ಕೋಝಿಕ್ಕೋಡ್: ಕೃತಕ ಬುದ್ಧಿಮತ್ತೆ (ಎ.ಐ) ಮತ್ತು ಆಧುನಿಕ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಜ್ಞಾನ ಹಾಗೂ ಪರಿಣತಿ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ. ಇಲ್ಲದಿದ್ದರೆ, ಅರಿವಿನ ಕೊರತೆಯಿರುವ ಸಮಾಜಗಳನ್ನು ವಿದೇಶಿ ಶಕ್ತಿಗಳು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವ ಅಪಾಯವಿದೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಎಚ್ಚರಿಸಿದರು.
ಕೋಯಿಕ್ಕೋಡ್ನ ಕುನ್ನಮಂಗಲಂನಲ್ಲಿರುವ ಕಾರಂತೂರು ಮರ್ಕಝ್ನಲ್ಲಿ ಶೇಖ್ ಅಬೂಬಕರ್ ಫೌಂಡೇಶನ್ ನೀಡುವ 'ಎಕ್ಸಲೆನ್ಸ್ ಅವಾರ್ಡ್' ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ, ಹೊಸ ವಿಜ್ಞಾನ, ಡಿಜಿಟಲ್ ಪರಿವರ್ತನೆ ಮತ್ತು ಎ.ಐ ತಂದಿರುವ ಬದಲಾವಣೆಗಳನ್ನು ಧಾರ್ಮಿಕ ವಿದ್ವಾಂಸರು ಹಾಗೂ ಸಮಾಜ ಅರ್ಥಮಾಡಿಕೊಳ್ಳಬೇಕು ಎಂದರು.
'ಹೊಸ ತಂತ್ರಜ್ಞಾನ ಮತ್ತು ಬದಲಾಗುತ್ತಿರುವ ಕಾಲದ ಸವಾಲುಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಎ.ಐ ಬಗ್ಗೆ ಜ್ಞಾನವಿಲ್ಲದಿದ್ದರೆ ನಾವು ಹಿಂದೆ ಬೀಳುತ್ತೇವೆ. ಅದರ ಅರಿವಿಲ್ಲದೆ ಹೋದರೆ ನಮ್ಮ ಸಮಾಜವೇ ವಿದೇಶಿ ಶಕ್ತಿಗಳ ಕೈಯಲ್ಲಿ ಅಸ್ತ್ರವಾಗುವ ಅಪಾಯವಿದೆ' ಎಂದು ಅವರು ಹೇಳಿದರು.
ತಂತ್ರಜ್ಞಾನದ ಬೆಳವಣಿಗೆಯ ಜತೆಗೆ ಮೌಲ್ಯಗಳು ಮತ್ತು ನೈತಿಕತೆಯನ್ನೂ ಕಾಪಾಡಿಕೊಳ್ಳಬೇಕು ಎಂದು ಇಬ್ರಾಹಿಂ ಒತ್ತಿ ಹೇಳಿದರು. ಎಐ ಕ್ಷೇತ್ರದಲ್ಲಿ ಜ್ಞಾನ ಮತ್ತು ಪರಿಣತಿ ಗಳಿಸುವುದು ಎಷ್ಟು ಮುಖ್ಯವೋ, ಅದೇ ವೇಳೆ ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳುವುದೂ ಅಷ್ಟೇ ಅಗತ್ಯ ಎಂದರು.
ಬಹುಧರ್ಮೀಯರು ಇರುವ ಮಲೇಷ್ಯಾದಲ್ಲಿ ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಹಿಂದೂಗಳು ಸೇರಿದಂತೆ ವಿವಿಧ ಸಮುದಾಯಗಳ ನಡುವೆ ಮಾನವೀಯತೆ, ಪರಸ್ಪರ ಗೌರವ ಮತ್ತು ಸ್ನೇಹ ಬೆಳೆಸುವುದು ಸರ್ಕಾರದ ಬದ್ಧತೆ ಎಂದು ಅವರು ಹೇಳಿದರು.
