ಬದಿಯಡ್ಕ: ಚಾತುರ್ಮಾಸ್ಯದ 60 ದಿನಗಳ ಕಲಾರಾಧನೆಯಲ್ಲಿ ಯಕ್ಷಗಾನ ಮತ್ತು ತಾಳಮದ್ದಳೆಗೆ ಅಗ್ರ ಪ್ರಾಶಸ್ತ್ಯ ನೀಡಲಾಗುತ್ತದೆ. ಅಷ್ಟಾಹ ಕಾರ್ಯಕ್ರಮವು ಗುಣಮಟ್ಟದ ಮೂಲಕ ಪ್ರೇಕ್ಷಕರನ್ನು ಸೆಳೆದಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಶ್ರೀ ಎಡನೀರು ಮಠದಲ್ಲಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಾಯೋಜಿತ ತಾಳಮದ್ದಳೆ ಅಷ್ಟಾಹದ ಸಮಾರೋಪ ಸಮಾರಂಭದಲ್ಲಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಕರ್ನಾಟಕದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯಾಂಗದ ಹೆಸರಿನಲ್ಲಿ ಕೇಶವಾನಂದ ಭಾರತೀ ಶ್ರೀಗಳು ಬಲುದೊಡ್ಡ ಸಾಧನೆಯನ್ನು ಮಾಡಿದವರಾಗಿದ್ದಾರೆ. ಒಂದು ಮಠವನ್ನು ಮುನ್ನಡೆಸುವುದು ಅತ್ಯಂತ ಕಷ್ಟದ ಕೆಲಸ. ಪ್ರಸ್ತುತ ಮಠವನ್ನು ಮುನ್ನಡೆಸುತ್ತಿರುವ ಶ್ರೀಗಳು ತನ್ನ ಚಾತುರ್ಮಾಸ್ಯ ಸಂದರ್ಭದಲ್ಲಿ ಅನೇಕ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ. ಯಕ್ಷಗಾನವು ಎಲ್ಲಾ ಅಂಶಗಳನ್ನೂ ಒಳಗೊಂಡ ಕಲೆಯಾಗಿದೆ ಎಂದರು.
ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್ ಮಾತನಾಡಿ, ಎಡನೀರು ಮಠದ ಆಶ್ರಯದಲ್ಲಿ ನಡೆದ ತಾಳಮದ್ದಳೆ ಅಷ್ಟಾಹ ಕಾರ್ಯಕ್ರಮವು ಗತಕಾಲದ ಕಲಾ ಪರಂಪರೆಯ ವೈಭವವನ್ನು ಮರುಸೃಷ್ಟಿಸುವ ಮೂಲಕ ಗಮನ ಸೆಳೆಯಿತು. ಸಮಯದ ಮಿತಿಯಿಲ್ಲದೆ ತಾಳಮದ್ದಳೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು. ಸಾಂಪ್ರದಾಯಿಕವಾಗಿ ತಾಳಮದ್ದಳೆಯ ಪ್ರದರ್ಶನಗಳು ಹಲವು ಗಂಟೆಗಳ ಕಾಲ ನಡೆಯುತ್ತಿದ್ದ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಅಷ್ಟಾಹ ಆಯೋಜಿಸಲಾಗಿತ್ತು. ಕಲಾವಿದರಿಗೆ ಯಾವುದೇ ಸಮಯದ ನಿಬರ್ಂಧವಿಲ್ಲದೆ ತಮ್ಮ ಕಲಾ ಪ್ರತಿಭೆಯನ್ನು ಸಂಪೂರ್ಣವಾಗಿ ಅನಾವರಣಗೊಳಿಸಲು ಅವಕಾಶ ನೀಡಲಾಯಿತು. ಕೆಲವು ಪ್ರಸಂಗಗಳು ಆರರಿಂದ ಎಂಟು ಗಂಟೆಗಳಿಗೂ ಹೆಚ್ಚು ಕಾಲ ನಡೆಯುವ ಮೂಲಕ ತಾಳಮದ್ದಳೆಯ ಗತ ವೈಭವವನ್ನು ನೆನಪಿಸಿತು. ತಾಳಮದ್ದಳೆ ಕೇವಲ ಮನರಂಜನೆಯ ಕಲೆಯಲ್ಲ; ಅದು ಕನ್ನಡ-ತುಳು ಸಾಂಸ್ಕøತಿಕ ಪರಂಪರೆಯ ಪ್ರಮುಖ ಅಂಗವಾಗಿದೆ. ಈ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಹಾಗೂ ಯುವಜನರಲ್ಲಿ ತಾಳಮದ್ದಳೆಯ ಬಗ್ಗೆ ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದರು.
ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ರಾಜಾ ಬಿ.ಎಸ್. ಪಾಲ್ಗೊಂಡು ಯಕ್ಷಗಾನ ಮತ್ತು ತಾಳಮದ್ದಳೆಗಳು ನಮ್ಮನ್ನು ಪೌರಾಣಿಕ ಲೋಕಕ್ಕೆ ಕೊಂಡೊಯ್ಯಲು ಕಾರಣವಾಗುತ್ತದೆ. ಶ್ರೀಮಠದಲ್ಲಿ ಲಭಿಸುತ್ತಿರುವ ಪ್ರೋತ್ಸಾಹವು ಕಲಾವಿದರನ್ನು ಮೇರುಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದರು. ಕಲಾಪೋಷಕ ಡಾ. ಹರಿಕೃಷ್ಣ ಪಾಣಾಜೆ ಮಾತನಾಡಿದರು. ಪಾರ್ತಿಸುಬ್ಬ ಪ್ರಶಸ್ತಿ ವಿಜೇತ ಖ್ಯಾತ ಸ್ತ್ರೀವೇಷಧಾರಿ ಎಂ.ಕೆ.ರಮೇಶ ಆಚಾರ್ಯ, ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಹಿಮ್ಮೇಳವಾದಕ ಪದ್ಮನಾಭ ಉಪಾಧ್ಯಾಯ, ಯಕ್ಷಗಾನ ಗುರು, ಹಿರಿಯ ಮದ್ದಳೆ ವಾದಕಿ ಪೂರ್ಣಿಮಾ ಯತೀಶ್ ರೈ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಶ್ರೀಮಠದ ಆಡಳಿತ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ಕಲಾವಿದ ವಾಸುದೇವ ರಂಗಾ ಭಟ್ ನಿರೂಪಿಸಿದರು. ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯವಾದಿ ಅರುಣ್ ಶ್ಯಾಮ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

.jpg)
