ನವದೆಹಲಿ: ನೀಟ್ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದ ನವೀಕೃತ ಸೌಲಭ್ಯವನ್ನು ಪರಿಶೀಲಿಸಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಕಚೇರಿಗೆ ಖುದ್ದು ಭೇಟಿ ನೀಡಲು ಬಯಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರ ಪೀಠವು, 'ದೆಹಲಿಯ ಮಿಂಟೊ ರಸ್ತೆಯಲ್ಲಿರುವ ಎನ್ಟಿಎ ಕಚೇರಿಗೆ ಭೇಟಿ ನೀಡಿ, ಹೊಸ ವ್ಯವಸ್ಥೆಯು ನಿಜವಾಗಿಯೂ ಕಾರ್ಯನಿರ್ವಹಿಸುತ್ತಿದೆಯೇ ಎನ್ನುವುದನ್ನು ಪರಿಶೀಲಿಸಲು ನಾವು ಬಯಸುತ್ತೇವೆ ಮತ್ತು ಅಲ್ಲಿನ ಮಾನವ ಸಂಪನ್ಮೂಲ ಹಾಗೂ ಇತರೆ ಸೌಲಭ್ಯಗಳನ್ನು ಮೌಲ್ಯಮಾಪನ ಮಾಡುತ್ತೇವೆ' ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.
'ಪರೀಕ್ಷಾ ವ್ಯವಸ್ಥೆ ಸುಧಾರಿಸಲು, ದೋಷರಹಿತವಾಗಿಸಲು ಎನ್ಟಿಎಯ ಆಡಳಿತಾತ್ಮಕ ಶ್ರೇಣಿಯಿಂದ ಮೂಲಸೌಕರ್ಯದವರೆಗೆ ಸಂಪೂರ್ಣ ಕಾರ್ಯವಿಧಾನವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಇದು ಸರ್ಕಾರದ ಆದ್ಯತೆಯಾಗಿದೆ' ಎಂದು ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು.
'ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಸಾಂಸ್ಥಿಕ ಬಲವರ್ಧನೆ ಅಗತ್ಯ. ಈ ದಿಸೆಯಲ್ಲಿ ಎನ್ಟಿಎ ಶಾಶ್ವತವಾದ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳಬೇಕು. ಕೇವಲ ತಕ್ಷಣದ ಅಥವಾ ತಾತ್ಕಾಲಿಕ ಕ್ರಮಗಳು ಸಾಕಾಗುವುದಿಲ್ಲ. ಇಡೀ ವ್ಯವಸ್ಥೆಯ ಸುಧಾರಣೆಗೆ ಶಾಶ್ವತ ಕ್ರಮ ಅಗತ್ಯ ಎನ್ನುವುದನ್ನು ನೀವು ತಿಳಿದಿರಬೇಕು. ಶಾಶ್ವತ ವ್ಯವಸ್ಥೆ, ಶಾಶ್ವತ ಸಿಬ್ಬಂದಿ, ಶಾಶ್ವತ ಹುದ್ದೆಗಳು ಇರಬೇಕು ಆಗ ಮಾತ್ರ ಶಾಶ್ವತ ವ್ಯವಸ್ಥೆ ಬರುತ್ತದೆ' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
'ಅತ್ಯಂತ ಪ್ರಮುಖವಾದ ವಿಷಯವೆಂದರೆ, ನೀಟ್ ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯನ್ನು ಸಾಂಸ್ಥೀಕರಣಗೊಳಿಸುವ ಬಗ್ಗೆ ಸರ್ಕಾರ ಪರಿಶೀಲಿಸಬೇಕು' ಎಂದು ನ್ಯಾಯಪೀಠವು ಸಾಲಿಸಿಟರ್ ಜನರಲ್ಗೆ ಒತ್ತಿ ಹೇಳಿದೆ.
ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಇದುವರೆಗೆ ಕೈಗೊಂಡ ಕ್ರಮಗಳ ಕುರಿತು, ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವಂತೆ, ನಂದನ್ ನಿಲೇಕಣಿ ಸಮಿತಿಗೆ ಸಹಾಯ ಮಾಡುತ್ತಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (ಡಿಒಪಿಟಿ) ಜಂಟಿ ಕಾರ್ಯದರ್ಶಿಗೆ ನ್ಯಾಯಪೀಠ ಸೂಚಿಸಿತು.
'ಎನ್ಟಿಎ ಕೋರ್ಟ್ಗೆ ಸಲ್ಲಿಸಿರುವ ಪ್ರಮಾಣಪತ್ರವನ್ನು ಅದರ ವೆಬ್ಸೈಟ್ನಲ್ಲೂ ಅಪ್ಲೋಡ್ ಮಾಡಬೇಕು. ಜನರು ತಮ್ಮ ಸಲಹೆಗಳನ್ನು ಸಲ್ಲಿಸಬಹುದಾದ 'ನೋಡಲ್ ವಕೀಲ'ರನ್ನು ನೇಮಿಸಬೇಕು' ಎಂದು ಪೀಠ ನಿರ್ದೇಶಿಸಿತು.
ಶೀಘ್ರದಲ್ಲೇ ನಿಲೇಕಣಿ ಸಮಿತಿಯಿಂದ ಮಧ್ಯಂತರ ವರದಿ
ನೀಟ್ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿ ನಂದನ್ ನಿಲೇಕಣಿ ನೇತೃತ್ವದ ಉನ್ನತಾಧಿಕಾರ ಸಮಿತಿಯು ಈ ತಿಂಗಳ ಅಂತ್ಯದೊಳಗೆ ಮಧ್ಯಂತರ ವರದಿ ಸಲ್ಲಿಸಲಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಶುಕ್ರವಾರ ತಿಳಿಸಿದೆ. ಇಸ್ರೊದ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ 2024ರಲ್ಲಿ ರಚಿಸಲಾಗಿದ್ದ ಸಮಿತಿಯ ಸದಸ್ಯರೊಂದಿಗೆ ನಂದನ್ ನಿಲೇಕಣಿ ಸಮಿತಿಯು ಸಮಾಲೋಚನೆ ನಡೆಸಿ ಸಲಹೆಗಳನ್ನು ಪಡೆದಿದೆ. ಈ ಎಲ್ಲ ಅಂಶಗಳನ್ನು ಸೇರಿಸಿ ಮಧ್ಯಂತರ ವರದಿ ಸಲ್ಲಿಸಲಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು.

