ಕುಂಬಳೆ: ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಬೂತ್ ಅನ್ನು ಯಾವುದೇ ಕಾರಣಕ್ಕೂ ಮರುಸ್ಥಾಪಿಸಲು ಅವಕಾಶ ನೀಡುವುದಿಲ್ಲ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಹೇಳಿದ್ದಾರೆ.
ಕುಂಬಳೆ ಪ್ರೆಸ್ ಪೋರಂ ಸೋಮವಾರ ಸಂಜೆ ಆಯೋಜಿಸಿದ್ದ 'ಮೀಟ್ ದಿ ಪ್ರೆಸ್' ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ದೊಡ್ಡ ಜನಾಂದೋಲನದ ಮೂಲಕವೇ ಆರಿಕ್ಕಾಡಿಯ ಟೋಲ್ ಬೂತ್ ಮುಚ್ಚಿಸಲಾಗಿದೆ ಎಂದು ತಿಳಿಸಿದ ಅವರು, ಟೋಲ್ ಬೂತ್ನಲ್ಲಿರುವ ಸಾಮಗ್ರಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಆದರೆ, ಸಾಮಗ್ರಿಗಳನ್ನು ತೆರವುಗೊಳಿಸುವ ಕಾಮಗಾರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆ ವಿಳಂಬವಾಗಿರುವುದೇ ಸದ್ಯದ ತಡೆ ಎಂದು ಹೇಳಿದರು.
ಆರಿಕ್ಕಾಡಿಯಲ್ಲಿ ಮತ್ತೆ ಟೋಲ್ ಬೂತ್ ಸ್ಥಾಪಿಸಲು ಪ್ರಯತ್ನ ನಡೆಯುತ್ತಿದೆ ಎ0ಬ ಪ್ರಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಪೋರಂ ಅಧ್ಯಕ್ಷ ಅಬ್ದುಲ್ಲ ಕುಂಬಳೆ ವಹಿಸಿದ್ದರು. ಕಾರ್ಯದರ್ಶಿ ಐ. ಮೊಹಮ್ಮದ್ ರಫೀಕ್ ಸ್ವಾಗತಿಸಿದರು. ಲೇಖಕ ಕೆ.ಎಂ. ಅಬ್ಬಾಸ್ ಅವರು ಶಾಸಕ ಎ.ಕೆ.ಎಂ. ಅಶ್ರಫ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಸದಸ್ಯ ಅಶ್ರಫ್ ಕಾರ್ಲೆ ಅವರನ್ನು ಶಾಸಕ ಅಶ್ರಫ್ ಸನ್ಮಾನಿಸಿದರು. ಇದೇ ವೇಳೆ ಪ್ರೆಸ್ ಪೋರಂನ ಸಾಮಾಜಿಕ ಮಾಧ್ಯಮ ವೇದಿಕೆಯನ್ನೂ ಶಾಸಕರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕುಂಬಳೆ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಪತ್ರಕರ್ತರಾದ ಅಬ್ದುಲ್ ಲತೀಫ್ ಉಳುವಾರ್, ಕೆ.ಎಂ.ಎ. ಸತ್ತಾರ್, ರಶೀದ್ ಬಂದ್ಯೋಡ್, ಅಬ್ದುಲ್ ಲತೀಫ್ ಉಪ್ಪಳ, ಧನರಾಜ್ ಐಲ, ತಾಹಿರ್ ಉಪ್ಪಳ, ಸೈನುದ್ದೀನ್ ಅಡ್ಕ ಸಹಿತ ಹಲವರು ಉಪಸ್ಥಿತರಿದ್ದರು.

.jpg)
.jpg)
