ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಲಕ್ಷಾಂತರ ಜನರ ಮೇಲೆ ಹೇರಲಾಗುತ್ತಿರುವ ನ್ಯಾಯ ಸಮ್ಮತವಲ್ಲದ ಪ್ರಕ್ರಿಯೆ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಹೇಳಿದ್ದಾರೆ.
ನ್ಯಾಯಾಲಯವು ಈ ಪ್ರಕ್ರಿಯೆಯನ್ನು ಮಾನ್ಯ ಮಾಡಿದೆ ಮತ್ತು ಸರಕಾರ ಇದನ್ನು ಕಾನೂನು ಬದ್ಧ ಎಂದು ಕರೆದಿದೆ. ಆದರೆ, ಇದು ನ್ಯಾಯ ಸಮ್ಮತವಾಗಿದೆಯೇ ಎಂಬುದು ಪ್ರಶ್ನೆ ಎಂದು ಅವರು ಹೇಳಿದರು.
ಇಲ್ಲಿ ಗುರುವಾರ ಅಸೋಸಿಯೋಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಆಯೋಜಿಸಿದ್ದ ಜಗದೀಪ್ ಸಿಂಗ್ ಛೋಕರ್ ಸ್ಮರಣಾರ್ಥ ಉಪನ್ಯಾಸ ನೀಡಿ ಮಾತನಾಡಿದ ಲವಾಸಾ, ''ಇದು ಖಂಡಿತ ಕಾನೂನು ಬದ್ಧವಾಗಿದೆ. ಆದರೆ, ಇದು ನ್ಯಾಯ ಸಮ್ಮತವಾಗಿದೆಯೇ? ಇದು ಪ್ರಶ್ನೆಯಾಗಿದೆ. ಏಕೆಂದರೆ, ಇದೇ ನ್ಯಾಯದ ನಿಜವಾದ ಅರ್ಥ'' ಎಂದರು.
ಕಾನೂನುಬದ್ದ ಸಂಸ್ಥೆಗಳು, ಸಾಂವಿಧಾನಿಕ ಸಂಸ್ಥೆಗಳು ಮತ್ತು ಸರಕಾರಗಳು ತಾವು ಕಾನೂನುಬದ್ಧವಾಗಿ ಮಾಡಬಹುದಾದ್ದರಿಂದ, ಮಾಡುವುದೆಲ್ಲವೂ ಸರಿ ಎಂಬ ತತ್ವದ ಮೇಲೆ ಕಾರ್ಯನಿರ್ವಹಿಸುತ್ತಿವೆ ಎಂದು ಲವಾಸಾ ಹೇಳಿದರು.
ಎಸ್ಐಆರ್ ಪ್ರಕ್ರಿಯೆಯನ್ನು ಲಕ್ಷಾಂತರ ನಾಗರಿಕರ ಮೇಲೆ ಹೇರಲಾದ ನ್ಯಾಯಸಮ್ಮತವಲ್ಲದ ಪ್ರಕ್ರಿಯೆ ಎಂದು ಅವರು ಬಣ್ಣಿಸಿದರು. ''ಬಲವೇ ಶ್ರೇಷ್ಠ'' ಎಂಬುದು ಹಳೆಯ ಪರಿಕಲ್ಪನೆಯಾಗಿದೆ ಎಂದು ಅವರು ಹೇಳಿದರು. ಕಾನೂನಿನ ಆದೇಶವನ್ನು ಹೊಂದಿರುವ ಸಂಸ್ಥೆಗಳು ಅದರ ಮೂಲ ಆಶಯವನ್ನೂ ಎತ್ತಿ ಹಿಡಿಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ನ್ಯಾಯವೆಂದರೆ ಕೇವಲ ಕಾನೂನಿನ ಅಕ್ಷರಶಃ ಅನುಷ್ಠಾನವಲ್ಲ, ಅದರ ಆಶಯವನ್ನು ರಕ್ಷಿಸುವುದೂ ಹೌದು ಎಂದು ಅವರು ಹೇಳಿದರು.
ಎಸ್ಐಆರ್ ಅಡಿಯಲ್ಲಿ ಮಾಡಲಾಗುತ್ತಿರುವ ಎಲ್ಲವೂ ಕಾನೂನುಬದ್ಧವಾಗಿದೆ ಎಂದು ಅಧಿಕಾರಿಗಳು ವಾದಿಸಬಹುದು. ಆದರೂ ಇದು ಖಂಡಿತವಾಗಿ ನ್ಯಾಯಸಮ್ಮತವಲ್ಲ ಎಂದು ಲವಾಸಾ ಹೇಳಿದರು.
ಮತದಾರರ ಪಟ್ಟಿಯಿಂದ 13 ಕೋಟಿ ಹೆಸರುಗಳನ್ನು ಅಳಿಸಿ ಹಾಕುವುದರ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ ಅವರು, ಈ ಅಭಿಯಾನ ಮತದಾರರನ್ನು ದೂರವಿಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ಪರಿಷ್ಕರಣೆಯ ಸುತ್ತ ಹೆಚ್ಚುತ್ತಿರುವ ಆತಂಕವನ್ನು ಒತ್ತಿ ಹೇಳಿದ ಲವಾಸಾ, ಶೇಕಡಾ 33ರಷ್ಟು ಜನರು ಮತ ಚಲಾಯಿಸುವುದಿಲ್ಲ ಮತ್ತು ಇಂತಹ ದೊಡ್ಡ ಪ್ರಮಾಣದ ಬದಲವಾಣೆಗಳು ಪ್ರಜಾಪ್ರಭುತ್ವ ಪ್ರಕ್ರಿಯೆ ಬಗ್ಗೆ ನಾಗರಿಕರಿಗೆ ಮತ್ತಷ್ಟು ನಿರಾಶೆ ಉಂಟು ಮಾಡಬಹುದು ಎಂದರು.

