ನವಿ ಮುಂಬೈ: ʼಭಾರತೀಯ ಭಾಷೆಗಳಿಗೆ ಉತ್ತೇಜನ ನೀಡಲು ಎಲ್ಲ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕೆ ಇಡಬೇಕು. ಮಗುವು ತನ್ನ ಮಾತೃಭಾಷೆಯ ಮೂಲಕ ಮಾತ್ರವೇ ಭಾರತವನ್ನು ಅರ್ಥಮಾಡಿಕೊಳ್ಳಬಲ್ಲದುʼ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಾದಿಸಿದ್ದಾರೆ.
6ನೇ ಅಖಿಲ ಭಾರತ ರಾಜಭಾಷಾ ಸಮಾವೇಶದವನ್ನುದ್ದೇಶಿಸಿ ಮಾತನಾಡಿರುವ ಶಾ, ಕೇಂದ್ರ ಸರ್ಕಾರವು ಭಾರತೀಯ ಭಾಷೆಗಳನ್ನು ಆಡಳಿತ ಹಾಗೂ ವಿಜ್ಞಾನದ ಭಾಷೆಯಾಗಿಸಲು ಮತ್ತು ಸಾಹಿತ್ಯದ ಮೂಲಕ ಅವುಗಳನ್ನು ಶ್ರೀಮಂತಗೊಳಿಸಲು ಬಯಸುತ್ತಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಮೂಲಕ ಮಾತೃಭಾಷೆಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯಗೊಳಿಸಿದ್ದಾರೆ ಎಂದೂ ಉಲ್ಲೇಖಿಸಿದ್ದಾರೆ.
ʼಪ್ರಧಾನಿ ಮೋದಿ ಮಾಡಿರುವ ಅತಿದೊಡ್ಡ ಕೆಲಸವೆಂದರೆ, ಎನ್ಇಪಿ ಅಡಿಯಲ್ಲಿ ಮಾತೃಭಾಷೆಯಲ್ಲಿ ಕಲಿಕೆಯನ್ನು ಕಡ್ಡಾಯಗೊಳಿಸಿರುವುದು. ಹಾಗೆಯೇ, ಅದರ ತಾಯ್ನುಡಿಯ ಜೊತೆಗೆ ಮತ್ತೊಂದು ಭಾರತೀಯ ಭಾಷೆಯನ್ನು ಕಲಿಯುವುದನ್ನು ಕಡ್ಡಾಯಗೊಳಿಸಿರುವುದು. ಎನ್ಇಪಿಯ ಈ ನಿಬಂಧನೆಯನ್ನು ವಿರೋಧಿಸುತ್ತಿರುವವರಿಗೆ, ಅವರು ಎಂತಹ ತಪ್ಪು ಮಾಡುತ್ತಿದ್ದಾರೆ ಎಂಬುದರ ಅರಿವಿಲ್ಲʼ ಎಂದು ಗುಡುಗಿದ್ದಾರೆ.
ʼಹಿಂದಿಯನ್ನು ಇತರ ಭಾಷೆಗಳಿಗೆ ಪ್ರತಿಸ್ಪರ್ಧಿ ಎಂಬಂತೆ ಯಾರೂ ನೋಡಬಾರದು. ಎಲ್ಲ ಭಾಷೆಗಳೂ ಪರಸ್ಪರ ಸಂಬಂಧ ಹೊಂದಿವೆʼ ಎಂದು ಶಾ ಕಿವಿಮಾತು ಹೇಳಿದ್ದಾರೆ.
ಮಹಾರಾಷ್ಟ್ರವನ್ನು ಏಕೈಕ ಬಹುಭಾಷೆಯ ನಾಡು ಎಂದಿರುವ ಗೃಹ ಸಚಿವ, ಇದು (ಮಹಾರಾಷ್ಟ್ರ) ಎಲ್ಲ ಭಾಷೆಗಳೂ ಪ್ರವರ್ಧಮಾನಕ್ಕೆ ಬಂದಿರುವ ಹಾಗೂ ಗೌರವಿಸಲ್ಪಟ್ಟಿರುವ ತಾಣ ಎಂದು ಶ್ಲಾಘಿಸಿದ್ದಾರೆ. ಹಾಗೆಯೇ, ಮೋದಿ ಸರ್ಕಾರವು ಮರಾಠಿಗೆ ʼಶಾಸ್ತ್ರೀಯ ಭಾಷೆʼ ಸ್ಥಾನಮಾನ ನೀಡಿದೆ ಎಂಬುದನ್ನು ಸ್ಮರಿಸಿದ್ದಾರೆ.
ʼವಂದೇ ಮಾತರಂ ಕೇವಲ ಹಾಡಲ್ಲʼ
ವಂದೇ ಮಾತರಂ ರಾಷ್ಟ್ರೀಯ ಗೀತೆಯ ಬಗ್ಗೆಯೂ ಮಾತನಾಡಿದ ಶಾ, ʼಅದು ಕೇವಲ ಹಾಡಲ್ಲ. ಭಾರತೀಯರಲ್ಲಿ ಸ್ವಾತಂತ್ರ್ಯದ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಪ್ರಯತ್ನವಾಗಿತ್ತು. ಸಾಂಸ್ಕೃತಿಕ ರಾಷ್ಟ್ರೀಯತೆಗೆ ಅಡಿಪಾಯ ಹಾಕಿತುʼ ಎಂದು ಹೇಳಿದ್ದಾರೆ.
ಆ ಗೀತೆಯನ್ನು ಎರಡು ಭಾಗವಾಗಿಸಿ, ಅಧಿಕೃತ ಕಾರ್ಯಕ್ರಮಗಳಲ್ಲಿ ಕೇವಲ ಎರಡೇ ಚರಣಗಳನ್ನು ಹಾಡುವಂತೆ ಮಾಡಲಾಗಿತ್ತು ಎಂದು ನೆನಪಿಸಿರುವ ಅವರು, ಮೋದಿಯಂತಹ ಪ್ರಧಾನಿ ಸಿಕ್ಕಿದ ಪರಿಣಾಮವಾಗಿ ವಂದೇ ಮಾತರಂ ಗೀತೆಯು ತನ್ನ ಗತವೈಭವವನ್ನು ಮರಳಿ ಪಡೆದಿದೆ. ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪೂರ್ತಿಯಾಗಿ ಹಾಡಲಾಗುತ್ತಿದೆ ಎಂದು ಒತ್ತಿಹೇಳಿದ್ದಾರೆ.

