ನವದೆಹಲಿ: ರಾಷ್ಟ್ರ ರಾಜಧಾನಿ ಯಾದ್ಯಂತ ನಡೆಯುತ್ತಿರುವ ಕಾಲೇಜು ಗಳು, ವಿಶ್ವವಿದ್ಯಾಲಯಗಳ ಬಳಿ ಇರುವ ಎಲ್ಲ ಪೇಯಿಂಗ್ ಗೆಸ್ಟ್ (ಪಿ.ಜಿ), ವಸತಿ ಗೃಹಗಳು, ಖಾಸಗಿ ಹಾಸ್ಟೆಲ್ಗಳು ಮತ್ತು ಇತರೆ ವಿದ್ಯಾರ್ಥಿ ವಸತಿಗಳ ಸುರಕ್ಷತಾ ತಪಾಸಣೆ ನಡೆಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನೇಮಿಸಿರುವ ಅಮಿಕಸ್ ಕ್ಯೂರಿ ಪ್ರತಿಪಾದಿಸಿದ್ದಾರೆ.
ಸತ್ಯ ನಿಕೇತನದಲ್ಲಿ ಪಿ.ಜಿ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಬೆನ್ನಲ್ಲೇ ಅವರು ಕಟ್ಟಡಗಳ ಸುರಕ್ಷತಾ ತಪಾಸಣಾ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವಂತೆ ಮಂಗಳವಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.
ದುರಂತಗಳು ಪುನರಾವರ್ತನೆ ಆಗುತ್ತಿದ್ದು, ಕಟ್ಟಡ ನಿಯಮಗಳು ಎಷ್ಟರ ಮಟ್ಟಿಗೆ ಪಾಲನೆ ಆಗುತ್ತಿವೆ ಎಂಬುದರ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಹಿರಿಯ ವಕೀಲ ಅಜಿತ್ ಕುಮಾರ್ ಸಿನ್ಹಾ ಹೇಳಿದ್ದಾರೆ.
'ಈ ರೀತಿಯ ಕಟ್ಟಡಗಳ ಅನುಮೋದಿತ ನಕ್ಷೆಯಂತೆಯೇ ನಿರ್ಮಾಣ ಆಗಿವೆಯೇ, ಬೈಲಾಗಳು ಪಾಲನೆಯಾಗಿವೆಯೇ, ಮಹಡಿಗಳ ಸಂಖ್ಯೆ ಮತ್ತು ಬೇಸ್ಮೆಂಟ್ನಲ್ಲಿ ಬದಲಾವಣೆಗಳಾಗಿವೆಯೇ, ಅಗ್ನಿ ಸುರಕ್ಷತಾ ಮಾನದಂಡಗಳನ್ನು ಅನುರಿಸ ಲಾಗುತ್ತಿದೆಯೇ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳು ಸೇರಿದಂತೆ ಇತ್ಯಾದಿ ಸುರಕ್ಷತಾ ವಿಷಯಗಳ ಕುರಿತು ಸಮರ್ಥ ಅಧಿಕಾರಿಗಳಿಂದ ನಿರ್ದಿಷ್ಟ ಕಾಲಮಿತಿಯಲ್ಲಿ ಪರಿಶೀಲಿಸುವ ಅಗತ್ಯವಿದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
ದೆಹಲಿಯಲ್ಲಿನ ಅನಧಿಕೃತ ಮತ್ತು ಅಸುರಕ್ಷಿತ ನಿರ್ಮಾಣಗಳ ಕುರಿತು ಸುಪ್ರೀಂ ಕೋರ್ಟ್ 2026ರ ಜುಲೈ 9ರಂದು ಸಮಿತಿ ರಚಿಸಿತ್ತು. ಲಜಪತ್ ನಗರ, ಸಾಕೇತ್ ಮತ್ತು ಮಾಲ್ವಿಯಾ ನಗರಗಳಲ್ಲಿನ ಕಟ್ಟಡಗಳನ್ನು ಪರಿಶೀಲಿ ಸಲು ಕೋರ್ಟ್ ನಿರ್ದೇಶಿಸಿತ್ತು. ಅದರಂತೆ ಸಮಿತಿಯು 2026ರ ಸೆಪ್ಟೆಂಬರ್ 3ರಂದು ಪರಿಶೀಲನೆಯನ್ನು ಪೂರ್ಣಗೊಳಿಸಿದ್ದು, ವರದಿಯನ್ನು ಶೀಘ್ರ ದಲ್ಲಿಯೇ ಮಂಡಿಸುವನಿರೀಕ್ಷೆಯಿದೆ.
ಕಾರ್ಮಿಕ ಗುತ್ತಿಗೆದಾರನ ಬಂಧನ
ನವದೆಹಲಿ: ಸತ್ಯ ನಿಕೇತನದಲ್ಲಿ ಐದು ಮಹಡಿಯ ಪೇಯಿಂಗ್ ಗೆಸ್ಟ್ (ಪಿ.ಜಿ) ಕಟ್ಟಡ ಕುಸಿತ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕಸ್ಗಂಜ್ನಿಂದ ಕಾರ್ಮಿಕ ಗುತ್ತಿಗೆದಾರ ಸನೋಜ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
'ಹಾಸ್ಟೆಲ್ ಡೇಜ್ ಪಿ.ಜಿ' ಕಟ್ಟಡದಲ್ಲಿ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳ ಕುರಿತ ತನಿಖೆಯ ಭಾಗವಾಗಿ ಸನೋಜ್ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

