತ್ತದೆ. ಹೀಗಾಗಿ ಮುದ್ರಿಸಿ ಹಂಚಿದ ಪ್ರಕಟಣೆಯನ್ನು ಹಲವು ವಾರಗಳ ಬಳಿಕವೂ ಯಾರಾದರೂ ಸ್ಕ್ಯಾನ್ ಮಾಡಿದರೆ, ಆ ವ್ಯಕ್ತಿಯ ಇತ್ತೀಚಿನ ಸ್ಥಿತಿಯನ್ನು ತಿಳಿದುಕೊಳ್ಳಬಹುದು.


ನಾಪತ್ತೆಯಾದ ವ್ಯಕ್ತಿಯನ್ನು ಕೊನೆಯದಾಗಿ ನೋಡಿದ ಸ್ಥಳದ ಸಮೀಪದಲ್ಲಿರುವ ಆಸ್ಪತ್ರೆಗಳು ಮತ್ತು ಪೊಲೀಸ್ ಠಾಣೆಗಳನ್ನೂ ತಂತ್ರಾಂಶ ಗುರುತಿಸಬಲ್ಲದು. ಪೊಲೀಸ್ ದೂರು ಇನ್ನೂ ದಾಖಲಿಸದಿದ್ದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ವೇದಿಕೆ ಮಾರ್ಗದರ್ಶನ ನೀಡುತ್ತದೆ.

‘ರಿಯುನೈಟ್ ಇಂಡಿಯಾ’ದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಸರ್ಕಾರಿ ಪ್ರಕಟಣೆಗಳು, ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿಯಂತಹ ಮೂಲಗಳಿಂದ ಲಭ್ಯವಾಗುವ ಅಸಂಘಟಿತ ಮಾಹಿತಿಯನ್ನು ವ್ಯವಸ್ಥಿತ ಪ್ರಕರಣಗಳಾಗಿ ರೂಪಿಸಲು ಇದು ನೆರವಾಗುತ್ತದೆ. ಬಳಿಕ ಅರ್ಫತ್ ಅವರು ಮಾಹಿತಿಯನ್ನು ಪರಿಶೀಲಿಸುತ್ತಾರೆ. ಜನರ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲು ಸಂಪನ್ಮೂಲಗಳ ಪುಟದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸಂವಾದ ವ್ಯವಸ್ಥೆಯೊಂದನ್ನು ಅಳವಡಿಸುವ ಕೆಲಸವೂ ನಡೆಯುತ್ತಿದೆ.

‘ರಿಯುನೈಟ್ ಇಂಡಿಯಾ’ ಕೇವಲ ನೇಪಾಳ ಪ್ರವಾಹದಲ್ಲಿ ನಾಪತ್ತೆಯಾದವರನ್ನು ಪತ್ತೆಹಚ್ಚುವ ವೇದಿಕೆಯಾಗಬಾರದು ಎಂಬುದು ತಮ್ಮ ಉದ್ದೇಶ ಎಂದು ಅರ್ಫತ್ ಮೊಹಮ್ಮದ್ ಹೇಳಿದ್ದಾರೆ.

ವರ್ಷದ ಯಾವುದೇ ಸಮಯದಲ್ಲಿ, ಭಾರತದಲ್ಲಿ ಯಾರಾದರೂ ನಾಪತ್ತೆಯಾದಾಗ ಅವರ ಕುಟುಂಬ ಮೊದಲು ಸಂಪರ್ಕಿಸಬಹುದಾದ ವಿಶ್ವಾಸಾರ್ಹ ವೇದಿಕೆಯಾಗಬೇಕು ಎಂಬುದು ತಮ್ಮ ಆಶಯ ಎಂದು ತಿಳಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries