ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆ. 18 ರಿಂದ 24ರ ವರೆಗೆ ನಡೆಯುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಮುಂಬಯಿ ಸಮಿತಿಯ ಸಿದ್ಧತಾ ಸಭೆಯು ಇತ್ತೀಚೆಗೆ ಮುಂಬಯಿಯ ಮುಲುಂದ್ ನಲ್ಲಿ ನಡೆಯಿತು.
ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹೊಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ, ವೇದಮೂರ್ತಿ ಹರಿನಾರಾಯಣ ಮಯ್ಯ ಕುಂಬಳೆಯವರ ಉಪಸ್ಥಿತಿಯಲ್ಲಿ ಥಾಣೆಯ ಚೆಕ್ನಾಕದ ಮುಳುಂಡಿನ ಶ್ರೀನವೋದಯ ಕನ್ನಡ ಸೇವಾ ಸಂಘ ಶಿವಾಜಿನಗರದಲ್ಲಿ ಜರುಗಿದ ಸಭೆಯಲ್ಲಿ ಕೇಂದ್ರ ಸರಕಾರದ ಆಯುಷ್ ಖಾತೆ ಸಚಿವ ಶ್ರೀಪಾದ ಯಸ್ಸೋ ನಾಯಕ್ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮೊದಲಿಗೆ ಭಜನೆ, ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಹಾಗೂ ಶ್ರೀಮಹಾವಿಷ್ಣುವಿಗೆ ಪೂಜಾಕಾರ್ಯಕ್ರಮಗಳು ನಡೆದವು.
ಸಭಾಕಾರ್ಯಕ್ರಮದಲ್ಲಿ ಯಾಗ ಪ್ರಧಾನ ಸಮಿತಿಯ ಗೌರವ ಅಧ್ಯಕ್ಷ ಕೇಂದ್ರ ಸಚಿವರು ಮಾತನಾಡಿ ಎಲ್ಲೆಡೆ ಸಂಸ್ಕ್ರತಿಯನ್ನು ಪಸರಿಸುವ ಈ ಮಹತ್ತರ ಸೋಮಯಾಗದಿದ ದೇಶ ಸುಭಿಕ್ಷವಾಗಲಿ,ಎಲ್ಲೆಡೆ ಸುಖ,ಶಾಂತಿ ಉಂಟಾಗಲಿ ಎಂದು ಹಾರೈಸಿದರು. ಕೊಂಡೆವೂರು ಶ್ರೀಗಳು ಮಾತನಾಡಿ ಈ ವಿಶಿಷ್ಟ ಯಾಗದಲ್ಲಿ ಪಾಲ್ಗೊಳ್ಳುವುದು ನಮಗೆ ದೊರಕಿದ ಸೌಭಾಗ್ಯ, ನಾವೆಲ್ಲರೂ ಸರ್ವ ರೀತಿಯಿಂದಲೂ ಯಾಗದಲ್ಲಿ ಸೇವೆ ಸಲ್ಲಿಸಿ ಯಜ್ಞೇಶ್ವರನ ಕ್ರಪೆಗೆ ಪಾತ್ರರಾಗೋಣ ಎಂದರಲ್ಲದೆ ಯಾಗ, ಶ್ರೀವಿಷ್ಣುಸಹಸ್ರನಾಮ ಪಾರಾಯಣದ ಮಹತ್ತ್ವವನ್ನು ವಿವರಿಸಿದರು. ನಡೆಯುತ್ತಿರುವ ಯಾಗ ಪೂರ್ವಸಿದ್ಧತೆಯ ಬಗ್ಗೆ ತಿಳಿಸಿದರು. ಆಮಂತ್ರಣ ಪತ್ರಿಕೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.
ಯಾಗ ಪ್ರಧಾನ ಸಮಿತಿಯ ಅಧ್ಯಕ್ಷ ಕುಸುಮೋದರ ಡಿ.ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಧರ್ಮಪಾಲ ಯು ದೇವಾಡಿಗ ಸ್ವಾಗತಿಸಿ, ಯಾಗದ ಮುಂಬಯಿ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಕೋಟ್ಯಾನ್ ನಿರೂಪಿಸಿ, ವಂದಿಸಿದರು.



