ನವದೆಹಲಿ: ಇಲ್ಲಿ ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಯ ಕುರಿತು ಕಾಂಗ್ರೆಸ್ ಹಿರಿಯ ನಾಯಕರಾದ ಪಿ.ಚಿದಂಬರಂ ಮತ್ತು ಶಶಿ ತರೂರ್ ನಡುವೆ ಭಿನ್ನ ನಿಲುವುಗಳು ವ್ಯಕ್ತವಾಗಿದೆ. ಇದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಆಡಳಿತಾರೂಢ ಬಿಜೆಪಿಗೆ ಅಸ್ತ್ರವಾಗಿದೆ.
ಚಿದಂಬರಂ ಹೇಳಿದ್ದೇನು
ಬ್ರಿಕ್ಸ್, ಜಿ-20, ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆ ಅಥವಾ ಕ್ವಾಡ್ ಶೃಂಗಸಭೆಗಳಿಂದ ಭಾರತಕ್ಕೆ ದೊರೆತಿರುವ ಪ್ರಯೋಜನಗಳ ಬಗ್ಗೆ ಚಿದಂಬರಂ ಪ್ರಶ್ನಿಸಿದ್ದಾರೆ. 'ಕಳೆದ ಎರಡು-ಮೂರು ಬ್ರಿಕ್ಸ್ ಸಮಾವೇಶಗಳಿಂದ ದೇಶಕ್ಕೆ ಯಾವುದೇ ಲಾಭ ಆಗಿಲ್ಲ' ಎಂದು ಕಿಡಿಕಾರಿದ್ದಾರೆ.
ಶಶಿ ತರೂರ್ ಮೆಚ್ಚುಗೆ
ಕಾಂಗ್ರೆಸ್ ಸಂಸದ ಶಶಿ ತರೂರ್ ಬ್ರಿಕ್ಸ್ ಶೃಂಗಸಭೆಯನ್ನು ಬೆಂಬಲಿಸಿದ್ದಾರೆ.
ಜಾಗತಿಕ ನಾಯಕರನ್ನು ಒಂದೇ ವೇದಿಕೆಗೆ ಆಹ್ವಾನಿಸುವುದು, ಭಾರತದ ರಾಜತಾಂತ್ರಿಕ ಸಾಮರ್ಥ್ಯ ಮತ್ತು ಹಿರಿಮೆಗೆ ಸಾಕ್ಷಿ ಎಂದು ಬಣ್ಣಿಸಿದ್ದಾರೆ.
ಬ್ರಿಕ್ಸ್ನ 11 ಸದಸ್ಯ ರಾಷ್ಟ್ರಗಳು ವಿಶ್ವದ ಬಹುತೇಕ ಜನಸಂಖ್ಯೆ ಮತ್ತು ಶೇ 41ರಷ್ಟು ಜಿಡಿಪಿಯನ್ನು ಪ್ರತಿನಿಧಿಸುತ್ತವೆ. ಇದು 'ಗ್ಲೋಬಲ್ ಸೌತ್'ಗೆ ಅತ್ಯಂತ ಮುಖ್ಯವಾದ ವೇದಿಕೆಯಾಗಿದೆ ಎಂದಿದ್ದಾರೆ.
ಇದೇ ವೇಳೆ, ರಷ್ಯಾ-ಉಕ್ರೇನ್ ಹಾಗೂ ಇರಾನ್ ಸಂಘರ್ಷದಂತಹ ವಿಷಯಗಳಲ್ಲಿ ಒಮ್ಮತ ಮೂಡದಿರುವುದು ಭಾರತಕ್ಕೆ ಇರುವ ವ್ಯಾಪಾರ ಕೊರತೆಯ ಸವಾಲುಗಳನ್ನೂ ಅವರು ಬೊಟ್ಟು ಮಾಡಿದ್ದಾರೆ.
ಕಾಂಗ್ರೆಸ್ ವಿರುದ್ಧ ಬಿಜೆಪಿಯ ವ್ಯಂಗ್ಯ
ತರೂರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರೇ ತಮ್ಮ ಪಕ್ಷದ ನಿಲುವನ್ನು ಬಯಲು ಮಾಡಿದ್ದಾರೆ ಎಂದು ಹೇಳಿದ್ದಾರೆ. ಭಾರತ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವಾಗ ಕಾಂಗ್ರೆಸ್ ಸದಾ ಅಸಮಾಧಾನಗೊಳ್ಳುವ ಸಂಬಂಧಿಕರಂತೆ ವರ್ತಿಸುತ್ತದೆ. ಅದಕ್ಕೆ 'ಫೋಮೊ' (FOMO - Fear Of Missing Out) ಕಾಯಿಲೆ ಆವರಿಸಿದೆ ಎಂದು 'ಎಕ್ಸ್' ಖಾತೆಯಲ್ಲಿ ಭಂಡಾರಿ ವ್ಯಂಗ್ಯವಾಡಿದ್ದಾರೆ.

