ಅಯೋಧ್ಯಾ: ಅಯೋಧ್ಯೆ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಮುಂದೂಡಲ್ಪಡುತ್ತಿದ್ದು, ಜ.29 ಕ್ಕೆ ನಿಗದಿಯಾಗಿದ್ದ ವಿಚಾರಣೆ ಮತ್ತೆ ಮುಂದೂಡಲಾಗಿದೆ.
ಪ್ರಕರಣವನ್ನು ಪಂಚಸದಸ್ಯ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿದ್ದು, ನ್ಯಾಯಾಧೀಶರ ಅಲಭ್ಯತೆಯ ಕಾರಣದಿಂದಾಗಿ ಜ.29 ರ ವಿಚಾರಣೆಯನ್ನು ಮುಂದೂಡಲಾಗಿದೆ. ಜ.29 ರಂದು ನ್ಯಾ. ಬೋಬ್ಡೆ ಲಭ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದ ಪೀಠ ಜ.29 ರಂದು ನಡೆಯಬೇಕಿದ್ದ ವಿಚಾರಣೆಯನ್ನು ಮುಂದೂಡಿದೆ.
ನ್ಯಾ.ಯು.ಯು ಲಲಿತ್ ಅವರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಕಾರಣದಿಂದಾಗಿ ಜ.25 ರಂದು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಾಂವಿಧಾನಿಕ ಪೀಠವನ್ನು ಪುನಾರಚಿಸಲಾಗಿತ್ತು. ಹೊಸ ಪೀಠವನ್ನು ರಚಿಸಿದಾಗ ನ್ಯಾ. ಎನ್ ವಿ ರಮಣ ಅವರನ್ನೂ ಕೈಬಿಡಲಾಗಿತ್ತು.


