ನವದೆಹಲಿ (PTI): ಮಣಿಪುರದ ಗಾಯಕ ವಿಕ್ರಮ್ ಸಿಂಗ್ (54) ಅವರನ್ನು ದಕ್ಷಿಣ ದೆಹಲಿಯಲ್ಲಿ ಸೋಮವಾರ ಥಳಿಸಿ ಹತ್ಯೆ ಮಾಡಲಾಗಿದೆ.
'ಮೈತೇಯಿ ಸಮುದಾಯದ ಸಿಂಗ್ ಅವರು ಇಲ್ಲಿನ ಕಿಲೋಕರಿ ಗ್ರಾಮದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದರು. ಸೋಮವಾರ ಬೆಳಗಿನ ಜಾವದಲ್ಲಿ ಅವರ ಅಪಾರ್ಟ್ಮೆಂಟ್ ಬಳಿ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಧಾಬಾ ಸಿಬ್ಬಂದಿ ಮತ್ತು ಡೆಲಿವರಿ ಹುಡುಗರ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಕೋಪಗೊಂಡ ಯುವಕರು ಸಿಂಗ್ ಅವರನ್ನು ತೀವ್ರವಾಗಿ ಥಳಿಸಿದ್ದಾರೆ' ಎಂದು ಪೊಲೀಸರು ಹೇಳಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಪುತ್ರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಮೃತಪಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಸೇರಿ ಒಟ್ಟು ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದಿಂದ ಬಂದವರಾಗಿದ್ದಾರೆ.
'ಗರಿಷ್ಠ ಶಿಕ್ಷೆ': 'ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 8-9 ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ದೆಹಲಿ ಪೊಲೀಸರು ಭರವಸೆ ನೀಡಿದ್ದಾರೆ' ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
'ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕೃತ್ಯದಲ್ಲಿ ಭಾಗಿಯಾದವರಿಗೆ ಗರಿಷ್ಠ ಶಿಕ್ಷೆ ಆಗಬೇಕು. ಅದಕ್ಕಾಗಿ ಎಲ್ಲ ಆಯಾಮಗಳಲ್ಲೂ ಪ್ರಯತ್ನ ಮಾಡಬೇಕು' ಎಂದು ಹೇಳಿದ್ದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.
'ಗೃಹ ಸಚಿವಾಲಯ ಏನು ಮಾಡುತ್ತಿದೆ?'
'ಅರಾಜಕತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಮಿತ್ ಶಾ ಅವರ ಗೃಹ ಸಚಿವಾಲಯ ಏನು ಮಾಡುತ್ತಿತ್ತು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ತ್ವರಿತಗತಿಯ ವಿಚಾರಣೆ ನಡೆಸಬೇಕು ಎಂದು 'ಎಕ್ಸ್'ನಲ್ಲಿ ಆಗ್ರಹಿಸಿದ ಅವರು 'ಈಶಾನ್ಯ ರಾಜ್ಯದವರ ವಿರುದ್ಧ ಇಂಥ ಕೃತ್ಯಗಳು ಹೆಚ್ಚುತ್ತಿದೆ' ಎಂದು ಆರೋಪಿಸಿದ್ದಾರೆ. 'ಸರ್ಕಾರದ ವೈಫಲ್ಯ': 'ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿ ಮಣಿಪುರದ ಜನರು ರಾಜ್ಯದ ಒಳಗೆ ಹಾಗೂ ಹೊರಗೆ ಸಂಕಷ್ಟ ಅನುಭವಿಸುತ್ತಿದ್ದಾರೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. 'ರಾಜಕೀಯ ಬೇಡ': ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಿರಣ್ ರಿಜಿಜು 'ಈ ವಿಚಾರದಲ್ಲಿ ರಾಜಕೀಯ ಎಳೆದು ತರಬೇಕಿಲ್ಲ. ಇದರಲ್ಲಿ ಬಿಜೆಪಿ ಎಲ್ಲಿಂದ ಬಂತು? ಇಂಥ ಕೃತ್ಯಗಳಲ್ಲಿ ಯಾರೇ ಸಾವಿಗೀಡಾದರೂ ಅದು ದುರಂತವೇ. ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾತನಾಡಬೇಕೇ ಹೊರತು ರಾಜಕೀಯ ಮಾಡುವ ವಿಚಾರ ಇದಲ್ಲ' ಎಂದಿದ್ದಾರೆ.
'ರಾಹುಲ್ ಎಲ್ಲಿ ಅಡಗಿ ಕೂತಿದ್ದರು?'
'ಈಶಾನ್ಯ ರಾಜ್ಯದ ಜನರ ಮುಖವು ಚೀನಾದವರನ್ನು ಹೋಲುತ್ತದೆ ಎಂದು ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೊಡಾ ಅವರು ಹೇಳಿದಾಗ ರಾಹುಲ್ ಗಾಂಧಿ ಅವರು ಎಲ್ಲಿ ಅಡಗಿ ಕೂತಿದ್ದರು' ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. 'ಮೋದಿ ಅವರ ನಾಯಕತ್ವದಲ್ಲಿ ಪ್ರತಿ ನಾಗರಿಕನು ಸುರಕ್ಷಿತವಾಗಿದ್ದೇನೆ ಎಂದು ಭಾವಿಸುತ್ತಾನೆ ಮತ್ತು ಭಾರತೀಯ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಾನೆ' ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.

