ಕಾಸರಗೋಡು: ಚೆರ್ಕಳ ಪೇಟೆಯ ರಸ್ತೆ ಹಾನಿಗೀಡಾಗಿರುವುದನ್ನು ಪ್ರತಿಭಟಿಸಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಮೇಘ ಕಂಪೆನಿ ವಿರುದ್ಧ ಚೆಂಗಳ ಪಂಚಾಯತ್ ಆಡಳಿತ ಸಮಿತಿ ಚಳವಳಿಯ ರಂಗಕ್ಕಿಳಿದಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿ ರಸ್ತೆಯನ್ನು ಅಗೆದು ಹಾಕಿ ಬಳಿಕ ಅದನ್ನು ದುರಸ್ತಿಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಚಾಯತ್ ಆಡಳಿತ ಸಮಿತಿ ಆರೋಪಿಸಿದೆ. ರಸ್ತೆ ದುರಸ್ತಿ ನಡೆಸುವ ಸಂಬಂಧ ಪಂಚಾಯತ್ ಆಡಳಿತ ಸಮಿತಿಗೆ ಹಾಗೂ ನಾಗರಿಕರಿಗೆ ಕಂಪೆನಿ ನೀಡುವ ಭರವಸೆಗಳನ್ನು ನಿರಂತರ ಉಲ್ಲಂಘಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೇಘ ಕಂಪೆನಿ ವಿರುದ್ಧ ಪಂಚಾಯತ್ ನೇತೃತ್ವದಲ್ಲಿ ಚಳವಳಿಗೆ ನಿರ್ಧರಿಸಲಾಗಿದೆ. ಕಂಪೆನಿಯ ನಿರ್ಲಕ್ಷ್ಯವನ್ನು ಪ್ರತಿಭಟಿಸಿ ಪಂಚಾಯತ್ ಆಡಳಿತ ಸಮಿತಿ ನೇತೃತ್ವದಲ್ಲಿ ನಿನ್ನೆ ಮಧ್ಯಾಹ್ನ ಚೆರ್ಕಳದಲ್ಲಿ ಚಳವಳಿ ನಡೆಯಿತು.


