ಕೋಲ್ಕತ್ತ: ಕೌಶಿಕಿ ಅಮಾವಾಸ್ಯೆಯ ಅಂಗವಾಗಿ ಕಾಳೀಘಾಟ್ ದೇವಾಲಯಕ್ಕೆ ಭೇಟಿ ನೀಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಕಾಳಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಸಾದವಾಗಿ ನೀಡಿದ ಮೀನನ್ನು ಸೇವಿಸಿದ್ದಾರೆ.
ದುರ್ಗಾಪೂಜೆಯ ಸಂದರ್ಭದಲ್ಲಿ ಮಾಂಸಾಹಾರ ಸೇವನೆಯನ್ನು ತ್ಯಜಿಸುವಂತೆ ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ಇತ್ತೀಚೆಗೆ ಕರೆ ನೀಡಿದ್ದರು.
ಈ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸುವೇಂದು ಅವರ ಈ ನಡೆ ಗಮನ ಸೆಳೆದಿದೆ.
ಗುರುವಾರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುವೇಂದು, ದೇವಿಗೆ ಬನಾರಸಿ ಸೀರೆಯನ್ನು ಸಮರ್ಪಿಸಿದ್ದಾರೆ. ಅದರೊಂದಿಗೆ 'ಭೋಗ್' ಆಗಿ ಮೀನನ್ನು ಅರ್ಪಿಸಿದ್ದಾರೆ. ಬಳಿಕ ದೇವಾಲಯದ ಆವರಣದಲ್ಲಿ ನೆಲದ ಮೇಲೆ ಕುಳಿತು ಪ್ರಸಾದವಾಗಿ ಮೀನನ್ನು ಸೇವಿಸಿದ್ದಾರೆ. ಇದರ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.
ಇದೀಗ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಧೀರೇಂದ್ರ ಶಾಸ್ತ್ರಿ, ಆಹಾರ ಆಯ್ಕೆಯ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಉದ್ದೇಶ ತಮ್ಮದಾಗಿರಲಿಲ್ಲ. ಅಹಿಂಸೆಯ ಸಂದೇಶವನ್ನು ಸಾರುವುದಷ್ಟೇ ತಮ್ಮ ಹೇಳಿಕೆಯ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ.
ಬಂಗಾಳದಲ್ಲಿ ಕಾಳಿ ಆರಾಧನೆಗೆ ವಿಶೇಷ ಸ್ಥಾನವಿದ್ದು, ಅನೇಕ ಕಾಳಿ ದೇವಾಲಯಗಳಲ್ಲಿ ಮೀನು ಸೇರಿದಂತೆ ವಿವಿಧ ರೀತಿಯ ಭೋಗ್ಗಳನ್ನು ದೇವಿಗೆ ಅರ್ಪಿಸುವ ಪದ್ಧತಿ ಇಂದಿಗೂ ಮುಂದುವರಿದಿದೆ.

