ಕಾಸರಗೋಡು: ಜಿಲ್ಲೆಯಲ್ಲಿ ಹಳದಿಕಾಮಾಲೆ ಬಾಧಿಸಿ ಚಿಕಿತ್ಸೆಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಉಪ್ಪಳ ಬಳಿಯ ಮಂಗಲ್ಪಾಡಿ ಕೃಷ್ಣನಗರ ನಿವಾಸಿ ಡಿ. ಭೋಜ ಎಂಬವರ ಪುತ್ರ ರಂಜಿತ್ (38) ಮೊನ್ನೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಐದು ದಿನಗಳ ಹಿಂದೆ ಇವರಿಗೆ ಜ್ವರ ಬಾಧಿಸಿದ್ದ ಹಿನ್ನೆಲೆಯಲ್ಲಿ ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಇವರಿಗೆ ಹಳದಿ ಕಾಮಾಲೆ ಬಾಧಿಸಿರುವುದು ಪತ್ತೆಯಾಗಿತ್ತು. ಈ ನಿಟಟಿನಲ್ಲಿ ರಂಜಿತ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದರೂಪ್ರಯೋಜನವಾಗಿರಲಿಲ್ಲ. ಕೂಲಿ ಕಾರ್ಮಿಕರಾಗಿದ್ದ ಇವರು ಕಬಡ್ಡಿ ಪಟುವಾಗಿಯೂ ಗುರುತಿಸಿಕೊಂಡಿದ್ದರು.
ಇನ್ನೊಂದು ಪ್ರಕರಣದಲ್ಲಿ ಹಳದಿ ಕಾಮಾಲೆ ಬಾಧಿಸಿ ಚಿಕಿತ್ಸೆಯಲ್ಲಿದ್ದ ನೆಲ್ಲಿಕಟ್ಟೆ ನಿವಾಸಿ, ಪ್ರಸಕ್ತ ಕೋಟಪ್ಪಾರದಲ್ಲಿ ವಾಸಿಸುತ್ತಿದ್ದ ಡಿ. ರಾಧಾಕೃಷ್ಣನ್ (48) ಎಂಬವರು ಗುರುವಾರ ಮೃತಪಟ್ಟಿದ್ದಾರೆ. ಕೋಟಪ್ಪಾರದಲ್ಲಿರುವ ವಿಠಲ್ ಕ್ಯಾಶ್ಯೂ ಕಂಪೆನಿಯ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಇವರಿಗೆ ಹಳದಿ ಕಾಮಾಲೆ ಬಾಧಿಸಿದ್ದು ಚಿಕಿತ್ಸೆ ಫಲಕಾರಿಯಾಗಿರಲಿಲ್ಲ.

