ತಿರುವನಂತಪುರಂ: ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಆಲಪ್ಪುಳ ಜಿಲ್ಲೆಯ 6ನೇ ತರಗತಿ ವಿದ್ಯಾರ್ಥಿ ಆದಿತ್ಯನ್ ಎಂಬಾತನಿಗೆ ಕೇರಳ ಸರ್ಕಾರ ಪ್ರಶಸ್ತಿ ಜೊತೆಗೆ ಹೊಸದೊಂದು ಮನೆಯನ್ನೂ ನೀಡುತ್ತಿದೆ.
ಚೇತಲಾ ಪಟ್ಟಣದಲ್ಲಿ ಅಪ್ಪ, ಅಮ್ಮನೊಂದಿಗೆ ಸಣ್ಣದೊಂದು ತಾತ್ಕಾಲಿಕ ಶೆಡ್ನಲ್ಲಿ ವಾಸಿಸುತ್ತಿದ್ದ ಆದಿತ್ಯನ್, ಭತ್ತ ಮತ್ತು ತರಕಾರಿ ಬೆಳೆಯುವುದರಲ್ಲಿ ನಿರತನಾಗಿದ್ದಾನೆ.
ಅಲಂಕಾರಿಕ ಮೀನು, ಮೇಕೆ, ಕೋಳಿ, ಬಾತುಕೋಳಿ ಹಾಗೂ ಹಸುಗಳನ್ನೂ ಸಾಕುತ್ತಿದ್ದಾನೆ.
ಹೀಗಾಗಿ, ರಾಜ್ಯ ಸರ್ಕಾರ ನೀಡುವ 'ಅತ್ಯುತ್ತಮ ವಿದ್ಯಾರ್ಥಿ ರೈತ ಪ್ರಶಸ್ತಿ'ಗೆ ಕಳೆದ ವರ್ಷ ಭಾಜನವಾಗಿದ್ದ. ಪ್ರಶಸ್ತಿಗೆ ಆಯ್ಕೆಯಾದ ನಂತರ, ಆತನ ಆರ್ಥಿಕ ಮತ್ತು ಕೌಟುಂಬಿಕ ಜೀವನದ ಸ್ಥಿತಿಯ ಬಗ್ಗೆ ವರದಿಯಾಗಿತ್ತು.
ಕೃಷಿ ಮೇಲೆ ಬಾಲಕನಿಗಿರುವ ಆಸಕ್ತಿ ಮತ್ತು ಆತನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಕಂಡ ಕೃಷಿ ಸಚಿವ ಟಿ. ಸಿದ್ದಿಕಿ ಅವರು ಮನೆ ಕಟ್ಟಿಸಿಕೊಡುವುದಾಗಿ ಘೋಷಿಸಿದ್ದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಆಲಪ್ಪುಳ ಸಂಸದರಾಗಿರುವ ಕೆ.ಸಿ. ವೇಣುಗೋಪಾಲ್ ಅವರು ಮನೆ ನಿರ್ಮಾಣಕ್ಕೆ ಭಾನುವಾರ (ಸೆಪ್ಟೆಂಬರ್ 6ರಂದು) ಅಡಿಗಲ್ಲು ಹಾಕಿದ್ದಾರೆ. ಉದ್ಯಮಿಯೊಬ್ಬರು ಮನೆ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ ಎನ್ನಲಾಗಿದೆ.
ಆದಿತ್ಯನ್ ಚೇರ್ತಲಾದ ಅರೀಪ್ಪರಂಬು ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ಓದುತ್ತಿರುವ ಬಾಲಕ, ಶಾಲೆಯಲ್ಲೂ ಕೃಷಿ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದಾನೆ. ಮುಂದೆ ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳಬೇಕು ಎಂಬುದು ಆತನ ಕನಸು.

