ಶೋಪಿಯಾನ್ : ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಗುಡ್ಡಗಾಡು ಪ್ರದೇಶದ ತೋಟಗಳಲ್ಲಿ ಸೇಬು ಕೊಯ್ಲು ಜೋರಾಗಿದೆ. ಮರದ ಕೊಂಬೆಗಳಿಂದ ಸೇಬುಗಳನ್ನು ಕಿತ್ತು, ಬುಟ್ಟಿಗಳಲ್ಲಿ ತುಂಬಿ, ಒಣ ಹುಲ್ಲಿನ ಮೇಲೆ ಹರಡಿದ ಶೀಟ್ಗಳ ಮೇಲೆ ಸುರಿಯುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.
ಇಲ್ಲಿ, ಸೇಬುಗಳನ್ನು 2 ದರ್ಜೆಗಳಾಗಿ ವಿಂಗಡಿಸಲಾಗುತ್ತದೆ. ಆದರೆ, ಈ ಸುಗ್ಗಿಯ ಸಂಭ್ರಮದ ನಡುವೆಯೂ ಸೇಬು ಬೆಳೆಗಾರರ ಮುಖದಲ್ಲಿ ಸಂಕಷ್ಟ ಮತ್ತು ಆತಂಕದ ಛಾಯೆ ಎದ್ದು ಕಾಣುತ್ತಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಕಾಶ್ಮೀರದ ಬೆಳೆ, ದೆಹಲಿಯಲ್ಲಿ ದರ ನಿಗದಿ: ಮಧ್ಯವರ್ತಿಗಳ ಕೈಯಲ್ಲಿ ಸೇಬು ಬೆಳೆಗಾರರು
ಒಂದು ಸಾಲಿನಲ್ಲಿಕಾಶ್ಮೀರದ ಸೇಬು ಬೆಳೆಗಾರರು ದೆಹಲಿಯ ಮಂಡಿಯ ಮಧ್ಯವರ್ತಿಗಳ ಹಿಡಿತದಲ್ಲಿ ಸಿಲುಕಿದ್ದು, ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಏನು? ಏಕೆ? ಹೇಗೆ?
ಕಾಶ್ಮೀರದ ಸೇಬು ಬೆಳೆಗಾರರು ದೆಹಲಿಯ ಮಂಡಿಯನ್ನು ಏಕೆ ಅವಲಂಬಿಸಿದ್ದಾರೆ?
ಕಾಶ್ಮೀರದ ತೋಟಗಳಲ್ಲಿ ಬೆಳೆದ ಸೇಬಿನ ಅಂತಿಮ ಬೆಲೆ ನಿರ್ಧಾರವಾಗುವುದು ಸ್ಥಳೀಯವಾಗಿ ಅಲ್ಲ, ಬದಲಾಗಿ ನೂರಾರು ಕಿಲೋಮೀಟರ್ ದೂರವಿರುವ ದೆಹಲಿಯ ಆಜಾದ್ಪುರ ಮಂಡಿಯಲ್ಲಿ.
ಸೇಬು ಬೆಳೆಗಾರರ ಲಾಭವನ್ನು ಮಧ್ಯವರ್ತಿಗಳು ಕಬಳಿಸುತ್ತಿರುವುದು ಹೇಗೆ?
ಬೆಳೆಗಾರರು ಮತ್ತು ಗ್ರಾಹಕರ ನಡುವೆ ಸಾಲು ಸಾಲು ಮಧ್ಯವರ್ತಿಗಳಿರುವುದರಿಂದ, ರೈತರು ಅಲ್ಪ ಲಾಭಕ್ಕೆ ಸೀಮಿತವಾಗುತ್ತಿದ್ದಾರೆ, ಆದರೆ ಮಾರುಕಟ್ಟೆಯಲ್ಲಿ ಸೇಬು ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ.
ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯಿಂದ ಸಣ್ಣ ರೈತರಿಗೆ ಆಗುವ ತೊಂದರೆಗಳೇನು?
ಹೆಚ್ಚಿನ ಬಾಡಿಗೆಯ ಕಾರಣದಿಂದ ಕೋಲ್ಡ್ ಸ್ಟೋರೇಜ್ ಕೇವಲ 'ಎ' ಗ್ರೇಡ್ ಸೇಬು ಹೊಂದಿರುವವರಿಗೆ ಮಾತ್ರ ಲಾಭದಾಯಕವಾಗಿದ್ದು, ಸಾಧಾರಣ ಬೆಳೆ ಬೆಳೆಯುವ ಸಣ್ಣ ರೈತರಿಗೆ ಇದು ಆರ್ಥಿಕ ಹೊರೆಯಾಗಿದೆ.
