ಮ್ಯಾಡ್ರಿಡ್: ಸ್ಪೇನ್ನ ಕ್ಯಾನರಿ ದ್ವೀಪದ ಬಳಿ ವಲಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಅಟ್ಲಾಂಟಿಕ್ ಸಾಗರದಲ್ಲಿ ತೇಲಾಡುತ್ತ ಪತ್ತೆಯಾಗಿದ್ದು, ಅದರಲ್ಲಿದ್ದ ಐವರ ಮೃತದೇಹಗಳು ಪತ್ತೆಯಾಗಿವೆ. ದೋಣಿಯಲ್ಲಿದ್ದ 44 ಮಂದಿಯನ್ನು ರಕ್ಷಿಸಲಾಗಿದೆ. ಪ್ರಯಾಣದ ವೇಳೆ ಇನ್ನೂ 83 ಮಂದಿ ಮೃತಪಟ್ಟಿರಬಹುದು ಎಂದು ವಲಸಿಗರ ಹಕ್ಕುಗಳ ಸಂಘಟನೆ 'ವಾಕಿಂಗ್ ಬಾರ್ಡರ್ಸ್' ತಿಳಿಸಿದೆ.
ಬುಧವಾರ ಮಧ್ಯಾಹ್ನ ಗ್ರ್ಯಾನ್ ಕ್ಯಾನೇರಿಯಾ ದ್ವೀಪದ ನೈರುತ್ಯ ಭಾಗದಲ್ಲಿ, ದ್ವೀಪದಿಂದ ಸುಮಾರು 120 ಕಿ.ಮೀ. ದೂರದಲ್ಲಿ ದೋಣಿಯೊಂದು ಅಪಾಯಕರ ಸ್ಥಿತಿಯಲ್ಲಿ ತೇಲಾಡುತ್ತಿರುವುದನ್ನು ಸ್ಪೇನ್ ನ ಸಾಗರ ರಕ್ಷಣಾ ಸೇವೆಯ ವಿಮಾನ ಪತ್ತೆಹಚ್ಚಿತು. ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ರಕ್ಷಿಸಲಾದ 44 ಮಂದಿಯ ಪೈಕಿ ಮೂವರನ್ನು ಗಂಭೀರ ಆರೋಗ್ಯ ಸ್ಥಿತಿಯಲ್ಲಿ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉಳಿದ 41 ಮಂದಿಯನ್ನು ದೋಣಿಯ ಮೂಲಕ ತೀರಕ್ಕೆ ಕರೆತರಲಾಗಿದ್ದು, ಗುರುವಾರ ಮುಂಜಾನೆ ಗ್ರ್ಯಾನ್ ಕ್ಯಾನೇರಿಯಾದ ಅರ್ಗುನೆಗುಂ ಬಂದರು ತಲುಪಿದರು. ಅಲ್ಲಿ ರೆಡ್ಕ್ರಾಸ್ ಸಿಬ್ಬಂದಿ ಅವರಿಗೆ ಚಿಕಿತ್ಸೆ ಮತ್ತು ನೆರವು ನೀಡಿದರು.
ರಕ್ಷಿಸಲಾದವರೆಲ್ಲರೂ ಪುರುಷರಾಗಿದ್ದು, ಅವರಲ್ಲಿ ಅಪ್ರಾಪ್ತರೂ ಇದ್ದಾರೆ. ಅವರು ಮಾಲಿ ಅಥವಾ ಸೆನೆಗಲ್ ನವರು ಎಂದು ಕ್ಯಾನರಿ ದ್ವೀಪಗಳ ರೆಡ್ಕ್ರಾಸ್ ವಕ್ತಾರ ಜೋಸ್ ಆಯಂಟೋನಿಯೊ ರೋಡ್ರಿಗಸ್ ವೆರೋನಾ ತಿಳಿಸಿದ್ದಾರೆ. ಬದುಕುಳಿದವರು ಬಳಲಿದ ಮತ್ತು ನಿರ್ಜಲೀಕರಣಗೊಂಡ ಸ್ಥಿತಿಯಲ್ಲಿದ್ದರು.
