ತಿರುವನಂತಪುರಂ: ಶಾಸಕಿ ರಮ್ಯಾ ಹರಿದಾಸ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಏPಅಅ) ಇಬ್ಬರು ಕಾರ್ಯಕರ್ತರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.
ಪಾಳಯಂ ಪ್ರದೀಪ್ ಮತ್ತು ಎಸ್. ಸಾಜದ್ ಅಮಾನತುಗೊಂಡವರು. ಶುಕ್ರವಾರ ರಾತ್ರಿ ಪುಲಿಮೂಡುವಿನಲ್ಲಿರುವ ಸಾಜದ್ ಅವರ ನಿವಾಸದಲ್ಲಿ ರಮ್ಯಾ ಹರಿದಾಸ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ತನಿಖಾ ಸಮಿತಿ ನೀಡಿದ ವರದಿಯನ್ನು ಆಧರಿಸಿ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್ ಅವರು ಇಬ್ಬರನ್ನೂ ಅಮಾನತುಗೊಳಿಸಿದ್ದಾರೆ ಎಂದು ತನಿಖಾ ಸಮಿತಿಯ ಭಾಗವಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೆಯ್ಯಟ್ಟಿಂಕರ ಸನಲ್ ತಿಳಿಸಿದ್ದಾರೆ.
ರವಿವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಪ್ರದೀಪ್ ಮತ್ತು ಸಾಜದ್ ಅವರು ಗಂಭೀರ ಸಂಘಟನಾತ್ಮಕ ಶಿಸ್ತು ಉಲ್ಲಂಘಿಸಿರುವುದು ತನಿಖಾ ವರದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಲಾಗಿದೆ. ಅವರ ಕೃತ್ಯದಿಂದ ಸಾರ್ವಜನಿಕರ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕುಂದುಂಟಾಗಿದೆ ಎಂದು ಪ್ರಕಟಣೆ ಹೇಳಿದೆ.
ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಾಜಿತ್ ಮುತ್ತಂಬಾಲಂ, ಸಾಜದ್ ಮತ್ತು ಕಾಂಗ್ರೆಸ್ ನ ಕೂಂತಲ್ಲೂರ್ ಪ್ರದೇಶದ ಉಪಾಧ್ಯಕ್ಷ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಮ್ಯಾ ಹರಿದಾಸ್ ಆರೋಪಿಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಚಿರಾಯಿಂಕೀಳು ಠಾಣೆಯ ಪೊಲೀಸರು 15 ಮಂದಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