ಸೇಬು ಬೆಳೆಯ ಉತ್ಪಾದನಾ ವೆಚ್ಚ ಏಕೆ ಹೆಚ್ಚುತ್ತಿದೆ?
ಗೊಬ್ಬರ, ಕ್ರಿಮಿನಾಶಕ, ಕಾರ್ಮಿಕರ ಕೂಲಿ ಮತ್ತು ಸಾರಿಗೆ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿವೆ, ಇದು ರೈತರ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಈ ಸಮಸ್ಯೆಗೆ ಪರಿಹಾರವೇನು ಎಂದು ಬೆಳೆಗಾರರು ಹೇಳುತ್ತಾರೆ?
ರೈತರು ಒಗ್ಗೂಡಿ ನೇರವಾಗಿ ಖರೀದಿದಾರರೊಂದಿಗೆ ಮಾತುಕತೆ ನಡೆಸುವ ಸಂಘಟಿತ ಮಾರುಕಟ್ಟೆ ವ್ಯವಸ್ಥೆ ರೂಪಿಸುವುದು ಮತ್ತು ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಬೆಳೆಗಾರರು ಅಭಿಪ್ರಾಯಪಡುತ್ತಾರೆ.
ಪ್ರಮುಖ ಅಂಕಿಅಂಶಗಳು
₹550-600ಒಂದು ಪೆಟ್ಟಿಗೆ ಸೇಬು ಉತ್ಪಾದನಾ ವೆಚ್ಚ₹900-1000ಎ ದರ್ಜೆ ಸೇಬಿನ ಮಾರಾಟ ಬೆಲೆ18 ಕೆ.ಜಿಒಂದು ಪೆಟ್ಟಿಗೆಯ ತೂಕ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಏಕೆಂದರೆ ಇಲ್ಲಿನ ತೋಟಗಳಲ್ಲಿ ಹಗಲಿರುಳು ಬೆವರು ಹರಿಸಿ ಬೆಳೆದ ಸೇಬಿಗೆ ಅಂತಿಮ ಬೆಲೆ ನಿಗದಿಯಾಗುವುದು ಕಾಶ್ಮೀರದ ಮಣ್ಣಿನಲ್ಲಲ್ಲ, ಬದಲಾಗಿ ನೂರಾರು ಕಿಲೋಮೀಟರ್ ದೂರದಲ್ಲಿರುವ ದೆಹಲಿಯ 'ಆಜಾದ್ಪುರ ಮಂಡಿ'ಯಲ್ಲಿ!
ಅಲ್ಲಿ ಸೇಬುಗಳ ಗುಣಮಟ್ಟದ ಆಧಾರದ ಮೇಲೆ 2 ಹಂತದ ವಿಂಗಡಣೆ ನಡೆಯುತ್ತದೆ. ಉತ್ತಮ ಗುಣಮಟ್ಟದ 'ಎ' ಗ್ರೇಡ್ ಸೇಬುಗಳನ್ನು ಪೆಟ್ಟಿಗೆಗಳಿಗೆ ಪ್ಯಾಕ್ ಮಾಡಿದರೆ, ಸಾಧಾರಣ ಮಟ್ಟದ ಸೇಬುಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ.
ಶೋಪಿಯಾನ್ ಸೇರಿದಂತೆ ನೆರೆಯ ಪುಲ್ವಾಮಾ ಮತ್ತು ಕುಲ್ಗಾಮ್ ಜಿಲ್ಲೆಗಳ ತೋಟಗಳಲ್ಲೂ ಈಗ ಇದೇ ದೃಶ್ಯ. ಇದು ಕೊಯ್ಲಿನ ಸುಗ್ಗಿ ಕಾಲ. ಸೇಬುಗಳನ್ನು ಕೊಯ್ದು, ವಿಂಗಡಿಸಿ, ಪ್ಯಾಕ್ ಮಾಡಿ ಕಾಶ್ಮೀರದಿಂದ ಹೊರಗಿನ ರಾಜ್ಯಗಳ ಮಾರುಕಟ್ಟೆಗೆ ರವಾನಿಸಲು ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ.