ದೋಣಿಯಲ್ಲಿ ಆರಂಭದಲ್ಲಿ 100ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಬದುಕುಳಿದವರು ರೆಡ್ಕ್ರಾಸ್ ಸಿಬ್ಬಂದಿಗೆ ತಿಳಿಸಿದ್ದಾರೆ. ಅವರಲ್ಲಿ ಮಹಿಳೆಯರು ಮತ್ತು ಒಂದು ಮಗು ಕೂಡ ಇದ್ದವು ಎಂದು ಹೇಳಿದ್ದಾರೆ. ಪ್ರಯಾಣದ ವೇಳೆ ಕೆಲವರು ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ಸಮುದ್ರಕ್ಕೆ ಎಸೆಯಲಾಗಿತ್ತು ಎಂದು ಬದುಕುಳಿದವರು ತಿಳಿಸಿದ್ದಾರೆ.
ಬದುಕುಳಿದವರ ಪ್ರಕಾರ, ದೋಣಿ ಗಾಂಬಿಯಾದಿಂದ ಹೊರಟಿದ್ದು, ಸುಮಾರು ಒಂದು ತಿಂಗಳ ಕಾಲ ಸಮುದ್ರದಲ್ಲಿ ಸಿಲುಕಿತ್ತು. ಆಹಾರ ಮತ್ತು ನೀರು ಖಾಲಿಯಾದ ಬಳಿಕ ಕೆಲವರು ಸಮುದ್ರದ ನೀರು ಕುಡಿದು ಅಸ್ವಸ್ಥರಾಗಿದ್ದರು.
ವಲಸಿಗರ ಹಕ್ಕುಗಳ ಸಂಘಟನೆ 'ವಾಕಿಂಗ್ ಬಾರ್ಡರ್ಸ್'ನ ಸಂಸ್ಥಾಪಕಿ ಹೆಲೆನಾ ಮಲೆನೊ ಅವರ ಪ್ರಕಾರ, ಪ್ರಯಾಣದ ವೇಳೆ 83 ಮಂದಿ ಮೃತಪಟ್ಟಿದ್ದು, ಅವರಲ್ಲಿ ಮೂವರು ಮಹಿಳೆಯರು ಮತ್ತು ಒಂದು ಮಗು ಸೇರಿವೆ. ದೋಣಿ ಗಾಂಬಿಯಾದಿಂದ 27 ದಿನಗಳ ಹಿಂದೆ ಹೊರಟಿತ್ತು ಎಂದು ಅವರು ತಿಳಿಸಿದ್ದಾರೆ. ಈ ಅಂಕಿಅಂಶವನ್ನು ರಾಯಿಟರ್ಸ್ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.
ದೋಣಿಯಲ್ಲಿದ್ದ ಐವರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದರೂ, ಅವುಗಳನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಬಲವಾದ ಗಾಳಿ ಹಾಗೂ 2.5 ಮೀಟರ್ ಎತ್ತರದ ಅಲೆಗಳಿಂದಾಗಿ ಮೃತದೇಹಗಳನ್ನು ವಶಕ್ಕೆ ಪಡೆಯಲು ಸಾಧ್ಯವಾಗಲಿಲ್ಲ ಎಂದು ಸ್ಪೇನ್ನ ಸಾಗರ ರಕ್ಷಣಾ ಸೇವೆ ತಿಳಿಸಿದೆ.
ಪಶ್ಚಿಮ ಆಫ್ರಿಕಾದಿಂದ ಕ್ಯಾನರಿ ದ್ವೀಪಗಳತ್ತ ಸಾಗುವ ಅಟ್ಲಾಂಟಿಕ್ ಮಾರ್ಗವು ಯುರೋಪ್ ತಲುಪಲು ಯತ್ನಿಸುವ ವಲಸಿಗರಿಗೆ ಅತ್ಯಂತ ಅಪಾಯಕಾರಿ ಮಾರ್ಗಗಳಲ್ಲಿ ಒಂದಾಗಿದೆ.

