ನವದೆಹಲಿ: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ಪಕ್ಷದ ಎಲ್ಲಾ ಹುದ್ದೆಗಳಿಂದ ಕೆಳಗಿಳಿಯುವುದಾಗಿ ಶನಿವಾರ ಘೋಷಿಸಿದ್ದಾರೆ.
ಈಚೆಗೆ ಹರೀಶ್ ರಾವತ್ ಅವರ ಆಪ್ತ ಸಹಾಯಕನ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದರು.
ಅಪಾರ ಪ್ರಮಾಣದ ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಹರೀಶ್ ರಾವತ್ ಅವರಿಂದ ಪಕ್ಷದ ಹುದ್ದೆಗಳನ್ನು ತೊರೆಯುವ ನಿರ್ಧಾರ ಹೊರಬಿದ್ದಿದೆ.
'ನಾನೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಯಾವುದೇ ಸರ್ಕಾರಿ ಹುದ್ದೆಯಲ್ಲಿಲ್ಲ. ಆದ್ದರಿಂದ ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ!. ಹೌದು, ನಾನು ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಖಾಯಂ ಸದಸ್ಯನಾಗಿದ್ದೇನೆ. ಅತ್ಯಂತ ವಿನಮ್ರತೆಯಿಂದ ನಾನು ಈ ಎರಡೂ ಹುದ್ದೆಗಳಿಂದ ಕೆಳಗಿಳಿಯಲು ಬಯಸುತ್ತೇನೆ. ನನ್ನಿಂದಾಗಿ ಪಕ್ಷದ ಹೋರಾಟಕ್ಕೆ ಯಾವುದೇ ತೊಂದರೆಯಾಗಬಾರದು' ಎಂದು ರಾವತ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ತಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಕುರಿತಾದ ಮಾಧ್ಯಮಗಳ ವರದಿಗಳು ಸುಳ್ಳು ಎಂದು ಸ್ಪಷ್ಟಪಡಿಸಿರುವ ರಾವತ್, ನಾನು ಪಕ್ಷದ ಹುದ್ದೆಗಳಿಂದ ಕೆಳಗಿಳಿದಿದ್ದೇನೆಯೇ ಹೊರತು ಪಕ್ಷದಿಂದ ಹೊರಬಂದಿಲ್ಲ' ಎಂದಿದ್ದಾರೆ.
'ಕಾಂಗ್ರೆಸ್ ಪಕ್ಷದ ಸದಸ್ಯತ್ವವು ನನ್ನ ರಕ್ತ ಮತ್ತು ಮೂಳೆಗಳಲ್ಲಿದೆ. ಅದು ನಾನು ಯಾರೆಂಬುದನ್ನು ರೂಪಿಸಿದೆ. ಅದು ನನ್ನೊಂದಿಗೆ ಸ್ವರ್ಗಕ್ಕೆ ಹೋಗುತ್ತದೆ' ಎಂದು ಅವರು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಹರೀಶ್ ರಾವತ್ ಅವರ ಆಪ್ತ ಸಹಾಯಕ ಚಂದನ್ ಸಿಂಗ್ ಅವರ ಮನೆಯಲ್ಲಿ ಇ.ಡಿ ಅಧಿಕಾರಿಗಳು ಗುರುವಾರ ಶೋಧ ನಡೆಸಿದ್ದರು. ₹32 ಲಕ್ಷ ನಗದು ಮತ್ತು 10ಕ್ಕೂ ಹೆಚ್ಚು ಐಷಾರಾಮಿ ವಾಚ್ಗಳನ್ನು ಜಪ್ತಿ ಮಾಡಿದ್ದರು.
ಚಂದನ್ ಸಿಂಗ್ ಪ್ರಸ್ತುತ ರಾವತ್ ಅವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ 2014-17ರ ಅವಧಿಯಲ್ಲಿ ರಾವತ್ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಶೇಷ ಕರ್ತವ್ಯಾಧಿಕಾರಿ ಆಗಿಯೂ ಸೇವೆ ಸಲ್ಲಿಸಿದ್ದರು.

