ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಸಂಬಂಧಿಸಿದಂತೆ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅವರ ಕುಟುಂಬದ ನಾಲ್ವರು ಸದಸ್ಯರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರೂ ಆಗಿರುವ ಕೇಜ್ರಿವಾಲ್, ಅವರ ಪತ್ನಿ ಸುನೀತಾ ಕೇಜ್ರಿವಾಲ್, ಮಗ ಪುಳಕಿತ್ ಕೇಜ್ರಿವಾಲ್ ಮತ್ತು ಅವರ ತಂದೆ-ತಾಯಿ ಗೋಬಿಂದ್ ರಾಮ್ ಕೇಜ್ರಿವಾಲ್, ಗೀತಾ ದೇವಿ ಅವರಿಗೆ ನೋಟಿಸ್ ನೀಡಲಾಗಿದೆ.
ಕೇಜ್ರಿವಾಲ್ ಕುಟುಂಬದವರು ನವದೆಹಲಿ-40 ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ. ಕಳೆದ ಬಾರಿ ನಡೆಸಿದ್ದ ಎಫ್ಐಆರ್ ಜೊತೆ ಮಾಹಿತಿ ಹೊಂದಾಣಿಕೆಯಾಗದ ಕಾರಣ, ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಚಾರವಾಗಿ ಎಎಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 'ಸರ್ವೋಚ್ಚ ನಾಯಕನನ್ನು ಸಂತೋಷಪಡಿಸುವುದಕ್ಕಾಗಿ ದೇಶದಲ್ಲಿ ಇದನ್ನೆಲ್ಲ ಮಾಡಲಾಗುತ್ತಿದೆಯೇ? ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕುಟುಂಬದವರ ಹೆಸರು ದೆಹಲಿ ಮತದಾರರ ಪಟ್ಟಿಯಿಂದ ಕಾಣೆಯಾಗಲು ಹೇಗೆ ಸಾಧ್ಯ?' ಎಂದು ಚುನಾವಣಾ ಆಯೋಗವನ್ನು ಉಲ್ಲೇಖಿಸಿ ಪ್ರಶ್ನಿಸಿದೆ.
ನೋಟಿಸ್ ವಿಚಾರವಾಗಿ ದೆಹಲಿ ಮುಖ್ಯ ಚುನಾವಣಾಧಿಕಾರಿ ಅಶೋಕ್ ಕುಮಾರ್ ಅವರು ಶನಿವಾರ ಮಾತನಾಡಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿರುವ ಹೆಸರು ಮತ್ತು ಜನ್ಮ ದಿನಾಂಕದಲ್ಲಿ ವ್ಯತ್ಯಾಸವಿರುವವರ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಆ ಪಟ್ಟಿಯಲ್ಲಿ ಇರುವವರಿಗೆ ದಾಖಲೆ ಸಲ್ಲಿಸುವಂತೆ ನೋಟಿಸ್ ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಆಗಸ್ಟ್ 31ರಂದು ಪ್ರಕಟವಾದ ಕರಡು ಪಟ್ಟಿಯ ಪ್ರಕಾರ ರಾಜಧಾನಿಯ 1.45 ಕೋಟಿ ಮತದಾರರ ಪೈಕಿ ಸುಮಾರು 47.6 ಲಕ್ಷ ಹೆಸರನ್ನು ಕೈಬಿಡಲಾಗಿದೆ. ಅಂದರೆ, ಮೂವರಲ್ಲಿ ಒಬ್ಬರ ಹೆಸರನ್ನು ತೆಗೆಯಲಾಗಿದೆ.

