ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 27, 2017
ಮನುಕುಲಕ್ಕೆ ಒಳಿತಿನ ಸಂದೇಶ ನೀಡಿದ ವೇದಗಳು ಸರ್ವ ಸಿದ್ಧಾಂತಗಳ ಮೂಲ
ಎಲ್ಲಾ ನಂಬಿಕೆಗಳು, ಎಲ್ಲಾ ವಿಧದ ಜನರೂ ಈ ಸೃಷ್ಟಿಯ ಭಾಗಗಳೇ. ಅವೆಲ್ಲವನ್ನು ಒಪ್ಪಿಕೊಳ್ಳುವಂತೆ ತಿಳಿಸುತ್ತವೆ ಉಪನಿಷತ್ತುಗಳು. `ಅಜೆಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ' ಎಂದು ಹೇಳುತ್ತದೆ ಋಗ್ವೇದ. ಅಂದರೆ ಈ ಜಗದಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಒಂದೇ ಸಹೋದರರಾಗಿರುವ ನಾವು ಒಬ್ಬರು ಇನ್ನೊಬ್ಬರ ಒಳಿತಿಗಾಗಿ ಶ್ರಮಿಸುವಂತಾಗಬೇಕು ಎಂದರ್ಥ.
ಹಾಗೇನೇ `ಜನಂ ಬಿಭ್ರತೀ ಬಹುಧಾ ವಿವಾಚಸಂ ನಾನಾ ಧಮರ್ಾಣಂ ಪೃಥವೀ ಯಥೌಕಸಮ್, ಸಹಸ್ರಂಧರಾ ದ್ರವಿಣಸ್ಯ ಮೇ ದುಹಾಂ ಧ್ರುವೇವ ಧೇನುರನಪಸ್ಫುರಂತೀ' ಎಂದು ಹಾರೈಸಬೇಕು ಎನ್ನುತ್ತದೆ ಅಥರ್ವಣ ವೇದ. ಅಂದರೆ ವಿವಿಧ ಭಾಷೆಗಳ ವಿವಿಧ ಮತಗಳ ಬಹುವಿಧದ ಜನರಿಗೆಲ್ಲಾ ಒಂದೇ ಮನೆಯಂತೆ ಆಶ್ರಯ ನೀಡಿರುವ ಈ ಭೂಮಿ, ಹಾಲನ್ನೀಡುವ ಹಸುವಿನಂತೆ ಸುಖ ಸಂಪತ್ತನ್ನು ಎಲ್ಲರಿಗೂ ಧಾರೆಯೆರೆಯುತ್ತಿರಲಿ ಎಂದರ್ಥ.
ಮನುಕುಲದ ಒಳಿತಿಗಾಗಿ ಇಂತಹ ಅದೆಷ್ಟೋ ಅಮೃತ ನುಡಿಗಳನ್ನು ಒಳಗೊಂಡಿರುವ ವೇದಗಳನ್ನು ಕೆಲವರು ಅಪಾರ್ಥಗೊಳಿಸಲೆಂದೇ ವ್ಯಾಖ್ಯಾನಿಸಲು ಮುಂದಾದದ್ದು ಇದೆ. ಇನ್ನು ಕೆಲವರಿಗೆ ವೇದಗಳು ಅರ್ಥವಾಗದೇ ಅಪಾರ್ಥಗೊಂಡಿದ್ದೂ ಇದೆ. ನಮ್ಮ ಪೂರ್ವಜನರು ನಮಗೆ ಪ್ರಕೃತಿಯಿಂದ ಆರಿಸಿಕೊಟ್ಟ ಅಕ್ಕಿ, ಗೋಧಿ, ರಾಗಿಗಳಷ್ಟೇ ಸಮರ್ಥವಾಗಿವೆ ಅವರು ನಮಗೆ ನೀಡಿದ ಜ್ಞಾನ.
ಅಕ್ಕಿ ಗೋಧಿ ರಾಗಿಗಳಿಂದ ಅದೆಷ್ಟೋ ಬಗೆಯ ಆಹಾರಗಳನ್ನು ರಚಿಸಿಕೊಂಡು ತಮ್ಮ ತಮ್ಮ ಇಷ್ಟದ ತಿನಿಸುಗಳ ವಿಶೇಷತೆಯ ಬಗ್ಗೆ ಮಾತಿಗಿಳಿಯಬಹುದು. ಅನ್ನ, ಇಡ್ಲಿ, ದೋಸೆ ಇತ್ಯಾದಿಗಳನ್ನು ಇಷ್ಟಪಡುವವರನ್ನು ನೀವು ಅಕ್ಕಿಯನ್ನೇ ತಿನ್ನುತ್ತಿದ್ದೀರಿ ಎಂದರೆ ಅವರು ಆ ಮಾತನ್ನು ಇಷ್ಟಪಡುವುದಿಲ್ಲ. ಹಾಗೇನೇ ವೇದಗಳು ನಮ್ಮ ಈ ಭೂಮಿಯಲ್ಲಿ ಲಭ್ಯವಿರುವ ಅತ್ಯಂತ ಪುರಾತನ ಗ್ರಂಥಗಳು ಹಾಗೂ ಇತರ ಎಲ್ಲಾ ಸಿದ್ಧಾಂತಗಳ ಮೂಲವೂ ಆಗಿವೆ. ಆದರೆ ನಾವು ಅದನ್ನು ಒಪ್ಪಿಕೊಳ್ಳುವಂತೆ ಬದುಕಿನ ಸನ್ನಿವೇಷಗಳು ಇರುವುದಿಲ್ಲ. ಅದೇ ಸೃಷ್ಟಿಯ ವಿಶೇಷ.
ತೀರ್ಥರಾಮ ವಳಲಂಬೆ (`ಪುನರ್ಜನ್ಮ ಮತ್ತು ಪುರುಷಾರ್ಥ' ಗ್ರಂಥದಿಂದ)