ಪರಿಶ್ರಮ ಬೆಳೆಗಾರರದ್ದು, ಲಾಭ ಮಧ್ಯವರ್ತಿಗಳಿಗೆ
18 ಕೆ.ಜಿ ತೂಕದ ಒಂದು ಪೆಟ್ಟಿಗೆ ಸೇಬುವನ್ನು ಉತ್ಪಾದಿಸಲು ಸುಮಾರು ₹550-600 ವೆಚ್ಚವಾಗುತ್ತದೆ . ಗುಣಮಟ್ಟವನ್ನು ಅವಲಂಬಿಸಿ, ವ್ಯಾಪಾರಿಗಳು ಎ ದರ್ಜೆಯ ಹಣ್ಣಿಗೆ ಸುಮಾರು ₹900-1000 ನೀಡುತ್ತಾರೆ, ಆದರೆ ಬಿ ಮತ್ತು ಸಿ ದರ್ಜೆಯ ಹಣ್ಣಿಗೆ ಕಡಿಮೆ ಬೆಲೆ ಸಿಗುತ್ತದೆ ಸಿಗುತ್ತದೆ ಎನ್ನುತ್ತಾರೆ 55 ವರ್ಷದ ರೈತ ಅಬ್ಬಾಸ್ ಅಹ್ಮದ್.
ಬೆಳೆಗಾರರಿಗೆ ನ್ಯಾಯಯುತ ಬೆಲೆ ಸಿಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ನಮಗೆ ನೇರವಾಗಿ ಮಾರುಕಟ್ಟೆಯನ್ನು ತಲುಪುವ ಅವಕಾಶವೇ ಇಲ್ಲ. ಬೆಳೆಗಾರರು ಮತ್ತು ಗ್ರಾಹಕರ ನಡುವೆ ಸಾಲು ಸಾಲು ಮಧ್ಯವರ್ತಿಗಳಿದ್ದಾರೆ. ನಾವು ಬೆಳೆದ ಸೇಬು ಕಾಶ್ಮೀರದಿಂದ ಹೊರಗೆ ಹೋದ ತಕ್ಷಣ ದುಬಾರಿ ಬೆಲೆಗೆ ಮಾರಾಟವಾಗುವುದನ್ನು ಕಂಡಾಗ ಹೊಟ್ಟೆಯುರಿಯಾಗುತ್ತದೆ' ಎಂದು ಬೇಸರ ವ್ಯಕ್ತಪಡಿಸಿದ್ತಾರೆ.
ಬಿಹಾರದಿಂದ ಬಂದಿರುವ ವಲಸೆ ಕಾರ್ಮಿಕರು ದಶಕಗಳಿಂದ ಈ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಧ್ಯಾಹ್ನದ ಅಲ್ಪ ವಿರಾಮದ ನಂತರ ಮತ್ತೆ ಕೆಲಸ ಚುರುಕುಗೊಳ್ಳುತ್ತದೆ. ಆದರೆ, ಬೆಳೆಗಾರರಿಗೆ ಮಾತ್ರ ಯಾವಾಗ ಮತ್ತು ಎಲ್ಲಿ ಮಾರಾಟ ಮಾಡಬೇಕು? ಎಂಬ ಚಿಂತೆ ಕಾಡುತ್ತಲೇ ಇರುತ್ತದೆ ಎನ್ನುತ್ತಾರೆ ಅವರು.
ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ
ಕೊಯ್ಲಿನ ಸಮಯದಲ್ಲಿ ಬೆಲೆ ಕುಸಿದಾಗ ಸೇಬುಗಳನ್ನು ಸಂಗ್ರಹಿಸಿಡಲು ಇತ್ತೀಚಿನ ವರ್ಷಗಳಲ್ಲಿ 'ಕೋಲ್ಡ್ ಸ್ಟೋರೇಜ್' ವ್ಯವಸ್ಥೆ ಬೆಳೆಗಾರರಿಗೆ ನೆರವಾಗಿದೆ. ಆದರೆ, ಅದಕ್ಕೂ ಭಾರಿ ಬಾಡಿಗೆ ಪಾವತಿಸಬೇಕಿರುವುದರಿಂದ ಕೇವಲ 'ಎ' ಗ್ರೇಡ್ ಸೇಬುಗಳನ್ನು ಹೊಂದಿರುವ ರೈತರಿಗೆ ಮಾತ್ರ ಇದು ಲಾಭದಾಯಕ. ಸಾಧಾರಣ ದರ್ಜೆಯ ಸೇಬು ಬೆಳೆಯುವ ಸಣ್ಣ ರೈತರಿಗೆ ಕೋಲ್ಡ್ ಸ್ಟೋರೇಜ್ ಕೂಡ ಹೆಚ್ಚುವರಿ ಹೊರೆಯಾಗಿ ಪರಿಣಮಿಸಿದೆ.
