ಎಡನೀರು ಶ್ರೀಗಳಿಗೆ ಜಸ್ಟೀಸ್ ವಿ.ಆರ್.ಕೃಷ್ಣ ಅಯ್ಯರ್ ಪ್ರಶಸ್ತಿಯ ಅಭಿನಂದನೆ-ಪ್ರಶ್ತಿಯ ಮೊತ್ತ ಪರಿಹಾರ ನಿಧಿಗೆ
0
ಡಿಸೆಂಬರ್ 17, 2018
ಬದಿಯಡ್ಕ: ತಿರುವನಂತಪುರದ ರಾಜ್ಯ ಕಾನೂನು ಸಲಹೆ ಮತ್ತು ನೆರವು ಹಾಗೂ ಅಭಿವೃದ್ದಿ ಟ್ರಸ್ಟ್ ಪ್ರತಿವರ್ಷ ಕೊಡಮಾಡುವ ವಿಶಿಷ್ಟ ಕಾನೂನು ಸಾಧನಾಶೀಲರಿಗಿರುವ ಜಸ್ಟೀಸ್ ವಿ.ಆರ್.ಕೃಷ್ಣ ಅಯ್ಯರ್ ವಾರ್ಷಿಕ ಪ್ರಶಸ್ತಿ-2018 ನ್ನು ಭಾನುವಾರ ಗೌರವಾಭಿನಂದನೆಗಳೊಂದಿಎ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳಿಗೆ ಅರ್ಪಿಸಲಾಯಿತು.
ಭಾನುವಾರ ಸಂಜೆ ತಿರುವನಂತಪುರದ ರಾಜ್ಯ ಸೆಕ್ರಟರಿಯೇಟ್ ಸಮೀಪದ ಅಧ್ಯಾಪಕ ಭವನ ಸಭಾಂಗಣದಲ್ಲಿ ನಡೆದ ಗೌರವಾಭಿನಂದನಾ ಕಾರ್ಯಕ್ರಮದಲ್ಲಿ ರಾಜ್ಯಪಾಲ ಜಸ್ಟೀಸ್ ಪಿ.ಸದಾಶಿವಂ ಅವರು ಶ್ರೀಮದ್ ಎಡನೀರು ಮಠಾಧೀಶರಿಗೆ ಪ್ರಸ್ತುತ ಸಾಲಿನ ಜಸ್ಟೀಸ್ ವಿ.ಆರ್.ಕೃಷ್ಣ ಅಯ್ಯರ್ ವಾರ್ಷಿಕ ಪ್ರಶಸ್ತಿ-2018 ಸಮರ್ಪಿಸಿ ಅಭಿನಂದಿಸಿದರು.ಹಿರಿಯ ನ್ಯಾಯಾಧೀಶ ಶಾಹಿದ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪ್ರೊ.ಡಾ. ಎನ್.ಕೆ.ಜಯಕುಮಾರ್, ಪತ್ತನಂತಿಟ್ಟ ಜಿಲ್ಲಾ ನ್ಯಾಯಾಧೀಶೆ ಸುಲೇಖಾ ಎಂ, ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ನ್ಯಾಯವಾದಿ ಜೋಸೆಫ್ ಜೋನ್ ಉಪಸ್ಥಿತರಿದ್ದು ಶುಭಹಾರೈಸಿದರು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ದೇವನ್ ರಾಮಚಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾನೂನು ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಸಂತೋಷ್ ಕುಮಾರ್ ಪಿ, ಕಾರ್ಯದರ್ಶಿ ನ್ಯಾಯವಾದಿ ಕೆ.ಪ್ರೇಮ್ ಕುಮಾರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 1.30ಕ್ಕೆ ಕಾನೂನು ನೆರವುಗಳ ವಿಶೇಷೋಪನ್ಯಾಸ ವಿಚಾರ ಸಂಕಿರಣ ನಡೆಯಿತು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ದೇವನ್ ರಾಮಚಂದ್ರನ್ ಉದ್ಘಾಟಿಸಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪ್ರೊ.ಡಾ. ಎನ್.ಕೆ.ಜಯಕುಮಾರ್ ವಿಶೇಷೋಪನ್ಯಾಸ ನೀಡಿದರು. ಕಾನೂನು ಟ್ರಸ್ಟ್ನ ನ್ಯಾಯವಾದಿ ಜಯಕೃಷ್ಣ ಡಿ ವಿಚಾರ ಸಂಕಿರಣ ಸಂಯೋಜಕರಾಗಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಶ್ರೀಗಳಿಗೆ ನೀಡಲಾದಗೌರವ ಧನವನ್ನು ಶ್ರೀಗಳು ರಾಜ್ಯ ನೆರೆಪರಿಹಾರ ನಿಧಿಗೆ ಹಸ್ತಾಂತರಿಸಿದರು.


