ನವದೆಹಲಿ(PTI):'ಪ್ಯಾಕೇಜ್ಡ್ ಆಹಾರ ಉತ್ಪನ್ನಗಳಲ್ಲಿ ಇರುವ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣ ಕುರಿತು ಪ್ಯಾಕೇಟ್ನ ಮುಂಭಾಗದಲ್ಲಿಯೇ ಮುದ್ರಿಸಲು ಆಹಾರ ಸುರಕ್ಷತೆ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬ ಭಾಗೀದಾರ ಪರಿಗಣಿಸಬೇಕು. ಈ ವಿಚಾರವನ್ನು ರಾಷ್ಟ್ರೀಯ ಮಹತ್ವದ್ದು ಎಂದು ಪರಿಗಣಿಸಬೇಕು' ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಪ್ಯಾಕೇಜ್ಡ್ ಆಹಾರ ಪದಾರ್ಥಗಳ ವಿಚಾರವು ಗಂಭೀರವಾದದ್ದು. ದೇಶದ ಜನರು, ಅದರಲ್ಲೂ ವಿಶೇಷವಾಗಿ ಬೆಳೆಯುವ ಮಕ್ಕಳ ಆರೋಗ್ಯವೇ ಮುಖ್ಯ. ಮಹತ್ವದ ಈ ವಿಚಾರ ಕುರಿತು ಸಂಬಂಧಪಟ್ಟ ಭಾಗೀದಾರರಿಂದ ಮಾಹಿತಿ ಪಡೆದ ಬಳಿಕ ವಿಸ್ತೃತ ಆದೇಶ ಹೊರಡಿಸಲಾಗುವುದು ಎಂದೂ ಹೇಳಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಕೆ.ವಿನೋದ್ ಚಂದ್ರನ್ ಅವರು ಇದ್ದ ನ್ಯಾಯಪೀಠ, ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿತು. '3ಎಸ್ ಆಯಂಡ್ ಅವರ್ ಹೆಲ್ತ್ ಸೊಸೈಟಿ' ಎಂಬ ಚಾರಿಟಬಲ್ ಟ್ರಸ್ಟ್ ಈ ಅರ್ಜಿ ಸಲ್ಲಿಸಿದೆ.
ವಿಚಾರಣೆ ವೇಳೆ, 'ಪ್ಯಾಕೇಜ್ಡ್ ಆಹಾರ ಪದಾರ್ಥಗಳ ಕುರಿತ ವಿವರಗಳನ್ನು ಲೇಬಲ್ನ ಹಿಂಬದಿಯಲ್ಲಿಯೇ ಮುದ್ರಿಸಲಾಗಿರುತ್ತದೆ. ಒಂದು ವೇಳೆ, ಈ ಖಾದ್ಯಗಳಲ್ಲಿನ ಪೌಷ್ಟಿಕಾಂಶಗಳ ಪ್ರಮಾಣವು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಇದ್ದಲ್ಲಿ, ಆಗ ಅವುಗಳಲ್ಲಿ ಸಕ್ಕರೆ ಅಥವಾ ಉಪ್ಪು ಇಲ್ಲವೇ ಕೊಬ್ಬಿನ ಅಂಶ ಅಧಿಕ ಪ್ರಮಾಣದಲ್ಲಿ ಇರುತ್ತದೆ ಎಂದಾಯಿತಲ್ಲವೇ? ಈ ಕುರಿತು ಮಾರ್ಗಸೂಚಿಗಳನ್ನು ರಚಿಸಲಾಗಿದೆಯೇ' ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರವನ್ನು (ಎಫ್ಎಸ್ಎಸ್ಎಐ) ಪೀಠ ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಎಫ್ಎಸ್ಎಸ್ಎಐ ಪರ ವಕೀಲ ಮಣಿಂದರ್ ಸಿಂಗ್,'ಪ್ಯಾಕೇಟ್ಗಳ ಹಿಂಬದಿ ಮುದ್ರಿಸಲಾಗುವ ವಿವರಗಳ ಕುರಿತು ಅಂತರರಾಷ್ಟ್ರೀಯವಾಗಿ ಸ್ವೀಕೃತವಾದ ಎರಡು ನಿಬಂಧನೆಗಳಿದ್ದು, ಅವುಗಳನ್ನು ಪಾಲಿಸಲಾಗುತ್ತಿದೆ' ಎಂದು ಹೇಳಿದರು.
'ಮೊಟ್ಟೆ, ಉಪ್ಪುಲೇಪಿತ ಗೋಡಂಬಿಯಂತಹ ಪೌಷ್ಟಿಕ ಆಹಾರ ಪದಾರ್ಥಗಳನ್ನಿಡುವ ಸ್ಥಳದಲ್ಲಿಯೇ 'ಕುರ್ಕುರೆ' ಉತ್ಪನ್ನಗಳು ಇಟ್ಟು, ಮಾರಾಟ ಮಾಡಲಾಗುತ್ತದೆ. ಅತಿಯಾಗಿ ಸಂಸ್ಕರಿಸಿದ ಆಹಾರ ಪದಾರ್ಥಗಳು (ಅಲ್ಟ್ರಾ ಪ್ರೋಸೆಸ್ಡ್ ಫುಡ್) ಇರುವ ಪ್ಯಾಕೇಟ್ಗಳ ಮೇಲೆ ವಿವರವಾದ ಎಚ್ಚರಿಕೆ ನೀಡುವ ಸಂದೇಶ ಮುದ್ರಿಸುವುದು ಅಗತ್ಯ' ಎಂದು ಮಧ್ಯಂತರ ಅರ್ಜಿದಾರರೊಬ್ಬರ ಪರ ವಕೀಲ ದೇವದತ್ತ ಕಾಮತ್ ಹೇಳಿದರು.
ಎರಡೂ ಕಡೆಯವರ ವಾದಗಳನ್ನು ಆಲಿಸಿದ ಪೀಠವು, ಒಂದೆರಡು ದಿನದಲ್ಲಿ ಆದೇಶವನ್ನು ನ್ಯಾಯಾಲಯದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುವುದು. ಎಲ್ಲ ಪಕ್ಷಗಾರರು ಈ ಆದೇಶ ಕುರಿತು ಅಧ್ಯಯನ ಮಾಡುವಂತೆ ಸೂಚಿಸಿದ ಪೀಠವು, ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿತು.

