ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷ, ರಷ್ಯಾ-ಉಕ್ರೇನ್ ನಡುವಿನ ಯುದ್ಧ ಹಾಗೂ ಜಾಗತಿಕ ಆರ್ಥಿಕ ಅಸ್ಥಿರತೆ ನಡುವೆಯೇ 18ನೇ 'ಬ್ರಿಕ್ಸ್' ಶೃಂಗಸಭೆಗೆ ವೇದಿಕೆ ಅಣಿಯಾಗಿದೆ. ಸದಸ್ಯ ರಾಷ್ಟ್ರಗಳ ಆರ್ಥಿಕ ಪ್ರಗತಿಯನ್ನು ಸಂಭ್ರಮಿಸಲು, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳ ಭವಿಷ್ಯದ ಕಾರ್ಯಸೂಚಿಗಳಿಗೆ ಅನುಮೋದನೆ ನೀಡಲು ಬ್ರಿಕ್ಸ್ ರಾಷ್ಟ್ರಗಳ ನಾಯಕರು 'ಭಾರತ ಮಂಟಪ'ದಲ್ಲಿ ಸೇರಲಿದ್ದಾರೆ.
ತಮ್ಮ ರಾಷ್ಟ್ರದ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಸೇನಾ ದಾಳಿಗಳನ್ನು ಬ್ರಿಕ್ಸ್ ರಾಷ್ಟ್ರಗಳು ಬಲವಾಗಿ ಖಂಡಿಸಿ ಕಠಿಣ ನಿರ್ಣಯ ತೆಗೆದುಕೊಳ್ಳಬೇಕು ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್ ಅವರು ಶೃಂಗಸಭೆಯಲ್ಲಿ ಪ್ರಸ್ತಾಪಿಸಲು ಸಜ್ಜಾಗಿ ಬಂದಿದ್ದಾರೆ. ಅವರಿಗೆ ಸೌದಿ ಅರೇಬಿಯಾ ಹಾಗೂ ಯುಎಇ ನಾಯಕರಿಂದ ಪ್ರತಿರೋಧ ಎದುರಾಗುವ ಸಾಧ್ಯತೆ ಇದೆ. ಶನಿವಾರ ಮಧ್ಯಾಹ್ನ 2.35ಕ್ಕೆ ಶೃಂಗಸಭೆ ಆರಂಭವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಎರಡು ದಿನ ನಡೆಯಲಿರುವ ಶೃಂಗಸಭೆಯಲ್ಲಿ, ಜಾಗತಿಕ ಸಮಸ್ಯೆಗಳು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕತೆಗಳನ್ನು ರಕ್ಷಿಸುವುದು ಸೇರಿದಂತೆ ಹಲವು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಜಾಗತಿಕ ನಾಯಕರ ನಡುವೆ ಗಂಭೀರ ಚರ್ಚೆಯಾಗುವ ನಿರೀಕ್ಷೆಯಿದೆ.
ಸಂಘರ್ಷಗಳಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಪಾರು ಮಾಡಲು ಆಹಾರ, ಇಂಧನ ಮತ್ತು ಪೂರೈಕೆ ಸರಪಳಿ ಭದ್ರತೆಯಂತಹ ಜಾಗತಿಕ ವಿವಾದಗಳಿಗೆ ಕಾರ್ಯಸಾಧ್ಯ ಪರಿಹಾರಗಳನ್ನು ಹುಡುಕಲು ಭಾರತ ಪ್ರಯತ್ನಿಸಲಿದೆ. ಪ್ರಾದೇಶಿಕ ವಿಷಯಗಳಿಗೂ ಸಮಾನ ಆದ್ಯತೆ ನೀಡಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.
ಶೃಂಗಸಭೆಯಲ್ಲಿ ಜಂಟಿ ಹೇಳಿಕೆ ನೀಡುವ ಕುರಿತು ಸದಸ್ಯ ರಾಷ್ಟ್ರಗಳು ಶುಕ್ರವಾರ ಸಂಜೆಯವರೆಗೂ ಒಮ್ಮತಕ್ಕೆ ಬಂದಿರಲಿಲ್ಲ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಕುರಿತು ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ನಡುವಿನ ಭಿನ್ನಾಭಿಪ್ರಾಯಗಳು ಮುಂದುವರಿದಿವೆ.
ಅಮೆರಿಕ, ಯುರೋಪ್, ಜಪಾನ್, ಆಸ್ಟ್ರೇಲಿಯಾ ಮತ್ತು ಇತರ ದೇಶಗಳೊಂದಿಗಿನ ಪಾಲುದಾರಿಕೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ, ಬ್ರಿಕ್ಸ್ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಈ ಶೃಂಗಸಭೆಯು ಭಾರತಕ್ಕೆ ಅವಕಾಶ ಒದಗಿಸಿದೆ. ಅಲ್ಲದೆ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಉದಯೋನ್ಮುಖ ಆರ್ಥಿಕತೆಗಳ ಧ್ವನಿಯಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಭಾರತಕ್ಕೆ ಮಹತ್ವದ ವೇದಿಕೆ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

