ಮುಳಿಯಾರು : ಷಷ್ಠಿ ಮಹೋತ್ಸವ ಸಂಪನ್ನ
0
ಡಿಸೆಂಬರ್ 17, 2018
ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವವು ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಅರವತ್ ಶ್ರೀ ಪದ್ಮನಾಭ ತಂತ್ರಿ ಅವರಿಂದ ವಿವಿಧ ಧಾರ್ಮಿಕ ಕಾರ್ಯಗಳು ಸಾಂಗವಾಗಿ ಜರಗಿತು. ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ಉಪಾಸನೆಯು ಉತ್ಸವಕ್ಕೆ ಮೆರಗನ್ನು ನೀಡಿತು. ರಾತ್ರಿ ಶ್ರೀ ಭೂತಬಲಿ, ಕೋಟೂರಿಗೆ ಕಟ್ಟೆ ಸವಾರಿಯಾಗಿ ಹಿಂದುರುಗಿ ಬಂದ ಬಳಿಕ ಕಟ್ಟೆಪೂಜೆ, ರಾಜಾಂಗಣದಲ್ಲಿ ನೃತ್ಯ ಸೇವೆ ಜರಗಿತು. ಉತ್ಸವದ ಅಂಗವಾಗಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿಯಿಂದ ಬಯಲಾಟ ಸೇವೆಯು ಜರಗಿತು.
ಉತ್ಸವದ ಅಂಗವಾಗಿ ದ್ವಿತೀಯ ದಿನ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ ಮತ್ತು ಪ್ರಸಾದ ಭೋಜನ ಜರಗಿತು. ಮಧ್ಯಾಹ್ನ ವಿಷ್ಣುಮೂರ್ತಿ ದೈವದ ಕೋಲವು ಜರಗಿ ದೈವಾರಾಧನೆ ಸಂಪನ್ನವಾಯಿತು.
ಗಿರೀಶ ಅಡಿಗ ಕರ್ಚೇರಿ ಅವರಿಂದ ದೇವರ ನೃತ್ಯ ಸೇವೆ ಮತ್ತು ಕೃಷ್ಣ ಹೊಳ್ಳ ಬಾರೆ ಅವರಿಂದ ದರ್ಶನ ಬಲಿ ಜರಗಿತು. ರಾತ್ರಿ ರಂಗಪೂಜೆ, ಬಳಿಕ ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಿಂದ ವೇಣುಗೋಪಾಲ ತತ್ವಮಸಿ ಪ್ರಾಯೋಜಕತ್ವದಲ್ಲಿ ಕುಮಾರ ವಿಜಯ ಕಥಾಭಾಗದ ಯಕ್ಷಗಾನ ಬಯಲಾಟ ನಡೆಯಿತು. ಕ್ಷೇತ್ರ ಪಾರಂಪರ್ಯ ಆಡಳಿತ ಮೊಕ್ತೇಸರ ಎನ್.ಸುಬ್ರಾಯ ಬಳ್ಳುಳ್ಳಾಯ ನೇತೃತ್ವ ವಹಿಸಿದರು. ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಿಸಿದರು. ಶ್ರೀ ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಮಯ್ಯ ಅವರು ವೈದಿಕ ವಿಭಾಗ ಕಾರ್ಯ ನಿರ್ವಹಣೆಯಲ್ಲಿ ಸಹಕರಿಸಿದರು.