ಉತ್ತಮ ಆಡಳಿತ, ಭ್ರಷ್ಟಾಚಾರ ವಿರೋಧ ಮತ್ತು ಸಹಿಷ್ಣುತೆಯ ಬಗ್ಗೆ ಮಾತನಾಡುವುದಷ್ಟೇ ಸಾಕಾಗದು; ಹೇಳುವುದನ್ನು ಕಾರ್ಯರೂಪಕ್ಕೆ ತರುವುದು ಮುಖ್ಯ ಎಂದು ಇಬ್ರಾಹಿಂ ಹೇಳಿದರು.
ಮಲಬಾರ್ ಕರಾವಳಿ ಮತ್ತು ಮಲಯ ದ್ವೀಪಸಮೂಹದ ನಡುವಿನ ಐತಿಹಾಸಿಕ ಸಂಬಂಧವನ್ನು ಸ್ಮರಿಸಿದ ಅವರು, ತಮ್ಮ ಕೇರಳಂ ಭೇಟಿಗೆ ಅವಕಾಶ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದರು.
ಸೋಮವಾರ ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಭೇಟಿಯಾಗಿ ಭಾರತ-ಮಲೇಷ್ಯಾ ಮತ್ತು ಕೇರಳಂ-ಮಲೇಷ್ಯಾ ಸಂಬಂಧ ಬಲಪಡಿಸುವ ಕುರಿತು ಚರ್ಚಿಸುವುದಾಗಿ ತಿಳಿಸಿದರು.
ನಾಲ್ಕು ವರ್ಷಗಳಲ್ಲಿ ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರನ್ನು ಭೇಟಿಯಾಗಲು ಕೇರಳಂಗೆ ಇಬ್ರಾಹಿಂ ನೀಡುತ್ತಿರುವ ಎರಡನೇ ಭೇಟಿಯಾಗಿದೆ. 2022ರ ಸೆಪ್ಟೆಂಬರ್ನಲ್ಲಿ ಅವರು ಮೊದಲ ಬಾರಿಗೆ ಮರ್ಕಝ್ಗೆ ಭೇಟಿ ನೀಡಿದ್ದರು.
ಮರ್ಕಝ್ನಲ್ಲಿ ಕಾಂತಪುರಂ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ವಿಶೇಷ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿದ ಇಬ್ರಾಹಿಂ ಅವರಿಗೆ ಶೇಖ್ ಅಬೂಬಕರ್ ಫೌಂಡೇಶನ್ನ ಮೊದಲ 'ಎಕ್ಸಲೆನ್ಸ್ ಅವಾರ್ಡ್' ಪ್ರದಾನ ಮಾಡಲಾಯಿತು.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕರಾದ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಙಳ್ ಮತ್ತು ಪಿ.ಕೆ. ಕುಂಞಾಲಿಕುಟ್ಟಿ ಕೂಡ ಅವರನ್ನು ಭೇಟಿಯಾದರು. ಕರ್ನಾಟಕ ಸಚಿವ ಯು.ಟಿ ಖಾದರ್, ಶಾಸಕ ಯಾಸಿರ್ ಪಠಾಣ್ ಕೂಡ ಇದ್ದರು.
ನಂತರ ಕಾಂತಪುರಂ ಅವರೊಂದಿಗೆ ಮಲೇಷ್ಯ ಪ್ರಧಾನಿ ಮಡವೂರ್ ಸಿ.ಎಂ. ವಲಿಯುಲ್ಲಾಹಿ ಮಖಾಂಗೆ ಭೇಟಿ ನೀಡಿದದರು.
ಸೋಮವಾರ ಮಾಲ್ಡೀವ್ಸ್ ಮೂಲಕ ಮಲೇಷ್ಯಾಕ್ಕೆ ಮರಳಲಿದ್ದಾರೆ.

