ನವದೆಹಲಿ: ಸತ್ಯ ನಿಕೇತನ ಪಿಜಿ ಕಟ್ಟಡ ಕುಸಿತದ ದುರಂತದಲ್ಲಿ ಅವಶೇಷಗಳಡಿ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ ನಿತೇಶ್ ಚಿಬ್ ಅವರು, ತಾವು ಬದುಕುಳಿಯಲು ವಾಟ್ಸ್ಆಯಪ್ನಲ್ಲಿ ಕಳುಹಿಸಿದ ಲೊಕೇಶನ್ ಹಾಗೂ ಎಸ್ಒಎಸ್ ಸಂದೇಶ ಪ್ರಮುಖ ಕಾರಣವಾಗಿವೆ ಎಂದು ಹೇಳಿದ್ದಾರೆ.
ಎನ್ಡಿಟಿವಿಯೊಂದಿಗೆ ಮಾತನಾಡಿದ ಅವರು, ದುರಂತದ ಭಯಾನಕ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
'ದೆಹಲಿ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ನಾನು ಈ ಪಿಜಿಯಲ್ಲೇ ವಾಸವಾಗಿದ್ದೆ. ಭಾನುವಾರ ಮಧ್ಯಾಹ್ನ ಊಟ ಮುಗಿಸಿ ಕೊಠಡಿಗೆ ತೆರಳಿದ ಕೆಲವೇ ಕ್ಷಣಗಳಲ್ಲಿ ಕಟ್ಟಡ ಕುಸಿಯಿತು. ನಾನು ಮತ್ತು ನನ್ನ ಸ್ನೇಹಿತ ಅವಶೇಷಗಳಡಿ ಸಿಲುಕಿಕೊಂಡೆವು' ಎಂದು ಅವರು ತಿಳಿಸಿದ್ದಾರೆ.
'ಹೊರಗಿನಿಂದ ನೋಡಿದರೆ ಕಟ್ಟಡದಲ್ಲಿ ಯಾವುದೇ ಸಮಸ್ಯೆ ಕಾಣಿಸುತ್ತಿರಲಿಲ್ಲ. ಗೋಡೆಗಳಲ್ಲಿ ಬಿರುಕುಗಳೂ ಇರಲಿಲ್ಲ. ಆದರೆ ಕಳೆದ ಒಂದು ವಾರದಿಂದ ನೆಲಮಾಳಿಗೆಯಲ್ಲಿ ಕೆಲವು ಕಾಮಗಾರಿಗಳು ನಡೆಯುತ್ತಿದ್ದವು. ಅದರ ಬೆನ್ನಲ್ಲೇ ಇದ್ದಕ್ಕಿದ್ದಂತೆ ಇಡೀ ಕಟ್ಟಡ ಕುಸಿದುಬಿತ್ತು' ಎಂದು ಹೇಳಿದ್ದಾರೆ.
ಅವಶೇಷಗಳಡಿ ಸಿಲುಕಿದ ಬಳಿಕ ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿತ್ತು ಎಂದು ವಿವರಿಸಿದ ಅವರು, 'ಏನು ಮಾಡಬೇಕು ಎಂಬುದೇ ತಿಳಿಯುತ್ತಿರಲಿಲ್ಲ. ಆಗ ನನ್ನ ಸ್ನೇಹಿತ ವಾಟ್ಸ್ಆಯಪ್ ಮೂಲಕ ನಾವು ಸಿಲುಕಿದ್ದ ಸ್ಥಳದ ಲೊಕೇಶನ್ ಮತ್ತು ಎಸ್ಒಎಸ್ ಸಂದೇಶವನ್ನು ಸ್ನೇಹಿತರಿಗೆ ಕಳುಹಿಸಿದ. ಅವರು ತಕ್ಷಣ ರಕ್ಷಣಾ ತಂಡಗಳಿಗೆ ಮಾಹಿತಿ ನೀಡಿದರು. ಅದರ ಪರಿಣಾಮವಾಗಿ ರಕ್ಷಣಾ ಸಿಬ್ಬಂದಿ ನಮ್ಮನ್ನು ಪತ್ತೆಹಚ್ಚಿ ಹೊರತೆಗೆದರು' ಎಂದಿದ್ದಾರೆ.
'ಅವಶೇಷಗಳಿಂದ ಹೊರಬಂದಾಗ ನನ್ನ ಇಡೀ ದೇಹ ಮರಗಟ್ಟಿದ ಸ್ಥಿತಿಯಲ್ಲಿತ್ತು. ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿರಲಿಲ್ಲ. ರಕ್ತಸ್ರಾವವಾಗುತ್ತಿರುವುದು ಆಮೇಲೆ ಅರಿವಿಗೆ ಬಂತು. ಆಸ್ಪತ್ರೆಗೆ ದಾಖಲಾದ ಕೆಲ ಸಮಯದ ಬಳಿಕ ಸಂಪೂರ್ಣ ಪ್ರಜ್ಞೆ ಮರಳಿತು' ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ ನಿತೇಶ್, 'ಉನ್ನತ ಶಿಕ್ಷಣಕ್ಕಾಗಿ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಇಂತಹ ಪಿಜಿಗಳಲ್ಲಿ ಉಳಿಯುವುದನ್ನು ಬಿಟ್ಟು ಬೇರೆ ಆಯ್ಕೆ ಇರುವುದಿಲ್ಲ. ಹೀಗಾಗಿ ಪಿಜಿ ಕಟ್ಟಡಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ' ಎಂದು ಹೇಳಿದ್ದಾರೆ.