ಇನ್ನೊಂದೆಡೆ, ಉತ್ಪಾದನಾ ವೆಚ್ಚವೂ ಅಧಿಕವಾಗುತ್ತಿದೆ. ಗೊಬ್ಬರ, ಕ್ರಿಮಿನಾಶಕ, ಕೂಲಿ ಹಾಗೂ ಸಾರಿಗೆ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿವೆ. ಎಷ್ಟು ಉತ್ತಮ ದರ್ಜೆಯ ಸೇಬು ಬೆಳೆದರೂ ಬೆಲೆಯ ಮೇಲಿನ ನಿಯಂತ್ರಣ ಮಾತ್ರ ರೈತರ ಕೈಗೆ ಸಿಗುತ್ತಿಲ್ಲ ಎಂದು ಅವರು ವಿವರಿಸಿದ್ದಾರೆ.
ಇದೇ ಕಳವಳವನ್ನು ಇತರ ಬೆಳೆಗಾರರೂ ವ್ಯಕ್ತಪಡಿಸಿದ್ದಾರೆ. ನಮಗೆ ಸಿಗುತ್ತಿರುವ ಬೆಲೆ ತೃಪ್ತಿಕರವಾಗಿಲ್ಲ ಹಾಗೂ ಸ್ಥಳೀಯ ಮಧ್ಯವರ್ತಿಗಳನ್ನೇ ನೆಚ್ಚಿಕೊಳ್ಳಬೇಕಾದ ಅಸಹಾಯಕರ ಸ್ಥಿತಿ ನಮ್ಮದಾಗಿದೆ ಎನ್ನುತ್ತಾರೆ ಸೇಬು ಬೆಳೆಗಾರ ಬಿಲಾಲ್ ದಾರ್.
ಜಾಗತಿಕ ಮಾರುಕಟ್ಟೆಯ ಪೈಪೋಟಿಯನ್ನು ಎದುರಿಸಲು ಕಾಶ್ಮೀರದ ಸೇಬು ಉದ್ಯಮವು ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎನ್ನುತ್ತಾರೆ ಪುಲ್ವಾಮಾದ ಮತ್ತೊಬ್ಬ ಬೆಳೆಗಾರ ವಾಹಿದ್ ವಾನಿ.
ದೆಹಲಿ ಮಾರುಕಟ್ಟೆಯ ಕಪಿಮುಷ್ಟಿ
ಸ್ಥಳೀಯ ಸೇಬು ವರ್ತಕ ಖಾಝಿರ್ ಮೊಹಮ್ಮದ್ ಭಟ್ ಅವರು ಬೆಳೆಗಾರರ ಆರೋಪವನ್ನು ತಳ್ಳಿಹಾಕಿದ್ದಾರೆ. ಸೇಬಿನ ಅಂತಿಮ ಬೆಲೆಯನ್ನು ನಿಗದಿಪಡಿಸುವ ಅಧಿಕಾರ ಕಾಶ್ಮೀರದ ಸ್ಥಳೀಯ ವರ್ತಕರ ಕೈಯಲ್ಲಿಲ್ಲ. ದೆಹಲಿಯ ಆಜಾದ್ಪುರ ಮಂಡಿಯಲ್ಲಿ ಕುಳಿತಿರುವ ವರ್ತಕರೇ ಅಂತಿಮ ಬೆಲೆಯನ್ನು ನಿರ್ಧರಿಸುತ್ತಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಇದರ ಜೊತೆಗೆ ಸಾರಿಗೆ ವೆಚ್ಚ, ಲೋಡಿಂಗ್ ಕೂಲಿ ಮತ್ತು ಕಮಿಷನ್ ದರಗಳು ತೀವ್ರವಾಗಿ ಏರಿಕೆಯಾಗಿವೆ. ರೈತರು ಒಗ್ಗೂಡಿ ಹೊರರಾಜ್ಯಗಳ ದೊಡ್ಡ ಖರೀದಿದಾರರೊಂದಿಗೆ ನೇರವಾಗಿ ಮಾತುಕತೆ ನಡೆಸುವ ಯಾವುದೇ ಸಂಘಟಿತ ಮಾರುಕಟ್ಟೆ ವ್ಯವಸ್ಥೆ ಇಲ್ಲಿಲ್ಲ. ಹೀಗಾಗಿ, ಸೇಬು ಬೆಳೆಗಾರ ಈ ಇಬ್ಬರ ನಡುವೆ (ಮಾರುಕಟ್ಟೆ ಮತ್ತು ಮಧ್ಯವರ್ತಿಗಳು) ನಡುವೆ ಸಿಲುಕಿಕೊಳ್ಳುತ್ತಾನೆ ಎನ್ನುತ್ತಾರೆ ಅವರು.

