ಕೊಚ್ಚಿ/ನವದೆಹಲಿ (PTI): ಕೊಚ್ಚಿ ಮಿನರಲ್ಸ್ ಆಯಂಡ್ ರೂಟೈಲ್ ಲಿಮಿಟೆಡ್ಗೆ (ಸಿಎಂಆರ್ಎಲ್) ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ, ಅಳಿಯ ಪಿ.ಎ. ಮೊಹಮ್ಮದ್ ರಿಯಾಸ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಜಾರಿ ನಿರ್ದೇಶನಾಲಯವು (ಇ.ಡಿ) ಕೇರಳಂ ಡಿಜಿಪಿಗೆ ಪತ್ರ ಬರೆದಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ನಡೆಸಿದ ತನಿಖೆ ಹಾಗೂ ಶೋಧದ ವೇಳೆ ವಶಪಡಿಸಿಕೊಂಡ ಸಾಕ್ಷ್ಯಗಳ ಆಧಾರದ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಇತರ ಕಾನೂನುಗಳ ನಿಬಂಧನೆಗಳಡಿ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಇ.ಡಿ. ಕೋರಿದೆ.
'ಸಿಎಂಆರ್ಎಲ್ ಕಂಪನಿಯು ವೀಣಾ ಅವರ ಒಡೆತನದ 'ಎಕ್ಸಾಲಾಜಿಕ್ ಸಲೂಷನ್ಸ್'ಗೆ (ಈಗ ನಿಷ್ಕ್ರಿಯ) ಮಾಹಿತಿ ತಂತ್ರಜ್ಞಾನ ಸಲಹಾ ಸೇವೆಗಳ ಹೆಸರಿನಲ್ಲಿ ₹2.78 ಕೋಟಿ ಮೊತ್ತವನ್ನು ಅಕ್ರಮವಾಗಿ ಪಾವತಿಸಿದೆ' ಎಂದು ಇ.ಡಿ ಆರೋಪಿಸಿದೆ.
ತಿರುವನಂತಪುರದಲ್ಲಿ ತಂದೆಯೊಂದಿಗೆ ವಾಸವಿದ್ದ ವೀಣಾ ಅವರ ಮನೆ ಮೇಲೆ ಇ.ಡಿ ಜೂನ್ನಲ್ಲಿ ದಾಳಿ ನಡೆಸಿತ್ತು.
'ಆಗಸ್ಟ್ನಲ್ಲಿ, ವೀಣಾ ಟಿ. ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿದ್ದ ವೇಳೆ ಅವರ 'ಕೈಬರಹ'ದ ಕೆಲ ಟಿಪ್ಪಣಿಗಳು ಸಿಕ್ಕಿವೆ. ದುಬೈಗೆ ನಿರ್ದಿಷ್ಟ ಹಣ ವರ್ಗಾವಣೆಯಾಗಿರುವ ಕುರಿತ ವಿವರಗಳು ಈ ಟಿಪ್ಪಣಿಯಲ್ಲಿವೆ' ಎಂದು ಇ.ಡಿ ತಿಳಿಸಿದೆ.
ಪಿಣರಾಯಿ ವಿಜಯನ್
ಕಾನೂನು ಪ್ರಕಾರ ಕ್ರಮ
ಚೆನ್ನಿತ್ತಲ ತಿರುವನಂತಪುರ (ಪಿಟಿಐ): 'ಜಾರಿ ನಿರ್ದೇಶನಾಲಯವು ಡಿಜಿಪಿಗೆ ಬರೆದ ಪತ್ರವನ್ನು ಪರಿಶೀಲಿಸಿ ಕಾನೂನು ಪ್ರಕಾರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ' ಎಂದು ಕೇರಳಂ ಗೃಹ ಸಚಿವ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ.

